ಬೆಂಗಳೂರು,ಮೇ17-ಬಿಜೆಪಿ ಸೇರುವ ಕಾರಣಕ್ಕಾಗಿಯೇ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಸವರಾಜ ಹೊರಟ್ಟಿ ಅವರಿಗೆ ತಾಂತ್ರಿಕ ವಿಘ್ನ ಎದುರಾಗಿದೆ.
ಏಕೆಂದರೆ ವಿಧಾನಪರಿಷತ್ ನಿಯಮಾವಳಿ ಪ್ರಕಾರ ಸಭಾಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಹಾಲಿ ವಿಧಾನಪರಿಷತ್ನ ಉಪಸಭಾಪತಿಯವರಿಗೆ ಸಲ್ಲಿಸಬೇಕು.
ಆದರೆ ಪ್ರಸ್ತುತ ವಿಧಾನಪರಿಷತ್ನಲ್ಲಿ ಹಂಗಾಮಿ ಸಭಾಪತಿ ಯಾರೊಬ್ಬರೂ ಇಲ್ಲ. ನಿಯಮಗಳ ಪ್ರಕಾರ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿ ಅವರು ಸ್ವೀಕರಿಸಲು ಅವಕಾಶವಿಲ್ಲ. ಹೀಗಾಗಿ ಅವರು ನೀಡಿರುವ ರಾಜೀನಾಮೆ ಪತ್ರವನ್ನು ಯಾರು ಅಂಗೀಕರಿಸುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಕಡೆಪಕ್ಷ ಸಭಾಪತಿಯವರು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೂ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿದುಬಂದಿದೆ.
ರಾಜೀನಾಮೆ ಅಂಗೀಕಾರವಾಗದೆ ಬೇರೊಂದು ಪಕ್ಷಕ್ಕೆ ಸೇರ್ಪಡೆಯಾದರೆ ನಾಳೆ ಕಾನೂನು ತೊಡಕಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಹೊರಟ್ಟಿ ಅವರ ರಾಜೀನಾಮೆಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ನಿಯಮದ ಪ್ರಕಾರ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಉಪಸಭಾಪತಿಗೆ ಮಾತ್ರ ರಾಜೀನಾಮೆ ನೀಡಬೇಕಾಗಿದೆ. ಉಪಸಭಾಪತಿ ಹುದ್ದೆ ಖಾಲಿ ಇರುವ ಕಾರಣದಿಂದಾಗಿ ರಾಜೀನಾಮೆಗೆ ತಡೆಯಾಗಿದೆ. ನಿಯಮಾವಳಿಗಳ ಪ್ರಕಾರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಪತಿಗೆ ಸಲ್ಲಿಸಬೇಕು.
ಒಂದು ಸಭಾಪತಿ ಹುದ್ದೆ ಖಾಲಿ ಇದ್ದರೆ ಉಪಸಭಾಪತಿಗೆ ನೀಡಬೇಕು. ಹೊರಟ್ಟಿ ಅವರು ಸಭಾಪತಿಯಾಗಿರುವುದರಿಂದ ಉಪಸಭಾಪತಿಗೆ ಖುದ್ದಾಗಿ ಸಲ್ಲಿಸಬೇಕು. ಉಪಸಭಾಪತಿ ಹುದ್ದೆಗೆ ಯಾರನ್ನಾದರೂ ನೇಮಕ ಮಾಡುವವರೆಗೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲು ಬರುವುದಿಲ್ಲ.
ತಕ್ಷಣಕ್ಕೆ ಸರ್ಕಾರ ಹಂಗಾಮಿ ಉಪಸಭಾಪತಿಯನ್ನಾದರೂ ನೇಮಕ ಮಾಡಬೇಕಿದೆ ಎಂದು ಮೂಲಗಳು ಹೇಳಿವೆ.ತಾಂತ್ರಿಕ ಕಾರಣದಿಂದಾಗಿ ಹೊರಟ್ಟಿ ರಾಜೀನಾಮೆಯನ್ನು ತಡೆ ಹಿಡಿದಿರುವುದರಿಂದ ಬಿಜೆಪಿ ಸೇರ್ಪಡೆ ಮುಂದೆ ಬೀಳುವ ಸಾಧ್ಯತೆ ಇದೆ.
ಹೊರಟ್ಟಿ ಅವರ ರಾಜೀನಾಮೆ ಉಪಸಭಾಪತಿಯ ಮೂಲಕವೇ ರಾಜ್ಯಪಾಲರಿಗೆ ರವಾನೆಯಾಗಬೇಕು. ತದನಂತರ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಲಿದ್ದಾರೆ. ಮೇಲ್ಮನೆ ಸದಸ್ಯ ಸ್ಥಾನವು ಸರ್ಕಾರೇತರ ಹುದ್ದೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಆ ಸ್ಥಾನದ ರಾಜೀನಾಮೆಯನ್ನು ಅಂಗೀಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಭಾಪತಿ ಅಥವಾ ಉಪಸಭಾಪತಿಯ ಮೂಲಕವೇ ಹೋಗಬೇಕು. ಹೊರಟ್ಟಿ ಅವರು ಇನ್ನೂ ಜೆಡಿಎಸ್ನ ಪರಿಷತ್ ಸದಸ್ಯರಾಗಿದ್ದಾರೆ. ಅವರ ಅವಧಿಯು ಜೂ.14ಕ್ಕೆ ಮುಕ್ತಾಯಗೊಳ್ಳಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada