ಸಿನಿಮಾ ಮತ್ತು ಕಿರುತೆರೆಯಲ್ಲಿ ರಂಗಭೂಮಿ ಹಿನ್ನೆಲೆಯಿಂದ ಬಂದವರ ಸಂಖ್ಯೆ ದಿನೇ ದಿನೆ ಕಡಿಮೆ ಆಗುತ್ತಿದೆ. ಅಂದ ಚೆಂದವನ್ನೇ ಆಧರಿಸಿ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕುವವರೇ ಹೆಚ್ಚಾಗಿದ್ದಾರೆ. ಆದರೆ, ಗಟ್ಟಿ ನಟನೆ, ದೈಹಿಕ ಭಾಷೆ, ಮಾತಿನ ಧಾಟಿ, ಹಾಗೂ ಬದುಕು ಇದೆಲ್ಲವನ್ನು ಕಲಿಸುವುದು ರಂಗಭೂಮಿ. ಇದೀಗ ರಂಗಭೂಮಿಯಲ್ಲಿಯೇ ತೊಡಗಿಸಿಕೊಂಡಿರುವ ಒಂದು ಸಮಾನ ಮನಸ್ಕರ ತಂಡವೀಗ ರಂಗಭೂಮಿಯ ಒಂದಷ್ಟು ಪಟ್ಟುಗಳನ್ನು ಆಸಕ್ತರಿಗೆ ತಿಳಿಸಲು ಮುಂದೆ ಬಂದಿದೆ. ಹಾಗಂತ ಇದು ತಿಂಗಳಾನುಗಟ್ಟಲೆ ಇರುವ ಕೋರ್ಸ್ ಅಲ್ಲ ಕೇವಲ 7 ದಿನ ಮಾತ್ರ!
ಗುಬ್ಬಿ ವೀರಣ್ಣನವರ ಮೊಮ್ಮಗಳಾದ ನಟಿ ಸುಷ್ಮಾ ವೀರ್ ಬಿ ಜಯಶ್ರೀ ಅವರ ಪುತ್ರಿಯೂ ಹೌದು. ನಟಿ, ನಿರ್ದೇಶಕಿ, ನಿರ್ಮಾಪಕಿ, ಗಾಯಕಿಯಾಗಿರುವ, ಊರ್ಧ್ವ ನರ್ತಕಿಯಾದ ಸುಷ್ಮಾ ವೀರ್ ಇದೀಗ ಇಂಥ ಒಂದು ಕೈಂಕರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿರುವ ಸುಷ್ಮಾ ಪಕ್ವ ಕಲಾವಿದರ ಸೃಷ್ಟಿಗೆ ಮುಂದಡಿ ಇಟ್ಟಿದ್ದಾರೆ.
ಇವರ ಈ ಸಾಹಸಕ್ಕೆ ಹಿರಿಯ ರಂಗಕರ್ಮಿಗಳು, ನಿರ್ದೇಶಕರು, ನಟರು, ಹಾಗೂ ನಿರ್ಮಾಪಕರಾದ ಬಿ. ಸುರೇಶ, ಮಂಡ್ಯ ರಮೇಶ್, ಸುಚೇಂದ್ರ ಪ್ರಸಾದ್, ರವಿ ಮೂರೂರು, ಮೂಗ್ ಸುರೇಶ್, ಸುಬ್ರಮಣ್ಯ, ರಾಜೇಶ್ ಲತಾರ್, ಯೋಗಶಿಕ್ಷಕಿ ಡಾ. ರಾಜೇಶ್ವರಿ, ಕಥಕ್ ನೃತ್ಯಗಾರ್ತಿ ಆಸ್ತಾ ಗೋಡ್ಬೋಲೆ ಕಾರ್ಲೇಕರ್ ಸೇರಿ ಇನ್ನೂ ಹಲವು ಬೇರೆ ಬೇರೆ ಇಂಡಸ್ಟ್ರಿಯ ಗಣ್ಯರು ಸಾಥ್ ನೀಡಿದ್ದು ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ನಟ ಗಣೇಶ್ ಎಂ ಭೀಮನಕೋಣೆ, ಯಕ್ಷಗಾನ ಕಲಾವಿದೆ ಅರ್ಚನಾ ಸುರೇಶ್ ನಾಯ್ಕ್, ಸುಮಂತ್, ಯೋಗೇಶ್ ನಾಯ್ಕ್ ವೀರ್ ಕಥಾಕರ್ ತಂಡದಲ್ಲಿ ಇರಲಿದ್ದಾರೆ.
ಹಾಗಾದರೆ ಏನಿದು ಕೋರ್ಸ್..
ಸುಷ್ಮಾ ವೀರ್ ಅವರ ಸ್ನೇಹಿತರೂ ಆದ ಸೋಹಂ ಗುರೂಜಿ ಅವರೂ ಸಹ ಕೈ ಜೋಡಿಸಿದ್ದಾರೆ. ಆರ್ಟ್ & ಕಲ್ಚರ್ ಫಾರ್ ಲೈಫ್ ಹೆಸರಿನಲ್ಲಿ ಬೆಂಗಳೂರು ಹೊರವಲಯದಲ್ಲಿ ಸೋಹಂ ಆಶ್ರಮದಲ್ಲಿ ಎರಡು ಎಕರೆಯ ವಿಸ್ತಾರವಾದ ಜಾಗದಲ್ಲಿ ಈ ರೆಸಿಡೆನ್ಶಿಯಲ್ ತರಗತಿಗಳು ನಡೆಯಲಿವೆ. ಒಟ್ಟು ಏಳುದಿನದ ತರಬೇತಿ ತರಗತಿಗಳು ಇದಾಗಿದ್ದು, ನಟನೆಯಲ್ಲಿ ಪಕ್ವತೆ ಬರಲು ಹಲವು ಪರಿಣಿತರು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ನಿತ್ಯ ಏಳು ಗಂಟೆ ನಡೆಯಲಿರುವ ಈ ತರಗತಿಗಳಲ್ಲಿ ಕೇವಲ ನಟನೆ ಮಾತ್ರವಲ್ಲದೆ, ದೈಹಿಕ ಮತ್ತು ಆಂಗಿಕ ಅಭಿನಯ, ಧ್ವನಿ ಏರಿಳಿತ, ಯೋಗ, ಯಕ್ಷಗಾನ, ಕಥಕ್ ರೀತಿಯ ವಿಶೇಷ ಕಲೆಗಳನ್ನೂ ಕಲಿಸಲಾಗುತ್ತದೆ. ಅದಕ್ಕೆಂದೆ, ಪರಿಣಿತರೂ ಇದ್ದಾರೆ.
ಈ ಬಗ್ಗೆ ಸುಷ್ಮಾ ವೀರ್ ಹೇಳುವುದೇನು?
ಮನರಂಜನಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕಲಾವಿದರ ಕೊರತೆ ಕಾಡುತ್ತಿದೆ. ಪಳಗಿದ, ಪಕ್ವವಾದ ಕಲಾವಿದರು ಸಿಗುತ್ತಿಲ್ಲ. ಅದೆಲ್ಲವನ್ನು ಗಮನದಲಿಟ್ಟುಕೊಂಡೇ ಸಮಾನ ಮನಸ್ಕರೇ ಸೇರಿ ಇದನ್ನು ಶುರು ಮಾಡಿದ್ದೇವೆ. ಈ ಕೋರ್ಸ್ ಒಟ್ಟು 7ದಿನ ನಡೆಯಲಿದೆ. ನಿತ್ಯ 7 ಗಂಟೆ, 7 ವಿಷಯಗಳು, 7 ಮೆಂಟರ್ಸ್.. ಇದರ ಜತೆಗೆ ಕಲಿಕೆ ಊಟ ವಸತಿಯನ್ನೂ ಸೋಹಂ ಆಶ್ರಮದಲ್ಲಿಯೇ ಇರಲಿದೆ. ಪರಿಸರ ಪ್ರೀತಿ, ಜೀವನ ಪ್ರೀತಿಯೂ ಆ ಏಳು ದಿನದಲ್ಲಿ ಕಲಿಸಿಕೊಡುವುದು ನಮ್ಮ ಉದ್ದೇಶ ಎಂಬುದು ಸುಷ್ಮಾ ವೀರ್ ಅವರ ಮಾತು.
ಆಗಸ್ಟ್ ಮೊದಲ ಬ್ಯಾಚ್ ಶುರು?
ಆಗಸ್ಟ್ 1ರಿಂದ 7ರ ವರೆಗೆ ಮೊದಲ ಬ್ಯಾಚ್ ನಡೆಯಲಿದೆ. ಅದಾದ ಬಳಿಕ ಆ 10ರಿಂದ 17, ಮೂರನೇ ಬ್ಯಾಚ್ ಆ 20ರಿಂದ 27ರ ವರೆಗೆ ನಡೆಯಲಿದೆ. ಪ್ರತಿ ಬ್ಯಾಚ್ಗೆ ಕೇವಲ 20 ಆಸಕ್ತರಿಗೆ ಮಾತ್ರ ಪ್ರವೇಶ. ಕೈಗೆಟುಕುವ ಶುಲ್ಕ ತುಂಬಿದರೆ, ಒಂದೇ ವಾರದಲ್ಲಿ ನಟನೆಯ ಅಂತರಾಳವನ್ನು ತಲುಪಲು ಸಾಧ್ಯ. ಅದೂ ಪರಿಣಿತ ತಂಡದೊಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: