ಪಟ್ಟಾಭಿರಾಮರೆಡ್ಡಿ ಅವರು ‘ಸಂಸ್ಕಾರ’ ಚಿತ್ರದಿಂದ ಚಲನಚಿತ್ರರಂಗದಲ್ಲಿ ಅಜರಾಮರರಾಗಿದ್ದಾರೆ. ಡಾ. ಯು. ಆರ್. ಅನಂತಮೂರ್ತಿ ಅವರ ಕ್ರಾಂತಿಹುಟ್ಟಿಸಿದ ಕನ್ನಡದ ‘ಸಂಸ್ಕಾರ’ ಕತೆಗೆ ತಮ್ಮ ಪ್ರೀತಿಯ ಮಡದಿಯ ಒತ್ತಾಸೆಯ ಮೇರೆಗೆ ಚಿತ್ರ ನಿರ್ದೇಶನ, ನಿರ್ಮಾಣಗಳಿಗೆ ಇಳಿದ ಪಟ್ಟಾಭಿರಾಮರೆಡ್ಡಿ ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯಾದ ಸ್ವರ್ಣಕಮಲವನ್ನು ಪಡೆಯುವಲ್ಲಿ ಸತ್ಯಜಿತ್ ರೇ ಅವರ ಚಿತ್ರವನ್ನು ಕೂಡ ಹಿಂದೆ ಹಾಕಿ ಹೊಸ ಚಿತ್ರಗಳ ಅಲೆಗೆ ನಾಂದಿ ಹಾಡಿಬಿಟ್ಟರು. ಆನಂತರದಲ್ಲಿ ಕನ್ನಡ ಚಿತ್ರರಂಗ ಹಲವಾರು ಮಹತ್ವದ ಚಿತ್ರಗಳನ್ನು ನಿರಂತರವಾಗಿ ನೀಡುತ್ತ ಬಂದಿದ್ದು ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ್, ಶೇಷಾದ್ರಿ ಅಂತಹ ಉತ್ಕೃಷ್ಟ ನಿರ್ದೇಶಕರನ್ನು ಭಾರತೀಯ ಕಲಾತ್ಮಕ ಚಿತ್ರಗಳಿಗೆ ಕೊಡುಗೆಯಾಗಿ ನೀಡಿದೆ.
1971ರಲ್ಲಿ ಸಂಸ್ಕಾರ ಒಂದು ರೀತಿಯಲ್ಲಿ ವಿಶಿಷ್ಟ ಶಕ್ತಿಗಳ ಸಂಗಮವಾಗಿತ್ತು. ಪಟ್ಟಾಭಿ ಅವರು ಕನ್ನಡದ ಪರಿಚಯ ಹೊಂದಿಲ್ಲದೆ ಕೊಲಂಬಿಯಾದಲ್ಲಿ ತರಬೇತಿ ಪಡೆದು ಬಂದವರು. ಗಿರೀಶ್ ಕಾರ್ನಾಡ್ ಅವರು ಆಕ್ಸ್ ಫರ್ಡ್ನಲ್ಲಿ ಓದಿ ಆಗತಾನೆ ತಾಯ್ನಾಡಿಗೆ ಹಿಂದಿರುಗಿ ಬಂದಿದ್ದರು. ಗಿರೀಶ್ ಕಾರ್ನಾಡರು ತಮ್ಮ ಆತ್ಮ ಚರಿತ್ರೆಯಾದ ‘ಆಡಾಡತ ಆಯುಷ್ಯ’ ಕೃತಿಯಲ್ಲಿ ‘ಸಂಸ್ಕಾರ’ದ ಕಥೆಯಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದು ಹೇಳುತ್ತಾ, ಇಂತಹ ಸೊಗಸಾದ ಕೃತಿಬರೆದ ಯು.ಆರ್. ಅನಂತಮೂರ್ತಿ ಅವರ ಬಗ್ಗೆ ಹೊಟ್ಟೆ ಕಿಚ್ಚು ಪಡುವಷ್ಟು ಅಂದಿನ ದಿನದಲ್ಲಿ ಆತನ ಬಗ್ಗೆ ಅಸೂಯೆ ಮೂಡಿತ್ತು ಎಂದು ‘ಸಂಸ್ಕಾರ’ ಕೃತಿಯನ್ನು ಆತ್ಮೀಯವಾಗಿ ಶ್ಲಾಘಿಸಿದ್ದಾರೆ. ಈ ಚಿತ್ರದ ಛಾಯಾಗ್ರಾಹಕನಾದರೋ ಟಾಮ್ ಕೋವನ್ ಎಂಬ ಆಸ್ಟ್ರೇಲಿಯಾದ ಪ್ರಸಿದ್ಧ ತಂತ್ರಜ್ಞ. ಇಲ್ಲಿನ ಕಲಾ ಪ್ರೀತಿಯಿಂದ ಕೆಲಸ ಮಾಡಲು ನಿಂತ. ಈ ಚಿತ್ರದ ಸಂಕಲನಕ್ಕೆ ಜೊತೆ ನಿಂತವ ಸ್ಟೀವನ್ ಕಾರ್ಟಾವ್ ಎಂಬವ ಆಂಗ್ಲ ವ್ಯಕ್ತಿ. ಸಂಗೀತ ನೀಡಿದವರು ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಸರೋದ್ ವಾದಕರಾದ ರಾಜೀವ್ ತಾರಾನಾಥ್. ವಾಸುದೇವ್ ಅವರು ಕಲಾನಿರ್ದೆಶನದ ಹೊಣೆ ಹೊತ್ತುಕೊಂಡರು. ಪಟ್ಟಾಭಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಮತ್ತು ಗಿರೀಶ್ ಕಾರ್ನಾಡ್ ಪ್ರಮುಖ ಪಾತ್ರ ನಿರ್ವಹಿಸಿದ ಈ ಚಿತ್ರಕ್ಕೆ ಗಿರೀಶ್ ಕಾರ್ನಾಡ್ ಚಿತ್ರಕಥೆ ರಚಿಸಿದ್ದರು.ಈ ಚಿತ್ರ ಒಂದು ಜನಾಂಗದ ತೀವ್ರ ಪ್ರತಿರೋಧ, ಸೆನ್ಸಾರ್ ಮಂಡಳಿಯ ಕಿರುಕುಳ, ಭಾರತ ಸರ್ಕಾರದ ನಿಷೇಧ ಇತ್ಯಾದಿ ಪರೀಕ್ಷೆಗಳನ್ನು ದಾಟಿ ವಿಮರ್ಶಕರ ಹಾಗೂ ಪ್ರೇಕ್ಷಕವರ್ಗದ ಮೆಚ್ಚುಗೆ ಪಡೆದು ಅಪಾರ ಯಶಸ್ಸು ಕೂಡಾ ಗಳಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: