ಚಿತ್ತಾಪುರ: ‘ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧ ಕೃತ್ಯ ಎಸಗುವವರೊಂದಿಗೆ ಸಂಪರ್ಕ ಇರುವ ಪೊಲೀಸ್ ಸಿಬ್ಬಂದಿ ವಿರುದ್ದ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು.
ತಾಲ್ಲೂಕಿನ ದಂಡೋತಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಹಿನ್ನೆಯಲ್ಲಿರುವ ಹಾಗೂ ಕಾನೂನು ಬಾಹಿರ ಚಟುವಟಿಕೆ ಮತ್ತು ಕೃತ್ಯ ಎಸಗುವವರೊಂದಿಗೆ ಐದಾರು ಜನ ಪೊಲೀಸ್ ಸಿಬ್ಬಂದಿ ಸಂಪರ್ಕ ಹೊಂದಿರುವ ಬಗ್ಗೆ ನನಗರ ವರದಿ ಬಂದಿಲ್ಲ. ಬಂದರೆ ಕೂಲಂಕುಷವಾಗಿ ಪರಿಶೀಲಿಸಿ ಇಲಾಖೆಯ ಶಿಸ್ತು ಕಾಪಾಡಲು ಸಿಬ್ಬಂದಿ ವಿರುದ್ದ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.
ಆರು ಸಿಬ್ಬಂದಿ ವಿರುದ್ದ ವರದಿ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಗಾಂಜಾ ವಿಚಾರವಾಗಿ ಯುವಕನ ಕೊಲೆ ಘಟನೆ ನಂತರ ಪೊಲೀಸರ ವಿರುದ್ದ ಸಾರ್ವಜನಿಕವಾಗಿ ವ್ಯಾಪಕವಾಗಿ ಟಿಕೆಗಳು ವ್ಯಕ್ತವಾಗಿದ್ದವು. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರೊಂದಿಗೆ ಕೆಲವು ಪೊಲೀಸ್ ಸಿಬ್ಬಂದಿ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪವು ಕೇಳಿ ಬಂದಿತ್ತು.
ಗಾಂಜಾ ವಿಚಾರ ಮತ್ತು ಕೊಲೆ ಘಟನೆ ತಡೆಯಲ ವಿಫಲರಾದ ಆರೋಪದಡಿ ಪಿಎಸ್ಐ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಶಾ ಪಂತ್ ಆದೇಶ ಹೊರಡಿಸಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದರು.
ಸಾರ್ವಜನಿಕವಾಗಿ ಕೇಳಿ ಬಂದ ಆರೋಪದ ಕುರಿತು ಗುಪ್ತ ವಿಚಾರಣೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರೊಬೆಷನರಿ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರು ಆರು ಜನ ಸಿಬ್ಬಂದಿ ವಿರುದ್ದ ಮೇಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಯಾವ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಲಾಗಿದೆ ಎಂಬ ವಿಷಯ ತಿಳಿದ ಪೊಲೀಸ್ ಸಿಬ್ಬಂದಿ ಠಾಣೆಯಿಂದ ವರ್ಗಾವಣೆಗೆ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸಿಬ್ಬಂದಿ ವಿರುದ್ದ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಿರುವ ಕುರಿತು ಗಮನ ಹರಿಸಿ ಎಂದು ಎಸ್.ಪಿ ಇಶಾ ಪಂತ್ ಅವರು ಮಂಗಳವಾರ ಶಹಾಬಾದ್ ಡಿವೈಎಸ್ಪಿ ಉಮೇಶ ಚಿಕ್ಕಮಠ ಅವರಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಇಬ್ಬರ ವಿರುದ್ದ ಪ್ರಕರಣ: ಪಟ್ಟಣದಲ್ಲಿ ಗಾಂಜಾ ಸೇವನೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಗಂಗಮ್ಮ ಈಚೆಗೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮಹ್ಮದ್ ಅಸ್ಲಾಂ ಮಹ್ಮದ್ ಹುಸೇನ್, ಶೇಕ್ ಹುಸೇನ್ ಮೆಹಬೂಬ್ ಶೇಕ್ ಎಂಬುವವರು ಗಾಂಜಾ ಸೇವಿಸುತ್ತಿದ್ದಾಗ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: