ಬೆಂಗಳೂರು,ಮಾ.14- ತಾವು ನಿರ್ವಹಿಸುತ್ತಿರುವ ಖಾತೆಗೂ, ಪಕ್ಷಕ್ಕೂ ನ್ಯಾಯ ನೀಡದೆ ಹೊರೆ ಆಗಿರುವವರ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕೆಂದು ಅಸಮರ್ಥ ಸಚಿವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನಿಭಾಯಿಸುತ್ತಿರುವ ಕೆಲವರು ತಾವು ನಿರ್ವಹಿಸುತ್ತಿರುವ ಖಾತೆಗೂ, ತಾವಿರುವ ಪಕ್ಷಕ್ಕೂ ನ್ಯಾಯ ಒದಗಿಸದೆ ಅನಗತ್ಯ ಹೊರೆ ಆಗಿರುವವರ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗಮನಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ವಿಳಂಬಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ವಿಳಂಬದಿಂದ ಹಲವರು ಪರಿಸ್ಥಿತಿಯ ಲಾಭ ಪಡೆದು ಎಂಜಾಯ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಯಾವುದೇ ಕೊಡುಗೆ ನೀಡದವರನ್ನು ಹುದ್ದೆಯಿಂದ ಕೈಬಿಡಬೇಕು ಎಂದು ಸಿ.ಟಿ.ರವಿ ಹೇಳಿದರು.
ನಿಗಮ ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಆಗಬೇಕಿತ್ತು. ಈವರೆಗೆ ಯಾಕೆ ಆಗಿಲ್ಲ ಎಂಬುದು ಗೊತ್ತಿಲ್ಲ ಎಂದರು.ಬಿ.ವೈ.ವಿಜಯೇಂದ್ರ ಅವರಿಗೆ ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಣ್ಣದಲ್ಲ. ಅದನ್ನು ಸಣ್ಣ ಹುದ್ದೆ ಎಂದು ಪರಿಗಣಿಸಿದರೆ ನಾನು ಏನು ಹೇಳಬೇಕೋ ಗೊತ್ತಿಲ್ಲ ಎಂದು ವಿಜಯೇಂದ್ರ ಅವರಿಗೆ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಅವರಿಗೆ ಸೋಲಿನ ಮೇಲೆ ಸೋಲಾದರೂ, ಅವಮಾನವಾದರೂ ಸೋನಿಯಾ ಗಾಂಧಿಯವರು ಅಧ್ಯಕ್ಷರಾಗಬೇಕೆಂದಿದ್ದಾರೆ. ಕಾಂಗ್ರೆಸ್ನವರಿಗೆ ಹಳೆಗಂಡನ ಪಾದವೇ ಗತಿ ಎಂದು ಟೀಕಿಸಿದರು. ಬಿಜೆಪಿ ಸಂಸದೀಯ ಮಂಡಳಿ ಸಭೆಯ ನಂತರ ಗೋವಾ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹೋಳಿ ಹಬ್ಬದ ನಂತರ ಗೋವಾ ಸರ್ಕಾರ ರಚನೆಯಾಗಲಿದೆ ಎಂದು ಅವರು ಹೇಳಿದರು.