ಸಿನಿಮಾ ರಂಗ ಅತ್ಯಂತ ವೃತ್ತಿಪರತೆ ಬೇಡುತ್ತದೆ. ವೃತ್ತಿಪರರಲ್ಲದವರು ಹಣ ಕಳೆದುಕೊಳ್ಳುತ್ತಾರೆ, ಹೆಸರು ಕೆಡಿಸಿಕೊಳ್ಳುತ್ತಾರೆ, ಉದ್ಯಮದಿಂದಲೇ ಹೊರ ಬೀಳುತ್ತಾರೆ.
ಸಿನಿಮಾ ರಂಗದಲ್ಲಿ ಬೇಗನೆ ಹಣ, ಖ್ಯಾತಿ ಬಂದು ಬಿಡುತ್ತದಾದ್ದರಿಂದ ಹಲವು ಯುವ ನಟರು ಹಣ ಖ್ಯಾತಿಯ ಅಹಂ ಅನ್ನು ತಲೆಗೇರಿಸಿಕೊಂಡು ವೃತ್ತಿಪರತೆ ಮರೆತು ವರ್ತಿಸುತ್ತಾರೆ.
ಇಂಥಹವರ ಸಾಲಿಗೆ ಬಾಲಿವುಡ್ನ ಯುವ ನಟ ಕಾರ್ತಿಕ್ ಆರ್ಯನ್ ಸೇರಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೆ ವೃತ್ತಿಪರತೆ ಕೊರತೆಯ ಕಾರಣದಿಂದಲೇ ನಿರ್ಮಾಪಕ ಕರಣ್ ಜೋಹರ್ ತಮ್ಮ ಸಿನಿಮಾದಿಂದಲೇ ಕಾರ್ತಿಕ್ ಆರ್ಯನ್ಗೆ ಕೋಕ್ ನೀಡಿದ್ದರು. ಇನ್ನು ಕೆಲವು ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಕಾರ್ತಿಕ್ ಆರ್ಯನ್ ಅನ್ನು ಸಿನಿಮಾದಿಂದ ಹೊರಗಟ್ಟಿದ್ದವು. ಇದೀಗ ಮತ್ತೊಬ್ಬ ನಿರ್ಮಾಪಕರು ಕಾರ್ತಿಕ್ಗೆ ವೃತ್ತಿಪರತೆ ಇಲ್ಲ ಎಂದಿದ್ದಾರೆ.
ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಸಹನಿರ್ಮಾಪಕರಾಗಿರುವ ‘ಶೆಹಜಾದ’ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದು. ‘ಶೆಹಜಾದಾ’ ಸಿನಿಮಾವು ತೆಲುಗಿನ ‘ಅಲಾ ವೈಕುಂಟಪುರಂಲೋ’ ಸಿನಿಮಾದ ರೀಮೇಕ್ ಆಗಿದೆ. ಆದರೆ ಕೆಲವು ದಿನಗಳ ಹಿಂದೆ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಡಬ್ ವರ್ಷನ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಬಗ್ಗೆ ಸುದ್ದಿ ಹರಡಿತ್ತು. ಕೊನೆಗೆ ಅಲ್ಲು ಅರವಿಂದ್ ಪ್ರಯತ್ನದಿಂದ ಸಿನಿಮಾ ಬಿಡುಗಡೆ ರದ್ದಾಯಿತು. ಈ ಬಗ್ಗೆ ನಿರ್ಮಾಪಕ ಮನೀಶ್ ಶಾ ಮಾತನಾಡಿದ್ದಾರೆ.
ಸಿನಿಮಾದಿಂದ ಹೊರ ಹೋಗುತ್ತೇನೆ ಎಂದಿದ್ದ ಕಾರ್ತಿಕ್
‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ವರ್ಷನ್ ಚಿತ್ರಮಂದಿರದಲ್ಲಿ ಬಿಡುಗಡೆ ಆದರೆ ನಾನು ‘ಶೆಹಜಾದ’ ಸಿನಿಮಾದಿಂದ ಹೊರಗೆ ಹೋಗುತ್ತೇನೆ ಎಂದು ಕಾರ್ತಿಕ್ ಆರ್ಯನ್ ಹೇಳಿದ್ದ, ಒಂದೊಮ್ಮೆ ಶೆಹಜಾದಾ ಸಿನಿಮಾದಿಂದ ಕಾರ್ತಿಕ್ ಹೊರಗೆ ಹೋಗಿದ್ದರೆ ನಿರ್ಮಾಪಕರಿಗೆ ಕನಿಷ್ಟ 40 ಕೋಟಿ ನಷ್ಟವಾಗುತ್ತಿತ್ತು. ಸಿನಿಮಾದಿಂದ ಹೊರಗೆ ನಡೆಯುತ್ತೇನೆ ಎಂದು ನಿರ್ಮಾಪಕರನ್ನು ಹೆದರಿಸಿದ ಕಾರ್ತಿಕ್ ಆರ್ಯನ್ ವರ್ತನೆ ಸರಿಯಿಲ್ಲ. ಕಾರ್ತಿಕ್ ಅವರದ್ದು ವೃತ್ತಿಪರ ನಡೆಯಲ್ಲ” ಎಂದು ನಿರ್ಮಾಪಕ ಮನೀಷ್ ಶಾ ಹೇಳಿದ್ದಾರೆ.
ಡಬ್ಬಿಂಗ್ಗಾಗಿ ಎರಡು ಕೋಟಿ ಖರ್ಚು ಮಾಡಿದ್ದೆ: ಮನೀಶ್
”ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಡಬ್ಗೆ ನಾನು ಎರಡು ಕೋಟಿ ಹಣ ಖರ್ಚು ಮಾಡಿದ್ದೆ. ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೆ. ಆದರೆ ಕಾರ್ತಿಕ್ ಆರ್ಯನ್ ಸಿನಿಮಾದಿಂದ ಹೊರಗೆ ಹೋಗುತ್ತೇನೆ ಎಂದಿದ್ದರಿಂದ ನಾನು ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ವರ್ಷನ್ ಅನ್ನು ಬಿಡುಗಡೆ ಮಾಡಲಿಲ್ಲ. ಈ ಕಾರ್ಯವನ್ನು ನಾನು ಕಾರ್ತಿಕ್ಗಾಗಿ ಮಾಡಲಿಲ್ಲ ಬದಲಿಗೆ ನನ್ನ ಗೆಳೆಯರಾದ ಅಲ್ಲು ಅರವಿಂದ್ಗಾಗಿ ಮಾಡಿದೆ. ಕಾರ್ತಿಕ್ ನನಗೆ ಯಾರೂ ಅಲ್ಲ. ಅಲ್ಲು ಅರವಿಂದ್ಗೆ ನಷ್ಟವಾಗುವುದು ನನಗೆ ಇಷ್ಟವಿರಲಿಲ್ಲ” ಎಂದು ಮನೀಶ್ ಶಾ ಹೇಳಿದ್ದಾರೆ.
ಹಿಂದಿ ಡಬ್ಬಿಂಗ್ ಹಕ್ಕು ಪಡೆದಿದ್ದ ಮನೀಶ್ ಶಾ
ಮನೀಶ್ ಶಾ ಬಳಿ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳಿದ್ದವು. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಹಿಂದಿ ವರ್ಷನ್ ಹಿಟ್ ಆದ ಕಾರಣ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಆವೃತ್ತಿಯನ್ನು ಜನವರಿ 27ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಾಗಿ ಮನೀಶ್ ಶಾ ಘೋಷಿಸಿದ್ದರು. ಆದರೆ ಇದು ‘ಅಲಾ ವೈಕುಂಟಪುರಂಲೋ’ ಸಿನಿಮಾದ ರೀಮೇಕ್ನಲ್ಲಿ ನಟಿಸುತ್ತಿರುವ ಕಾರ್ತಿಕ್ ಆರ್ಯನ್ಗೆ ಹಿಡಿಸಲಿಲ್ಲ. ‘ಶೆಹಜಾದಾ’ ಸಿನಿಮಾದ ಸಹ ನಿರ್ಮಾಪಕ ಆಗಿರುವ ಅಲ್ಲು ಅರವಿಂದ್ ಪ್ರಯತ್ನದಿಂದಾಗಿ ‘ಅಲಾ ವೈಕುಂಟಪುರಂಲೋ’ ಸಿನಿಮಾದ ಹಿಂದಿ ಡಬ್ ಬಿಡುಗಡೆ ಆಗುವುದು ನಿಂತಿದೆ. ಕೇವಲ ಯೂಟ್ಯೂಬ್ ಚಾನೆಲ್ನಲ್ಲಿ ಅಷ್ಟೆ ಅದು ಬಿಡುಗಡೆ ಆಗಲಿದೆ.
ಕಾರ್ತಿಕ್ ಅನ್ನು ಸಿನಿಮಾದಿಂದ ಹೊರಗಟ್ಟಿದ ಕರಣ್
ಕಾರ್ತಿಕ್ ಆರ್ಯನ್ ಅನ್ನು ಕರಣ್ ಜೋಹರ್ ತಮ್ಮ ಹೊಸ ಸಿನಿಮಾ ‘ದೋಸ್ತಾನಾ 2’ ನಿಂದ ಹೊರಗೆ ಹಾಕಿದ್ದರು. ಕಾರ್ತಿಕ್ ಆರ್ಯನ್ ಅಗತ್ಯಕ್ಕಿಂತಲೂ ಹೆಚ್ಚು ಸಂಭಾವನೆಗೆ ಡಿಮ್ಯಾಂಡ್ ಮಾಡಿದ ಕಾರಣಕ್ಕೆ ಕರಣ್ ಜೋಹರ್ ಈ ನಿರ್ಣೈ ತೆಗೆದುಕೊಂಡರು. ಕರಣ್ ಜೋಹರ್ ಕಾರ್ತಿಕ್ ಅನ್ನು ಹೊರ ಹಾಕಿದ ಬಳಿಕ ಇನ್ನೂ ಎರಡು ಸಿನಿಮಾಗಳಿಂದ ಕಾರ್ತಿಕ್ ಆರ್ಯನ್ ಅನ್ನು ಹೊರಗೆ ಹಾಕಲಾಯಿತು. ಕಾರ್ತಿಕ್ ಆರ್ಯನ್ ಈ ವರೆಗೆ 11 ಸಿನಿಮಾಗಳಲ್ಲಿಯಷ್ಟೆ ನಟಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada