ನಗರಸಭೆ ತೆರಿಗೆ ದುಬಾರಿ, ಆದರೂ ಬಿಡೋದು ಕೊಳಚೆ ನೀರು ಎಂದು ಶಪಿಸುತ್ತಿದ್ದಾರೆ ಚನ್ನಪಟ್ಟಣ ಬಡಾವಣೆಯ 34ನೇ ವಾರ್ಡಿನ ನಿವಾಸಿಗಳು. ಹೇಳಿ ಕೇಳಿ ನಗರಸಭೆ ಅಧ್ಯಕ್ಷರ ವಾರ್ಡ್ನಲ್ಲೇ ಈ ಸ್ಥಿತಿಯಾದರೆ ಉಳಿದ 34 ವಾರ್ಡ್ಗಳಿಗೆ ಅದ್ಯಾವ ರೀತಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆಯೋ ಎಂದು ಜನರು ಪ್ರಶ್ನಿಸುತ್ತಿದ್ದಾರೆ.ಹೇಮಾವತಿ ಜಲಾಶಯ ಮಳೆಗಾಲದಲ್ಲಿ ಮೂರು ಬಾರಿ ತುಂಬು ತುಳುಕಿದೆ. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇಂದಿಗೂ 21.994 ಟಿಎಂಸಿ ನೀರಿನ ಸಂಗ್ರಹವಿದೆ. ಹೀಗಾಗಿ ಬೇಸಿಗೆಯಲ್ಲೂ ಕುಡಿಯುವ ನೀರಿನ ತೊಂದರೆ ತಲೆದೋರುವ ಸಾಧ್ಯತೆಯೇ ಇಲ್ಲ.ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದು, ಪ್ರತಿನಿತ್ಯ ನಗರಕ್ಕೆ 32 ಎಂಎಲ್ಡಿ(ಮಿಲಿಯನ್ ಲೀಟರ್ ಫಾರ್ ಡೇ) ನೀರನ್ನು ಲಿಫ್ಟ್ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ, ವೋಲ್ಟೇಜ್ ಸಮಸ್ಯೆ ಕಾರಣದಿಂದ ನಿತ್ಯ 25ರಿಂದ 30 ಎಂಎಲ್ಡಿ ನೀರು ಬಂದೇ ಬರುತ್ತಿದೆ. ಇಷ್ಟು ಪ್ರಮಾಣದ ನೀರು ಬಂದರೂ, ಮೂರು ಸಾವಿರದಷ್ಟು ಜನಸಂಖ್ಯೆ ಇರುವ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆಗೆ ಸರಬರಾಜು ಆಗುತ್ತಿರುವ ನೀರು ಕುಡಿಯುವುದು ಇರಲಿ, ನಲ್ಲಿಯ ಬಳಿ, ಇಲ್ಲವೇ ಟ್ಯಾಂಕ್ ಮುಚ್ಚಳ ತೆರೆದರೆ ಸಾಕು ಕೆಟ್ಟವಾಸನೆ ಮೂಗಿಗೆ ರಾಚುತ್ತಿದೆ. ನೀರಿನ ಬಣ್ಣ ಸಂಪೂರ್ಣ ಬದಲಾಗಿದ್ದು, ತಿಳಿಯಾಗಿರಬೇಕಿದ್ದ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಟ್ಯಾಂಕ್ ಸಂಪೂರ್ಣ ಯುಜಿಡಿ ನೀರು ಮಿಶ್ರಿತವಾಗಿ ಇಲ್ಲಿನ ಬಹುತೇಕ ಜನ ಟ್ಯಾಂಕರ್ ನೀರಿಗೆ ಮೊರೆಹೋಗಿದ್ದಾರೆ, ಕುಡಿಯಲು ಬಿಸ್ಲೆರಿ ನೀರಿಗಾಗಿ ಸಾವಿರಾರು ರೂ.ಖರ್ಚು ಮಾಡುವುದು ಅನಿವಾರ್ಯ ಎನ್ನುತ್ತಾರೆ ಬಡಾವಣೆಯ ವಾಸಿ ಗೋಪಾಲ್ ಹೌಸಿಂಗ್ ಬೋರ್ಡ್ನವರು ನಿರ್ಮಿಸಿದ ಬಡಾವಣೆಯನ್ನು ಕೆಲ ವರ್ಷದ ಹಿಂದೆ ನಗರಸಭೆ ವಶಕ್ಕೆ ಒಪ್ಪಿಸಲಾಯಿತು. ಗದ್ದೆ ಪ್ರದೇಶದಲ್ಲಿ ಬಡಾವಣೆ ತಲೆ ಎತ್ತಿರುವ ಕಾರಣ ಮೊದಲೇ ನಾನಾ ಸಮಸ್ಯೆ ಎದುರಿಸುತ್ತಿರುವ ಜನ ಶುದ್ಧ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಹೊಸದಾಗಿ ಈ ಬಡಾವಣೆಯನ್ನು ನಗರಸಭೆಗೆ ಸೇರಿಸಿಕೊಂಡಿರುವ ಕಾರಣ ಪ್ರತಿಯೊಬ್ಬ ಮನೆಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಬೇಕು, ತೆರಿಗೆ ಲಕ್ಷ, ಲಕ್ಷ ಪಾವತಿಸಿದರೂ, ಶುದ್ಧ ಕುಡಿಯುವ ನೀರಿನ ಭಾಗ್ಯವಿಲ್ಲ ಎಂದು ಬಡಾವಣೆಯ ನಿವಾಸಿಗಳು ದೂರುತ್ತಾರೆ. ಕೇವಲ ಚನ್ನಪಟ್ಟಣ ಬಡಾವಣೆಯಷ್ಟೇ ಅಲ್ಲ, ಆಡುವಳ್ಳಿ , ಸಿದ್ದಯ್ಯನಗರ ಮತ್ತಿತರ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲಎಂಬ ದೂರಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada