ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಇಂದು ಈ ಮಹಾನ್ ಸಂತರ ಸಂಸ್ಮರಣಾ ದಿನ.
ಅರವಿಂದರು 1872ರ ಆಗಸ್ಟ್ 15ರಂದು, ಕಲಕತ್ತೆಯಲ್ಲಿ ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರರಾಗಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯವರು ಅರವಿಂದರಿಗೆ ‘ಒರೊಬಿಂದೋ ಅಕ್ರಾಯ್ಡ್ ಘೋಷ್’ ಎಂಬ ಜನ್ಮನಾಮವನ್ನು ಕೊಟ್ಟರು. ಭಾರತೀಯತೆಯ ಪ್ರಭಾವ ತಮ್ಮ ಮಕ್ಕಳ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಅವರನ್ನು ಇಂಗ್ಲೆಂಡಿಗೆ ರವಾನಿಸಿದರು. ಇಂಗ್ಲೆಂಡಿನಲ್ಲಿಯೇ 13ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದುಕೊಂಡರು. ಹಾಗೆಯೇ, ಅನೇಕ ಯೂರೋಪಿನ ಭಾಷೆಗಳಲ್ಲಿಯೂ ಪ್ರವೀಣರಾದರು. ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಭಾಷೆಗಳಲ್ಲಿ ಕೆಲವು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿ ಮಾಡುವುದರಿಂದ ನುಣುಚಿಕೊಳ್ಳುವುದರ ಮೂಲಕ ತಮ್ಮನ್ನು ಅನರ್ಹಗೊಳಿಸಿಕೊಂಡರು.
1893ರಲ್ಲಿ ಭಾರತಕ್ಕೆ ಹಿಂದಿರುಗಿದ ಅರವಿಂದರು ಬರೋಡದ ಮಹಾರಾಜರ ಆಸ್ಥಾನದಲ್ಲಿ ಉದ್ಯೋಗಸ್ಥರಾದರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರಲ್ಲದೆ, ಭಾರತೀಯ ಭಾಷೆಗಳಾದ ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳುಗಳಲ್ಲಿ ಪ್ರಭುತ್ವ ಗಳಿಸಿದರು. ಬಂಗಾಳದ ವಿಭಜನೆಯ ನಂತರ 1906ರಲ್ಲಿ ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದ ಅರವಿಂದರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡು ‘ಬಂದೇ ಮಾತರಂ’ ಎಂಬ ಪತ್ರಿಕೆಯ ಸಂಪಾದಕತ್ವವನ್ನೂ ವಹಿಸಿಕೊಂಡರು. ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಎಂಬ ಚಿಂತನೆಯಿಂದ ವಿಷ್ಣು ಭಾಸ್ಕರ ಲೇಲೆ ಎಂಬ ಯೋಗಿಯನ್ನು ಸಂಧಿಸಿದರು. ಈ ಯೋಗಿಗಳು ಕಲಿಸಿಕೊಟ್ಟ ವಿಧಾನಗಳನ್ನನುಸರಿಸಿ ತಾವು ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡುದಾಗಿ ಅರವಿಂದರು ಹೇಳಿದ್ದಾರೆ. ಅದೇ ವರ್ಷ, ಒಂದು ವರ್ಷಕಾಲದವರೆವಿಗೆ ಅವರು ಅಲೀಪುರ ವಿಸ್ಫೋಟ ಪ್ರಕರಣದಲ್ಲಿ ವಿಚಾರಣೆಗೊಳಲ್ಪಟ್ಟ ಬಂಧಿಯಾದರು. ಸೆರೆಮನೆಯಲ್ಲಿದ್ದ ಈ ಅವಧಿಯಲ್ಲಿ ನನಗೆ ‘ಸಗುಣ ಬ್ರಹ್ಮದ ಸಾಕ್ಷಾತ್ಕಾರ’ ಪಡೆದುಕೊಳ್ಳುವುದು ಸಾಧ್ಯವಾಯಿತೆಂದೂ ಅರವಿಂದರು ಹೇಳಿಕೊಂಡಿದ್ದಾರೆ. 1909ರಲ್ಲಿ ಖುಲಾಸೆಯಾಗಿ ಹೊರಬಂದ ಅರವಿಂದರು, ತಮ್ಮ ಅಂತರಾತ್ಮದಾದೇಶವನ್ನನುಸರಿಸಿ 1910ರಲ್ಲಿ ಪುದುಚೇರಿಗೆ ಬಂದು ಯೋಗಸಾಧನೆಯಲ್ಲಿ ನಿರತರಾದರು.
Please follow and like us: