ಸರ್ಕಾರಿ ಶಾಲಾ ಮಕ್ಕಳಿಂದ ಶೂ-ಸಾಕ್ಸ್ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಡುತ್ತಿರುವ ಎಡವಟ್ಟುಗಳು ಒಂದೋ, ಎರಡೋ? ಮೊದಲು ಈ ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಅನುದಾನ ಮೀಸಲಿಡದೇ ಇರುವುದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದ ಸೈಕಲ್, ಶೂ, ಸಾಕ್ಸ್ ಯೋಜನೆಗಳನ್ನು ಶಿಕ್ಷಣ ಇಲಾಖೆ ಕೈ ಬಿಟ್ಟಿತ್ತು.
ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.
ಬೊಮ್ಮಾಯಿ ಅವರನ್ನ ನಿದ್ದೆಯಿಂದ ನಾವು ಏಳಿಸಬೇಕು
ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸುವ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಸಿಎಂ ಬಸವರಾಜ ಬೊಮ್ಮಾಯಿ ಅವರ ನಿದ್ದೆ ಬಿಡಿಸಬೇಕಾದರೆ ನಾವು ಎಚ್ಚರಿಸಬೇಕಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ತಕ್ಷಣ ವಿತರಣೆ ಕಾರ್ಯ ಆರಂಭವಾಗಬೇಕು
ಟ್ವೀಟ್ ಮಾಡುವ ಜತೆಗೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿರುವ ಅವರು, ಶೂ, ಸಾಕ್ಸ್ ಬಗ್ಗೆ ಸಚಿವರ ಹೇಳಿಕೆ ವಿಚಾರ ಪ್ರಸ್ತಾಪಿಸಿ, ನಾವು ಬಡಮಕ್ಕಳಿಗೆ ಅನುಕೂಲವಾಗಲೆಂದು ಸಾಕ್ಸ್ , ಶೂ ಕೊಡುತ್ತಿದ್ದೆವು. ಆದರೆ ಇವರು ನಿಲ್ಲಿಸಲು ಹೊರಟರು. ನಾವು ಒತ್ತಾಯ ಮಾಡಿದ ಮೇಲೆ ಕೊಡುತ್ತೇವೆ ಎಂದರು. ಶಾಲೆಗಳು ಆರಂಭವಾಗಿವೆ. ಶೂ, ಸಮವಸ್ತ್ರ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ. ತಕ್ಷಣ ವಿತರಣೆ ಕಾರ್ಯ ಆರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann