ಬಾಲಿವುಡ್ನಲ್ಲಿ ‘ಭಯೋಗ್ರಫಿಗಳ ಶಕೆ’ ಶುರುವಾಗಿದೆ. ಒಂದರಹಿಂದೊಂದರಂತೆ ಜೀವನ ಆಧರಿತ ಸಿನಿಮಾಗಳು, ವೆಬ್ ಸರಣಿಗಳು ತೆರೆಗೆ ಬರುತ್ತಿವೆ. ಇವುಗಳಲ್ಲಿ ಹಲವು ಸಿನಿಮಾಗಳು ಹಿಟ್ ಸಹ ಆಗುತ್ತಿವೆ.
ಭೂಗತ ಪಾತಕಿಗಳ ಕತೆಗಳು ಹಿಂದೆ ಸರಿದು ಇತ್ತೀಚೆಗೆ ಸಾಧಕರ ಕತೆಗಳು ಸಿನಿಮಾಗಳಾಗುತ್ತಿರುವುದು ಸಮಾಧಾನಕರ ಸಂಗತಿ.
ಅದರಲ್ಲಿಯೂ ಕ್ರೀಡಾಪಟುಗಳ, ಬ್ಯುಸಿನೆಸ್ಮೆನ್ಗಳ ಕತೆಗಳ ಮೇಲೆ ಬಾಲಿವುಡ್ ನಿರ್ದೇಶಕರು ಹೆಚ್ಚಾಗಿ ಕಣ್ಣು ಹಾಕಿದ್ದಾರೆ. ಇದರ ಜೊತೆಗೆ ರಾಜಕಾರಣಿಗಳ ಜೀವನ ಸಹ ಸಿನಿಮಾಗಳಾಗುತ್ತಿವೆ. ಆದರೆ ಇವಕ್ಕೆ ತುಸು ಬೇರೆಯದೇ ಕಾರಣವೂ ಇದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಸಿನಿಮಾ ತೆರೆಗೆ ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತಾಗಿಯೂ ವಿಮರ್ಶಾತ್ಮಕ ಸಿನಿಮಾ ಬಂದಿದೆ. ಬಾಳಾ ಸಾಹೇಬ್ ಠಾಕ್ರೆ ಜೀವನ ಕುರಿತಾಗಿ ಕೆಲವು ಸಿನಿಮಾಗಳು ಬಿಡುಗಡೆ ಆಗಿವೆ. ಮಾಜಿ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ ಮರಣ ಕುರಿತಾಗಿ ಸಿನಿಮಾ ಬಂದಿದೆ. ಇದೀಗ ಅಟಲ್ ಬಿಹಾರಿ ವಾಜಪೇಯಿ ಕುರಿತ ಸಿನಿಮಾ ಬರಲು ಸಜ್ಜಾಗಿದೆ.
ಸಿನಿಮಾ ಆಗಲಿದೆ ವಾಜಪೇಯಿ ಜೀವನ
ದೇಶಕಂಡ ಜನಪ್ರಿಯ ಪ್ರಧಾನಿಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಎಲ್ಲರೊಟ್ಟಿಗೆ ಆತ್ಮೀಯ ಬಂಧವನ್ನು, ಪ್ರೇಮವನ್ನು ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿ ಉತ್ತಮ ಪ್ರಧಾನಿಯಾಗಿದ್ದ ಜೊತೆ ಅತ್ಯುತ್ತಮ ವ್ಯಕ್ತಿಯೂ ಆಗಿದ್ದರು. ಅವರ ಜೀವನ ಕುರಿತ ಸಿನಿಮಾ ಬಗ್ಗೆ ಸಹಜವಾಗಿಯೇ ಅವರ ಸಮರ್ಥಕರು, ಬಿಜೆಪಿ ಕಾರ್ಯಕರ್ತರಿಗೆ ಕುತೂಹಲ ಇದೆ.
ಅಟಲ್ ಎಂದು ಹೆಸರಿಡಲಾಗಿದೆ ಸಿನಿಮಾಕ್ಕೆ
ಅಟಲ್ ಬಿಹಾರಿ ವಾಜಪೇಯಿ ಜೀವನ ಕುರಿತಾದ ಸಿನಿಮಾ ಹಿಂದಿಯಲ್ಲಿ ನಿರ್ಮಾಣವಾಗುತ್ತಿದ್ದು, ಸಿನಿಮಾಕ್ಕೆ ‘ಅಟಲ್’ ಎಂದೇ ಹೆಸರಿಡಲಾಗಿದೆ. ‘ಮೇ ರಹು ಯಾ ನಾ ರಹು ದೇಶ್ ರೆಹನಾ ಚಾಹಿಯೆ ಎಂಬ ಅಡಿಬರಹ ಸಹ ಜೊತೆಗಿದೆ. ಸಿನಿಮಾದ ಪೋಸ್ಟರ್ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯ ಭಾಷಣದ ತುಣುಕೊಂದನ್ನು ಬಳಸಲಾಗಿದೆ. ‘ರಾಜಕಾರಣಿಗಳು ಬರುತ್ತಾರೆ ಹೋಗುತ್ತಾರೆ, ಪಕ್ಷಗಳು ನಿರ್ಮಾಣವಾಗುತ್ತವೆ, ನಶಿಸಿ ಹೋಗುತ್ತವೆ, ಆದರೆ ಈ ದೇಶ ಇರಬೇಕು, ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕು” ಎಂಬ ತುಣುಕು ಟೀಸರ್ನಲ್ಲಿದೆ.
ಪುಸ್ತಕ ಆಧರಿಸಿದ ಸಿನಿಮಾ
ಉಲ್ಲೇಖ್ ಎನ್ಪಿ ಬರೆದಿರುವ ‘ದಿ ಅನ್ಟೋಲ್ಡ್ ವಾಜಪೇಯಿ; ಪೊಲಿಟಿಕ್ಸ್ ಆಂಡ್ ಪ್ಯಾರಡಾಕ್ಸ್’ ಪುಸ್ತಕ ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾವನ್ನು ವಿನೋದ್ ಬಾನುಶಾಲಿ ಮತ್ತು ಸಂದೀಪ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಿರ್ದೇಶಕ, ಪಾತ್ರವರ್ಗ ಯಾವುದನ್ನೂ ಸಿನಿಮಾದ ನಿರ್ಮಾಣ ಸಂಸ್ಥೆ ಬಹಿರಂಗಗೊಳಿಸಿಲ್ಲ. ಸಿನಿಮಾದ ಚಿತ್ರೀಕರಣ ಇದೇ ವರ್ಷಾಂತ್ಯಕ್ಕೆ ಪ್ರಾರಂಭಾಗಲಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಬಿಡುಗಡೆ ಆಗಲಿದೆ. ಮುಂದಿನ ಡಿಸೆಂಬರ್ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜಯಂತಿ ಇದ್ದು ಅದೇ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ನಿರ್ಮಾಪಕ ವಿನೋದ್ ಮಾತು
”ನಾನು ಅಟಲ್ ಬಿಹಾರಿ ವಾಜಪೇಯಿ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರೊಬ್ಬ ನಿಜ ಅರ್ಥದ ನಾಯಕ. ದೂರದೃಷ್ಟಿಯುಳ್ಳ, ಧೈರ್ಯಶಾಲಿ ಆಗಿದ್ದ ಪ್ರಧಾನಿ ಅವರಾಗಿದ್ದರು. ದೇಶ ಕಟ್ಟುವ ವಿಷಯದಲ್ಲಿ ಅವರ ಯೋಗದಾನ ಬಹಳ ದೊಡ್ಡದು. ಅವರ ಜೀವನ ಸಾಧನೆಯನ್ನು ಬೆಳ್ಳಿತೆರೆಗೆ ತರುತ್ತಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಚಾರ” ಎಂದಿದ್ದಾರೆ ನಿರ್ಮಾಪಕ ವಿನೋದ್ ಬಾನುಶಾಲಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada