ಬೆಂಗಳೂರು, ಏಪ್ರಿಲ್ 15; ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಬಹು ಚರ್ಚಿತ ವಿಚಾರ. ಕ್ಷೇತ್ರದ ಹಾಲಿ ಶಾಸಕ ಜಿ. ಟಿ. ದೇವೇಗೌಡರು ಕಾಂಗ್ರೆಸ್ನತ್ತ ಹೊರಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಲವು ಬಾರಿ ಕೇಳಿ ಬಂದಿವೆ.
ಚನ್ನಪಟ್ಟಣದ ಶಾಸಕರಾಗಿರುವ ಅವರು ರಾಮನಗರ ಬಿಟ್ಟು ಮೈಸೂರಿಗೆ ತೆರಳಲಿದ್ದಾರೆಯೇ? ಎಂಬ ಪ್ರಶ್ನೆಯೂ ಇದೆ.
ಜೆಡಿಎಸ್ ಪಕ್ಷ ಜಿ. ಟಿ. ದೇವೇಗೌಡರಿಗೆ ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿದೆ. ಎಚ್. ಡಿ. ಕುಮಾರಸ್ವಾಮಿ ಮೈಸೂರಿನಿಂದ ಕಣಕ್ಕಿಳಿಯುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಲಿದ್ದಾರೆ ಎಂಬ ಮಾತುಗಳಿವೆ.
ಚಾಮುಂಡೇಶ್ವರಿ ಕ್ಷೇತ್ರ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ. ಜಿ. ಟಿ. ದೇವೇಗೌಡರು ಮಾನಸಿಕವಾಗಿ ಜೆಡಿಎಸ್ನಿಂದ ದೂರವಾಗಿದ್ದಾರೆ. ಆದರೆ ಯಾವುದೇ ನಿರ್ಧಾರ ಕೈಗೊಳ್ಳದೆ ಅವರು ಮಗನ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.
ಜೆಡಿಎಸ್ ಎಂಎಲ್ಸಿ ಮಾತು
ಚಾಮುಂಡೇಶ್ವರಿ ಕ್ಷೇತ್ರದಿಂದ ಎಚ್. ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂಬ ವಿಚಾರ ಹಲವು ದಿನದಿಂದ ಕೇಳಿ ಬರುತ್ತಿದೆ. ಈಗ ಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಸಿ. ಎನ್. ಮಂಜೇಗೌಡ ಈ ಕುರಿತು ಮಾತನಾಡಿದ್ದಾರೆ. ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕುಮಾರಸ್ವಾಮಿ ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಲಿದ್ದಾರೆ” ಎಂದರು.
ರಾಮನಗರದಿಂದ ನಿಖಿಲ್ ಸ್ಪರ್ಧೆ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಮುಂದಿನ ವಿಧಾನಸಭಾ ಚುನಾವಣೆ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರು ರಾಮನಗರದಿಂದ, ಚನ್ನಪಟ್ಟಣದಿಂದ, ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂದು ವಿವಿಧ ವಿಶ್ಲೇಷಣೆ ಕೇಳಿಬಂದಿತ್ತು.
ವಿಧಾನ ಪರಿಷತ್ ಸದಸ್ಯ ಸಿ. ಎನ್. ಮಂಜೇಗೌಡ, “ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಕಣಕ್ಕಿಳಿಯುತ್ತಾರೆ” ಎಂದು ಹೇಳಿದ್ದಾರೆ. ರಾಮನಗರ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣೆಗೆ ಸಮಯವಿದೆ
2023ರ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವುದರಿಂದ ಯಾರು, ಎಲ್ಲಿಂದ ಸ್ಪರ್ಧೆ ಮಾಡಬಹುದು ಎಂಬುದರ ಬಗ್ಗೆ ನಿಧಾನವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಾಗಲೇ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಜಿ. ಟಿ. ದೇವೇಗೌಡರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಆದರೆ ಅವರು ಮಗ ಜಿ. ಡಿ. ಹರೀಶ್ ಗೌಡರ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಒಂದು ವೇಳೆ ಜಿ. ಟಿ. ದೇವೇಗೌಡರು ಜೆಡಿಎಸ್ ತೊರೆದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜೆಡಿಎಸ್ ಹೊಸ ಅಭ್ಯರ್ಥಿ ಹುಡುಕಬೇಕಿದೆ. ಕುಮಾರಸ್ವಾಮಿಯೇ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ? ಎಂಬುವ ಬಗ್ಗೆ ಅಂತಿಮ ತೀರ್ಮಾನ ಇನ್ನು ಪ್ರಕಟವಾಗಿಲ್ಲ.
ಅಚ್ಚರಿ ಮೂಡಿಸಿದ್ದ ಕುಮಾರಸ್ವಾಮಿ
ಫೆಬ್ರವರಿ ತಿಂಗಳಿನಲ್ಲಿ ಮೈಸೂರಿಗೆ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದರು. ಆಗ ಕಾರ್ಯಕರ್ತರೊಬ್ಬರು ಚಾಮುಂಡೇಶ್ವರಿಯಿಂದ ಯಾರು ಸ್ಪರ್ಧಿಸುತ್ತಾರೆ? ಎಂದು ಕೇಳಿದ್ದರು. ಆಗ ಎಚ್. ಡಿ. ಕುಮಾರಸ್ವಾಮಿ, “ನಾನೇ ಕ್ಷೇತ್ರಕ್ಕೆ ಬರುವೆ” ಎಂದು ಹೇಳಿ ಅಚ್ಚರಿ ಮೂಡಿಸಿದ್ದರು.
ಈಗ ವಿಧಾನ ಪರಿಷತ್ ಸದಸ್ಯ ಸಿ. ಎನ್. ಮಂಜೇಗೌಡ ಹೇಳಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿವೆ. ಆದರೆ ರಾಜಕೀಯ ಜನ್ಮಕೊಟ್ಟ ರಾಮನಗರ ಬಿಟ್ಟು ಕುಮಾರಸ್ವಾಮಿ ಮೈಸೂರು ಜಿಲ್ಲೆಗೆ ಬರುತ್ತಾರಾ?. ಕಾದು ನೋಡಬೇಕಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada