ಬೆಂಗಳೂರು,ಏ.23- ಪಿಎಸ್ಐ ನೇಮಕಾತಿಯ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನ ಪ್ರಕಾರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನರುಚ್ಚರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಇದನ್ನು ಸಿಐಡಿಗೆ ವಹಿಸಿದ್ದೇವೆ. ತನಿಖಾ ತಂಡದವರು ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೆ ನಡೆದಿರುವ ನೇಮಕಾತಿ ಹಾಗೂ ಕಳೆದ ಫೆಬ್ರವರಿಯಲ್ಲಿ 402 ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲೂ ಅಕ್ರಮ ಎಸಗಲು ಇಬ್ಬರು ನಡೆಸಿರುವ ಆಡಿಯೋ ಸಂಭಾಷಣೆ ಕುರಿತು ತನಿಖೆ ನಡೆಸಲಿದ್ದೇವೆ. ಆ ಪಕ್ಷ, ಈ ಪಕ್ಷ ಯಾವುದನ್ನೂ ನೋಡದೇ ತಪ್ಪಿತಸ್ಥರು ಯಾರೇ ಇರಲಿ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಶಾಸಕ ಪ್ರಿಯಾಂಕ ಖರ್ಗೆ ಅವರು ಇಬ್ಬರು ನಡೆಸಿರುವ ಸಂಭಾಷಣೆ ಕುರಿತಂತೆ ಬಿಡುಗಡೆ ಮಾಡಿರುವ ಆಡಿಯೋ ಸಂಭಾಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಬಳಿ ಹೆಚ್ಚಿನ ದಾಖಲೆಗಳಿದ್ದರೆ ತನಿಖಾ ತಂಡಕ್ಕೆ ನೀಡಲಿ. ಇದು ತನಿಖೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ದೆಹಲಿ ಪ್ರವಾಸ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮುಖ್ಯ ನ್ಯಾಯಾೀಧಿಶರ ಸಮ್ಮೇಳನ ಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ನನಗೂ ಆಹ್ವಾನ ಬಂದಿದೆ. ಹಾಗಾಗಿ ಇದರಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.
ವಿದೇಶದಿಂದ ದೂರವಾಣಿ ಕರೆ ಹಾಗೂ ಇಮೇಲ್ ಬಂದಿರುವುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. ಆಗಾಗ್ಗೆ ಕೆಲವು ಸಮಾಜಘಾತುಕ ಶಕ್ತಿಗಳು ಎಲ್ಲೋ ಕುಳಿತು ಈ ರೀತಿ ದೂರವಾಣಿ ಕರೆಗಳನ್ನು ಮಾಡಿ ಬೆದರಿಕೆ ಹಾಕುವುದು ಅಥವಾ ವಿದೇಶದಿಂದ ಇಮೇಲ್ ಮಾಡುವುದು ಹೊಸದೇನಲ್ಲ. ಹಿಂದೆಯೂ ಈ ರೀತಿ ಆಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಈಗಲೂ ಕೂಡ ಅಗತ್ಯವಿದ್ದರೆ ಅವರು ಕ್ರಮ ಕೈಗೊಳ್ಳುತ್ತಾರೆ. ನನಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada