ಬೆಂಗಳೂರು, ಜನವರಿ 12: ಕರ್ನಾಟಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ವ್ಯಾಪಕ ಕಸರತ್ತು ನಡೆಸಿವೆ. ಎಲ್ಲ ಪಕ್ಷಗಳಲ್ಲೂ ಟಿಕೆಟ್ ಹಂಚಿಕೆಯದ್ದೇ ಚರ್ಚೆಗಳು ಕೇಳಿಬರುತ್ತಿವೆ. ಫೆಬ್ರುವರಿಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಜನವರಿ ಕೊನೆಯ ವಾರದಲ್ಲಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಸಿದ್ದಪಡಿಸಲಿದೆ. ಜೆಡಿಎಸ್ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಬಗ್ಗೆ ಇಷ್ಟು ದಿನ ಚರ್ಚೆಗಳು ನಡೆದಿದ್ದವು. ಈಗ ಆ ಚರ್ಚೆಯೂ ಮುಕ್ತಾಯಗೊಂಡಿದೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ
ಕೋಲಾರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸಲಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಅವರೇ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ನೆರೆದಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತ್ತು. ಕೋಲಾರದಲ್ಲಿ ಗೆಲ್ಲಿಸಿಯೇ ತೀರುತ್ತೇವೆ ಎಂಬ ಘೋಷಣೆಗಳನ್ನು ಅಭಿಮಾನಿಗಳು ಕೂಗಿದ್ದರು. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಹಿಂದೆಯೇ ಮತ್ತೆ ಚರ್ಚೆಗಳು ಹುಟ್ಟಿಕೊಂಡಿವೆ. ಈಗಿರುವ ಕೋಲಾರ ಶಾಸಕ ಜೆಡಿಎಸ್ನ ಶ್ರೀನಿವಾಸಗೌಡರಿಗೆ ಸಂಬಂಧಿಸಿರುವ ಚರ್ಚೆಗಳು.
2018 ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಜಯಗಳಿಸಿದ್ದ ಶ್ರೀನಿವಾಸಗೌಡರು ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷ ನಡೆದಿದ್ದ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಜೆಡಿಎಸ್ನೊಂದಿಗೆ ಇರುವ ಅಸಮಾಧಾನವನ್ನು ಹೊರಹಾಕಿದ್ದರು. ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ಐ ಲವ್ ಕಾಂಗ್ರೆಸ್’ ಎಂದು ಹೇಳಿಕೆ ನೀಡಿದ್ದರು. ಆಗಿನಿಂದಲೇ ಶ್ರೀನಿವಾಸಗೌಡರ ಕಾಂಗ್ರೆಸ್ ಸೇರ್ಪಡೆ ನಿಚ್ಚಳವಾಗಿತ್ತು. ಅವರು ತಮ್ಮ ಬೆಂಬಲಿಗನೊಂದಿಗೆ ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿದೆ.
https://play.google.com/store/apps/details?id=com.speed.newskannada