ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಇಂಡಸ್ಟ್ರಿಯಲ್ಲಿ 27 ವರ್ಷ ಪೂರೈಸಿದ್ದಾರೆ. ಕಿಚ್ಚ 27 ವರ್ಷದ ಸಂಭ್ರಮಕ್ಕೆ ಇಡೀ ಚಿತ್ರರಂಗ ವಿಶ್ ಮಾಡಿದೆ. ಇನ್ನು ಸುದೀಪ್ ಕೂಡ ತನ್ನ ಜರ್ನಿ ಬಗ್ಗೆ ಮಾತಾಡಿದ್ದು, ಸ್ಪೆಷಲ್ ಆಗಿ ಒಬ್ಬ ವ್ಯಕ್ತಿನ ಸ್ಮರಿಸಿದ್ದಾರೆ.
ಅವರೊಬ್ಬರು ಇಲ್ಲ ಅಂದಿದ್ರೆ ಈ ಜರ್ನಿ ಆಗ್ತಿರಲಿಲ್ಲ ಅಂತ ವಿಶೇಷವಾದ ಕ್ರೆಡಿಟ್ ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಲೋಕದಲ್ಲಿ 27 ವರ್ಷ ಪೂರೈಸಿ 28ನೇ ವರ್ಷದ ಮೊದಲ ದಿನ ಆರಂಭಿಸಿದ್ದಾರೆ. ಈ 27 ವರ್ಷದ ಸುದೀರ್ಘ ಜರ್ನಿಯನ್ನ ಸ್ಮರಿಸಿಕೊಂಡಿರುವ ಸ್ಯಾಂಡಲ್ವುಡ್ ಮಾಣಿಕ್ಯ ತನ್ನ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದ ವಿಶೇಷ ವ್ಯಕ್ತಿಗಳಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಅದರಲ್ಲೂ ಆ ಒಬ್ಬ ವ್ಯಕ್ತಿಗೆ, ಆ ವ್ಯಕ್ತಿಯ ತ್ಯಾಗಕ್ಕೆ ಸ್ಪೆಷಲ್ ಆಗಿ ಥ್ಯಾಂಕ್ಸ್ ಹೇಳಿದ್ದಾರೆ ಕಿಚ್ಚ ಸುದೀಪ್.
27 ವರ್ಷದ ಜರ್ನಿ.. ಪ್ರೀತಿಯ ಮಡದಿಗೆ ಕಿಚ್ಚನ ಧನ್ಯವಾದ!
ಪ್ರಿಯಾ ತ್ಯಾಗ, ಸಹಾಯ ನೆನೆದ ಅಭಿನಯ ಚಕ್ರವರ್ತಿ.!
ಸುದೀಪ್ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದಾಗೆಲ್ಲ ತಮ್ಮ ಪತ್ನಿಗೆ ಕ್ರೆಡಿಟ್ ಕೊಟ್ಟೇ ಕೊಡ್ತಾರೆ. ಸುದೀಪ್ ಇವತ್ತು ಏನೇ ಸಾಧಿಸಿದ್ರು ಅದರಲ್ಲಿ ತಮ್ಮ ಅರ್ಧಂಗಿಗೆ ಅರ್ಧ ಕೀರ್ತಿ ಸಲ್ಲಿಸ್ತಾರೆ. ಈಗ 27 ವರ್ಷ ಪೂರೈಸಿದ ವಿಶೇಷ ಸಂದರ್ಭದಲ್ಲಿಯೂ ಪ್ರಿಯಾ ಅವರಿಗೆ ಕಿಚ್ಚ ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ಸುದೀಪ್ ಪಾಲಿಗೆ ಮರೆಯಲಾಗದ ಜರ್ನಿ ಆಗಿಸಿದ್ದಕ್ಕೆ ಹೃದಯಪೂರ್ವ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಪೋಸ್ಟ್ ಹಾಕಿರುವ ಸುದೀಪ್ ಮನದಾಳಕ್ಕೆ ಅಕ್ಷರ ರೂಪ ಕೊಟ್ಟಿದ್ದಾರೆ.
‘ಇವತ್ತು ನಾನು 28ನೇ ವರ್ಷದ ಮೊದಲ ಹೆಜ್ಜೆ ಇಡುತ್ತಿದ್ದೇನೆ. ನಿನ್ನ ಎಲ್ಲಾ ತ್ಯಾಗಕ್ಕೂ ನನ್ನ ವಿಶೇಷವಾದ ಧನ್ಯವಾದಗಳು ಪ್ರಿಯಾ. ನಿನ್ನ ತ್ಯಾಗವಿಲ್ಲದೆ ನಾನು ಇಷ್ಟು ದೂರ ಕ್ರಮಿಸಲು ಸಾಧ್ಯವಾಗ್ತಿರಲಿಲ್ಲ. ನೀನು ವೈಯಕ್ತಿಕವಾಗಿ ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದರೂ, ನನ್ನನ್ನು ನಾನಾಗಿರಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮತ್ತು ನಾನು ಆರಿಸಿಕೊಂಡ ಹಾದಿಯಲ್ಲಿ ಪ್ರಯಾಣಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ನಾನು ಅನೇಕ ಬಾರಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿಫಲನಾಗಿದ್ದೇನೆ. ಆದ್ರೀಗ ಆ ಎಲ್ಲದಕ್ಕೂ ಧನ್ಯವಾದ ಹೇಳಲು ಬಯಸುತ್ತೇನೆ. ಧನ್ಯವಾದಗಳು’ – ಕಿಚ್ಚ ಸುದೀಪ್
ಸುದೀಪ್ ಅವ್ರ ಈ ಜರ್ನಿಯಲ್ಲಿ ಪ್ರಿಯಾ ಅವರದ್ದು ವಿಶೇಷ ಪಾತ್ರವಿದೆ. ಅವರ ತ್ಯಾಗವೂ ಇದೆ. ಕೇವಲ ಪತ್ನಿಗೆ ಮಾತ್ರವಲ್ಲ ತನ್ನ ಪ್ರೀತಿ ಮಗಳು ಸಾನ್ವಿಗೂ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ. ಜನ್ಮ ಕೊಟ್ಟ ತಂದೆ-ತಾಯಿಗೂ ಅನಂತ ಧನ್ಯವಾದಗಳನ್ನ ತಿಳಿಸಿ ಈ ಜರ್ನಿಯನ್ನ ಇನ್ನಷ್ಟು ಅರ್ಥ ಪೂರ್ಣವಾಗಿಸಿಕೊಂಡಿದ್ದಾರೆ. 1997 ರಲ್ಲಿ ‘ತಾಯವ್ವ’ ಚಿತ್ರದ ಮೂಲಕ ಬಣ್ಣ ಹಚ್ಚಿದ್ದ ಸುದೀಪ್ ಅದಾದ ಮೇಲೆ ರಮೇಶ್ ಅರವಿಂದ್ ಅಭಿನಯದ ‘ಪ್ರತ್ಯರ್ಥ’ ಚಿತ್ರದಲ್ಲಿ ಅಭಿನಯಿಸಿದ್ದರು. 2000ರಲ್ಲಿ ತೆರೆಗೆ ಬಂದ ‘ಸ್ಪರ್ಶ’ ಕಿಚ್ಚನ ಪಾಲಿಗೆ ಸ್ಪೆಷಲ್. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರದೊಂದಿಗೆ ಸುದೀಪ್ ಕನ್ನಡಿಗರಿಗೆ ಪರಿಚಯ ಆದರು. ಇನ್ನು ಸುದೀಪ್ಗೆ ಬ್ರೇಕ್ ಕೊಟ್ಟಿದ್ದು 2001ರಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ. ಈ ಚಿತ್ರ ಸುದೀಪ್ ಅವರ ಸಿನಿಮಾ ಜೀವನವನ್ನೇ ಬದಲಿಸಿತು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಸಂಜೀವ್ ಅವರ ಮಗ ಸುದೀಪ್ ಆಗಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡ ನಟ ಇವತ್ತು ಅಭಿಮಾನಿಗಳ ಪಾಲಿಗೆ ಕಿಚ್ಚನಾಗಿ, ಇಂಡಸ್ಟ್ರಿ ಪಾಲಿಗೆ ಮಾಣಿಕ್ಯನಾಗಿ ಬೆಳೆದು ನಿಂತಿದ್ದಾರೆ. ಕನ್ನಡದ ಜೊತೆ ಪರಭಾಷೆಯಲ್ಲೂ ತನ್ನ ನಟನಾ ಸಾಮರ್ಥ್ಯ ಸಾಬೀತುಪಡಿಸಿ ಅಭಿನಯ ಚಕ್ರವರ್ತಿ ಎನಿಸಿಕೊಂಡು ಆಲದ ಮರವಾಗಿ ಹೊಸಬರಿಗೆ, ಯುವಕರಿಗೆ ಮಾದರಿಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada