ಆನಂದಿ ಸದಾಶಿವರಾವ್ ಪ್ರಸಿದ್ಧರಾಗಿದ್ದ ಕನ್ನಡ ಮತ್ತು ಇಂಗ್ಲಿಷ್ ಬರಹಗಾರ್ತಿ. ಇವರು ಮಾನವೀಯ ಸಂಬಂಧಗಳ ಸೂಕ್ಷ್ಮತೆ, ಗಾಢತೆ, ಸಮಸ್ಯೆಗಳು ಮತ್ತು ಪರಿಹಾರ ಮುಂತಾದ ವಸ್ತುಗಳನ್ನಾರಿಸಿಕೊಂಡು ಕಥೆ, ಕವನ, ಕಾದಂಬರಿ ಮತ್ತು ಲೇಖನಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಮರ್ಥವಾಗಿ ನಿರೂಪಿಸಿದವರು.
ಆನಂದಿ ಸದಾಶಿವರಾವ್ 1929ರ ಜನವರಿ 20ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ನರಸಪ್ಪಯ್ಯ. ತಾಯಿ ಕಾವೇರಿಬಾಯಿ. ಕದ್ರಿಯ ಮುನಿಸಿಪಲ್ ಶಾಲೆ, ಬೆಸೆಂಟ್ ಬಾಲಿಕಾ ಪಾಠಶಾಲೆ, ಬಲ್ಮಠದ (BELMONT ಎಂಬ ಯುರೋಪಿಯನ್ ಇದ್ದ ಮನೆ ಹೆಸರಿನ ಜಾಗ-ಈಗ ಬಲ್ಮಠ) ಸರಕಾರಿ ಹೆಣ್ಣುಮಕ್ಕಳಶಾಲೆ, ಮಂಗಳೂರಿನ ಸೇಂಟ್ ಆಗ್ನೇಸ್ ಕಾಲೇಜು ಹೀಗೆ ವಿವಿಧೆಡೆಯಲ್ಲಿ ಇವರ ಶಿಕ್ಷಣ ನಡೆಯಿತು.
ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಜೊತೆಗೆ ಕನ್ನಡವನ್ನು ಬೋಧಿಸುತ್ತಿದ್ದ ಕಡೆಂಗೋಡ್ಲು ಶಂಕರ ಭಟ್ಟರ ಪ್ರಭಾವದಿಂದ ಆನಂದಿ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ ಬೆಳೆಯಿತು.
ಇಂಟರ್ ಮೀಡಿಯೆಟ್ ಮುಗಿಸಿದ ನಂತರ ನ್ಯಾಯವಾದಿ ಸದಾಶಿವರಾಯರೊಡನೆ ಆನಂದಿ ಅವರ ವಿವಾಹವಾಯಿತು. ಗಂಡನ ಮನೆಯಲ್ಲಿ ಸಾಹಿತ್ಯ ಕೃಷಿಗೆ ದೊರೆತ ಪ್ರೋತ್ಸಾಹದಿಂದ ಪತ್ರಿಕೆಗಳಿಗೆ ಬರೆಯತೊಡಗಿದರು. ಆನಂದಿ ಅವರು ಬರೆದ ಸಣ್ಣಕಥೆಗಳು ಜನಪ್ರಗತಿ, ಕಥಾವಳಿ, ಪ್ರಜಾಮತ, ಕರ್ಮವೀರ, ರಾಷ್ಟ್ರಬಂಧು, ಚಿತ್ರಗುಪ್ತ, ಸಚೇತನ ರಾಯಭಾರಿ, ನವಯುಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
1961ರಲ್ಲಿ ಪ್ರಕಟವಾದ ‘ಅಪರ್ಣಾ’ ಆನಂದಿ ಅವರ ಮೊದಲ ಕಥಾಸಂಕಲನ. ಇದರಲ್ಲಿ ಹದಿಮೂರು ಕಥೆಗಳಿವೆ. ಎರಡನೆಯ ಕಥಾಸಂಕಲನ ‘ಕಲಾವಿದ’ 1985ರಲ್ಲಿ ಪ್ರಕಟವಾಯಿತು. ಇದರಲ್ಲಿ ಹನ್ನೆರಡು ಕಥೆಗಳಿವೆ. ನಂತರ ಪ್ರಕಟಗೊಂಡದ್ದು ‘ಸ್ವಾಭಿಮಾನ’. ಇದರಲ್ಲಿ ಹನ್ನೆರಡು ಕಥೆಗಳಿವೆ. 2003ರಲ್ಲಿ ಪ್ರಕಟಗೊಂಡ ಕಥಾಸಂಕಲನ ‘ಉಡುಗೊರೆ ಮತ್ತು ಇತರ ಕಥೆಗಳು’.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: