ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿದೆ. ಬಿಸಿಲನಾಡು ಎಂದೇ ಹೆಸರಾದ ಪ್ರದೇಶದ ಜನರಿಗೆ ಇದರಿಂದ ಸಹಜ ಕಾಯಿಲೆಗಳು ಆರಂಭವಾಗಿವೆ. ಅದರಲ್ಲೂ ಶ್ವಾಸಕೋಶ ಸಂಬಂಧಿ ಹಾಗೂ ಸಂದಿವಾತ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ಶೀತಗಾಳಿಯಲ್ಲೂ ಸಂದಿವಾತದಿಂದ ಪಾರಾಗುವುದು ಹೇಗೆ ಎಂಬ ಕುರಿತು ಸಂದಿವಾತ ತಜ್ಞ ಡಾ.ಸಚಿನ್ ಆರ್. ಜೀವಣಗಿ ಹಾಗೂ ಮನೆಯಲ್ಲೇ ವಹಿಸಬೇಕಾದ ಮುಂಜಾಗೃತಾ ಕ್ರಮಗಳೇನು ಎಂಬ ಬಗ್ಗೆ ಆಯುರ್ವೇದ ವೈದ್ಯೆ ಡಾ.ಶ್ವೇತಾ ಸಾವಳಗಿ ಕೆಲವು ಸಲಹೆ ನೀಡಿದ್ದಾರೆ.
ಸಂದಿವಾತ ಸಮಸ್ಯೆ: ‘ಚಳಿಗಾಲದಲ್ಲೇ ಸಂದಿವಾತ ಕಾಣಿಸಿಕೊಳ್ಳುತ್ತದೆ ಎಂದೇನೂ ಇಲ್ಲ. ಆದರೆ, ಈ ಕಾಯಿಲೆ ಇದ್ದವರು ಚಳಿಯ ಕಾರಣ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಹೀಗಾಗಿ, ಚಳಿಗಾಲದಲ್ಲೇ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಸಂದಿವಾತದಲ್ಲಿ ನೂರಕ್ಕೂ ಹೆಚ್ಚು ವಿಧದ ಕಾಯಿಲೆಗಳಿವೆ. ಸಾಮಾನ್ಯವಾಗಿ ಈ ಭಾಗದಲ್ಲಿ ಕಂಡುಬರುವುದು ‘ರುಮಟೈಸ್ ಅರ್ಥರೈಟಿಸ್’ ಮಾತ್ರ. ಕೆಲವು ಮುಂಜಾಗೃತಾ ಕ್ರಮ ವಹಿಸಿದರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು’ ಎನ್ನುವುದು ಡಾ.ಸಚಿನ ಅವರ ಸಲಹೆ.
‘ಸಂದಿವಾತ ಸಮಸ್ಯೆ ಇದ್ದವರು ಶೀತಗಾಳಿ ಅಥವಾ ಮಳೆಯಲ್ಲಿ ಓಡಾಡಬಾರದು. ಮನೆಯಲ್ಲಿದ್ದಾಗಲೂ ದೇಹವನ್ನು ಆದಷ್ಟು ಬೆಚ್ಚಗೆ ಇಟ್ಟುಕೊಳ್ಳಿ. ವಾತಾವರಣದಲ್ಲಿ ಶೀತಗಾಳಿ ಹೆಚ್ಚಾದಂತೆ ದೇಹದಲ್ಲಿನ ತೇವಾಂಶ ಕಡಿಮೆಯಾಗುತ್ತದೆ. ಅದನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಪದೇಪದೇ ನೀರು ಕುಡಿಯಿರಿ. ಬಿಸಿನೀರು, ಬಿಸಿಯಾದ ಊಟ ಸೇವಿಸುವುದು ಬಹಳ ಮುಖ್ಯ. ಹೊರಗೆ ಬರುವುದು ಅನಿವಾರ್ಯವಾದಾಗ ಬೆಚ್ಚಗಿನ ಬಟ್ಟೆ, ಕೈಗವಸು, ಕಾಲುಚೀಲಗಳನ್ನು ಧರಿಸಿಕೊಳ್ಳುವುದು ಸೂಕ್ತ’ ಎಂದೂ ಅವರು ಹೇಳಿದ್ದಾರೆ.
‘ತಂಪುಪಾನೀಯ ಕುಡಿಯುವುದು, ಐಸ್ಕ್ರೀಂ, ಜಂಕ್ಫುಡ್, ಫಾಸ್ಟ್ಫುಡ್ಗಳನ್ನ ಸೇವಿಸುವುದು, ಧೂಮಪಾನ, ತಂಬಾಕು ತಿನ್ನುವುದು ಕೂಡ ಕಷ್ಟ ತಂದೊಡ್ಡುತ್ತದೆ. ಮೇಲಾಗಿ, ರೋಗ ನಿರೋಧಶಕ್ತಿ ಕಡಿಮೆ ಇದ್ದವರು ಎ.ಸಿ.ಗಳಲ್ಲಿ ಕುಳಿತುಕೊಳ್ಳುವುದನ್ನೂ ಕಡಿಮೆ ಮಾಡಬೇಕು’ ಎಂಬುದು ಈ ತಜ್ಞರ ಸಲಹೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada