ಕಡುಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿಂದು ಗ್ಯಾಸ್ಟ್ರೋ ಎಂಟ್ರಾಲಜಿ ವಿಜ್ಞಾನಗಳ ಸಂಸ್ಥೆ ಮತ್ತು ಅಂಗಾಂಗ ಕಸಿ ಮಾಡುವ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಉಚಿತವಾಗಿ ಅಂಗಾಂಗ ಕಸಿ ಚಿಕಿತ್ಸೆ ನೀಡುವ ಮೂಲಕ ಇತರೆ ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡವರಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳುವುದು ಕಷ್ಟ. ಶ್ರೀಮಂತರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಆದರೆ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಡವರ ಕುಟುಂಬವನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಉಚಿತ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ . ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿದ್ದಾರೆ. ಅದರ ಸದ್ಬಳಕೆಯನ್ನು ಕರ್ನಾಟಕ ಮಾಡಿಕೊಂಡಿದೆ. ಸಮಾಜ ಹಾಗೂ ನಾಗರಿಕರು ಆರೋಗ್ಯವಂತರಾಗಿದ್ದಾಗ ದೇಶವು ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಇನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ ,ಅಂಗಾಂಗ ದಾನದ ಬಗ್ಗೆ ಜನರಲ್ಲಿ ಇನ್ನು ಮೂಢನಂಬಿಕೆ ದೂರ ಸರಿದಿಲ್ಲ. ಶೇ.0.3ರಷ್ಟು ಜನರು ಮಾತ್ರ ದೇಶದಲ್ಲಿ ಅಂಗಾಗ ದಾನಕ್ಕೆ ಮುಂದಾಗಿದ್ದಾರೆ. ಅಂಗಾಂಗ ದಾನದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಂಗಾಂಗ ಕಸಿ ಪ್ರಕ್ರಿಯೆ ಸಾಕಷ್ಟು ದುಬಾರಿಯಾಗಿದ್ದು, ರಾಜ್ಯದಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಭಾರತದಲ್ಲಿ ಐದು ಲಕ್ಷ ಜನರು ಅಂಗಾಂಗ ಕೊರತೆಯಿಂದ ಮೃತರಾಗುತ್ತಿದ್ದಾರೆ. ಹೀಗಾಗಿ ಮೃತರಾದ ನಂತರ ದೇಹ ದಾನ ಮಾಡಬೇಕಾದ ಅರಿವು ಮೂಡಿಸಬೇಕು ಎಂದರು.
40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಆಸ್ಪತ್ರೆಯಲ್ಲಿ 120 ಹಾಸಿಗೆಗಳ ಸೌಲಭ್ಯವಿದೆ. ಕ್ಯಾನ್ಸರ್, ಲಿವರ್ ಕಸಿ, ಬೇರಿಯಾಟ್ರಿಕ್ ಸರ್ಜರಿ, ಲಾಪ್ರೋಸ್ಕೋಪಿಕ್ ಸರ್ಜರಿ, ರೊಬೊಟಿಕ್ ಶಸ್ತ್ರ ಚಿಕಿತ್ಸೆ ಮೊದಲಾದ ಸೌಕರ್ಯವಿದೆ ಎಂದು ಹೇಳಿದರು.
ಲಿವರ್ ಸೇರಿದಂತೆ ಯಾವುದೇ ಅಂಗಾಂಗ ಕಸಿಯನ್ನು ಪರಿಶಿಷ್ಟ ಜಾತಿ/ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಕಲಬುರಗಿ, ಹುಬ್ಬಳ್ಳಿ, ಮೈಸೂರು ಸೇರಿದಂತೆ ಇತರೆ ಕಡೆಗಳಲ್ಲಿಯೂ ಅಂಗಾಗ ದಾಸ್ತಾನು ಮಾಡುವ ವ್ಯವಸ್ಥೆ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಿದರು.