ಲಕ್ನೋ: ಉತ್ತರ ಪ್ರದೇಶದ ಜಾಗತಿಕ ಹೂಡಿಕೆದಾರರ ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಉದ್ಯಮ ಕ್ಷೇತ್ರದ ಹಲವು ಮಂದಿ ದಿಗ್ಗಜರು ರಾಜ್ಯದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವ ಆಶ್ವಾಸನೆ ನೀಡಿದ್ದಾರೆ. ಉತ್ತರ ಪ್ರದೇಶವನ್ನು “ಇಡೀ ವಿಶ್ವಕ್ಕೆ ಭಾರತ ನಿರೀಕ್ಷೆಯ ಕೇಂದ್ರವಾಗಿ ಹೊರಹೊಮ್ಮಿದಂತೆ ಇಡೀ ಭಾರತಕ್ಕೆ ಉತ್ತರಪ್ರದೇಶ ನಿರೀಕ್ಷೆಯ ಕೇಂದ್ರ” ಎಂದು ಬಣ್ಣಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 75 ಸಾವಿರ ಕೋಟಿ ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.
“ಉತ್ತರ ಪ್ರದೇಶದ ಸುವರ್ಣಯುಗ ಆರಂಭವಾಗುತ್ತಿದೆ” ಎಂದು ಅಂಬಾನಿ ಬಣ್ಣಿಸಿದ್ದಾರೆ. ರಿಲಯನ್ಸ್ ರೀಟೇಲ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಹುತೇಕ ಹೂಡಿಕೆ ಮಾಡಲು ಉದ್ದೇಶಿಸಿದ್ದು, ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ. ಸಾವಿರಾರು ಸಣ್ಣ ಮಳಿಗೆಗಳು ಮತ್ತು ಕಿರಾಣಿ ಅಂಗಡಿಗಳನ್ನು ಕ್ರಾಂತಿಕಾರಕವನ್ನಾಗಿ ರಿಲಯನ್ಸ್ ಮಾಡಲಿದೆ. ಈ ಮೂಲಕ ಅವರಿಗೆ ಹೆಚ್ಚು ಗಳಿಕೆ ಮತ್ತು ಬೆಳವಣಿಗೆಗೆ ಅವಕಾಶ ಕಲ್ಪಿಸಿಕೊಡಲಿದೆ ಎಂದು ವಿವರ ನೀಡಿದರು.
ಹಲವು ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳ ಖರೀದಿ ಮೂಲವಾಗಿಯೂ ಇದು ಪರಿವರ್ತನೆಯಾಗಲಿದೆ. ರಿಲಯನ್ಸ್ 10 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಜೈವಿಕ ವಿದ್ಯುತ್ನ ಜತೆಗೆ ಇದು ಉತ್ತರಪ್ರದೇಶದಲ್ಲೇ ಅತಿದೊಡ್ಡ ಯೋಜನೆಯಾಗಲಿದೆ ಎಂದು ಹೇಳಿದರು.
ಆದಿತ್ಯ ಬಿರ್ಲಾ ಸಮೂಹ ಅಧ್ಯಕ್ಷ ಕುಮಾರಮಂಗಳಂ ಬಿರ್ಲಾ 25 ಸಾವಿರ ಕೋಟಿ ರೂಪಾಯಿ ಹೂಡಿಕೆಯ ಭರವಸೆ ನೀಡಿದರು. “ಸಿಎಂ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಕಳೆದ ಐದು ವರ್ಷಗಳಲ್ಲಿ ಅದ್ಭುತ ಪ್ರಗತಿಯಾಗುತ್ತಿರುವುದು ತಿಳಿದು ನನಗೆ ಹೃದಯ ತುಂಬಿ ಬರುತ್ತಿದೆ. ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಹಿಂದೊಮ್ಮೆ ಹೇಳಿದ್ದಂತೆ, “ಯುಪಿ ಪ್ಲಸ್ ಯೋಗಿ… ಬಹುತ್ ಹೈ ಅಬ್ ಉಪಯೋಗಿ” ಎಂದು ಬಿರ್ಲಾ ಬಣ್ಣಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada