ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಸಹಮತ ಸೂಚಿಸಿದ್ದು, ಶೀಘ್ರದಲ್ಲೆ ಈ ಬಗ್ಗೆ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ. ‘‘ಸುಮಲತಾ ಅವರು ಬಿಜೆಪಿಗೆ ಸೇರಲು ಆಸಕ್ತರಾಗಿದ್ದಾರೆ. ಇದರಿಂದ ಅವರ ರಾಜಕೀಯ ಭವಿಷ್ಯಕ್ಕೂ, ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಬಿಜೆಪಿಗೂ ಅನುಕೂಲವಾಗುತ್ತದೆ. ಈ ಎಲ್ಲವನ್ನೂ ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಪಕ್ಷದ ವರಿಷ್ಠರ ಸಮ್ಮತಿ ಬಳಿಕ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ,’’ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈ ನಡುವೆ, ಬೆಂಗಳೂರಿನ ರೇಸ್ಕೋರ್ಸ್ ರಸ್ತೆಗೆ ನಟ ಅಂಬರೀಶ್ ಹೆಸರಿಡಲು ಸರಕಾರ ನಿರ್ಧರಿಸಿದ್ದು, ಇದೂ ಸಹ ಅಂಬರೀಶ್ ಕುಟುಂಬವನ್ನು ಕಮಲದ ತೆಕ್ಕೆಗೆ ಸೆಳಯುವ ಕಾರ್ಯತಂತ್ರದ ಭಾಗವೇ ಆಗಿದೆ ಎಂದು ಹೇಳಲಾಗಿದೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಮಲತಾ ಗೆಲುವು ದಾಖಲಿಸಿದ್ದರು. ಅಂದು ಜೆಡಿಎಸ್-ಕಾಂಗ್ರೆಸ್ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಯಶಸ್ಸು ಗಳಿಸುವಲ್ಲಿ ಬಿಜೆಪಿ ಪಾತ್ರವೂ ಇತ್ತು. ಕಾಂಗ್ರೆಸ್ನ ಒಂದು ಗುಂಪು ಹಿನ್ನೆಲೆಯಲ್ಲಿ ನಿಂತು ಸುಮಲತಾ ಅವರಿಗೆ ಬೆಂಬಲಿಸಿತ್ತು ಎಂದು ಹೇಳಲಾಗಿತ್ತು. ಜತೆಗೆ ಅಂಬರೀಷ್ ನಾಮಬಲ ಸುಮಲತಾ ಕೈ ಹಿಡಿದಿತ್ತು.ಚುನಾವಣೆ ಬಳಿಕ ಬಿಜೆಪಿ, ಕಾಂಗ್ರೆಸ್ನಿಂದ ಸುಮಲತಾ ಸಮಾನ ಅಂತರ ಕಾಯ್ದುಕೊಂಡು ಬಂದಿದ್ದರು. ಆದರೆ, ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲಪಡಿಸುವ ಯತ್ನದಲ್ಲಿರುವ ಬಿಜೆಪಿ ಸುಮಲತಾ ಅವರೊಂದಿಗೆ ಸಂಪರ್ಕದಲ್ಲಿತ್ತು. ಮತ್ತೊಂದೆಡೆ ಕಾಂಗ್ರೆಸ್ನಿಂದಲೂ ಸುಮಲತಾ ಅವರಿಗೆ ಆಹ್ವಾನವಿತ್ತು. ಈ ನಡುವೆಯೂ ರಕ್ಷಣಾತ್ಮಕವಾಗಿಯೇ ನಡೆದುಕೊಂಡು ಬಂದಿದ್ದ ಸುಮಲತಾ ಮಂಡ್ಯದ ರಾಜಕಾರಣವನ್ನು ನಿಭಾಯಿಸುತ್ತ ಬಂದಿದ್ದರು.
https://play.google.com/store/apps/details?id=com.speed.newskannada