ಚಿದಾನಂದಮೂರ್ತಿ ಸಂಸ್ಮರಣೆ

 
ನಮ್ಮ ಚಿದಾನಂದಮೂರ್ತಿಗಳು ಸಂಸ್ಮರಣಾ ದಿನವಿದು.
ಎಂಬತ್ತರ ದಶಕದಲ್ಲಿ ಅಲ್ಲಿ ಇಲ್ಲಿ ಓಡಾಡಿದರೆ, ಕನ್ನಡ, ಸಂಸ್ಕೃತಿ ಮತ್ತು ಚಳುವಳಿ ಅಂತ ಹೋದರೆ, ಏನೋ ಕೋಡಿರುತ್ತೆ ಅಂತ ಭ್ರಮಿಸಿದ್ದೆ. ಮಾತಾಡುವುದು ಕನ್ನಡ ಅನ್ನೋದು ಬಿಟ್ಟು ಏನೂ ಗೊತ್ತಿಲ್ಲದ ಮಂಕುಬಡಿದಿದ್ದ ಅಪ್ರಾಪ್ತ ತಾರುಣ್ಯ ನನ್ನದು. ಒಂದಷ್ಟು ಗೆಳೆಯರು ನಡೀ ಅಂದರೆ ಅವರ ಹಿಂದೆ ಹೊರಟುಬಿಡುತ್ತಿದ್ದೆ. ಮೊದಲ ಸಲ ಹೋದಾಗ ಸೆಂಟ್ರಲ್ ಕಾಲೇಜು ಬಳಿ ನಿಂತಿದ್ದ ಮೂರುನಾಲ್ಕು ಜನರಲ್ಲಿ ಒಬ್ಬರ ಬಳಿ ಗೆಳೆಯ ರಾಮಚಂದ್ರ, “ನಮಸ್ಕಾರ ಸಾರ್” ಅಂತ ಹೇಳಿ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟ. ಬನ್ನಿ ಶ್ರೀಧರ್ ಎಂದು ಆಪ್ತವಾಗಿ ಬರಮಾಡಿಕೊಂಡ್ರು. ಅವರೇ ಮಹಾನ್ ಸಂಶೋಧಕ ಮತ್ತು ವಿದ್ವಾಂಸ ಚಿದಾನಂದಮೂರ್ತಿ ಅಂತ ಗೊತ್ತಾಯ್ತು. ಅವರ ಜೊತೆ ಹಲವು ಸಲ ಗೋಕಾಕ್ ಚಳುವಳಿ, ನಬಾರ್ಡ್ ಚಳುವಳಿ, ದೂರದರ್ಶನದಲ್ಲಿ ಉರ್ದುವಾರ್ತೆ ಹೇರಿಕೆ ಇತ್ಯಾದಿ ಏನೇನೋ ಅಂತ ಮೆರವಣಿಗೆ ಹೋದಾಗಲೂ ಇರುತ್ತಿದ್ದದ್ದು ಒಂದು ಹತ್ತಿಪ್ಪತ್ತು ಜನ. ಇಲ್ಲಿ ಭಾಗವಹಿಸುವುದು ಜನಪ್ರಿಯತೆಯ ಕೋಡು ತರಿಸುವುದಿಲ್ಲ ಅಂತ ಬೇಗ ಗೊತ್ತಾಯ್ತು. ಆದರೆ, ಈ ಮಹಾನ್ ಚೇತನದ ಹಿಂದೆ ಆಗಾಗ ನಡೆಯುವ ಸೌಭಾಗ್ಯ ಕಳೆದುಕೊಳ್ಳುವುದನ್ನು ಮನ ಇಷ್ಟಪಡಲಿಲ್ಲ. ಮುಂದೆ ಗೋಕಾಕ್ ಚಳುವಳಿ ಅನ್ನೋದು ಕನ್ನಡದ ದೊಡ್ಡ ಬೆಳವಣಿಗೆ ಆಗಿ ಅಲ್ಲಿ ಪ್ರಚಾರ ದೊಡ್ಡದಾಗಿ ನಾವೆಲ್ಲ ಸೊಳ್ಳೆಗಳ ಹಾಗೆ ಅಲ್ಲಿ ಮೂಡಿದ ಧೂಳಿನ ಹೊಗೆಯಿಂದ ಹಾರಿಹೋಗಬೇಕಾಯ್ತು. ಆದರೆ ಚಿದಾನಂದಮೂರ್ತಿ ಅವರ ಅನನ್ಯ ಸಾತ್ವಿಕ ಗುಣಮೌಲ್ಯ ಸಾನ್ನಿಧ್ಯ ನನ್ನಲ್ಲಿ ಕನ್ನಡದ ಕಂಪನ್ನು ಆಸ್ವಾದಿಸುವ ಗುಣವನ್ನು ಶಾಶ್ವತವಾಗಿ ಉಳಿಸಿದೆ ಎಂಬುದರಲ್ಲಿ ಸಂದೇಹ ಉಳಿದಿಲ್ಲ. 2020ರ ಜನವರಿ 11ರಂದು ಅವರು ಹೋಗಿಬಿಟ್ಟರು ಎಂದು ನನ್ನ ಆತ್ಮೀಯರು ಸಂದೇಶ ಕಳಿಸಿದಾಗ ಅಂತರಂಗದಲ್ಲಿ ತಕ್ಷಣ ಮೂಡಿದ್ದು “ಅಷ್ಟು ದೊಡ್ಡ ಹೃದಯ, ಸಣ್ಣ ಮೂರ್ತಿ, ಚಿದಾನಂದ ಈ ಮೂರ್ತಿ”.
1982ರ ಮೊದಲ ತಿಂಗಳುಗಳು. ಬೆಂಗಳೂರಿನ ದಂಡು ಪ್ರದೇಶದ ಒಂದು ಸಿನಿಮಾ ಮಂದಿರದಲ್ಲಿ ಮುಂಗಡ ಟಿಕೆಟ್ಟಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಗಿಡ್ಡು ಎತ್ತರದ ಒಬ್ಬ ಕನ್ನಡ ಪ್ರಾಧ್ಯಾಪಕರು, “ನಾಲ್ಕು ಟಿಕೆಟ್ ಕೊಡಿ” ಎಂದು ಕೇಳಿದರು. ಕೌಂಟರಿನಲ್ಲಿದ್ದಾತ ಇಂಗ್ಲಿಷ್ನಲ್ಲಿ ಮಾತನಾಡಲು ಒತ್ತಾಯಿಸಿದ. ಕೇಳಿದವರು ಮತ್ತೆ ಕನ್ನಡದಲ್ಲಿ ಕೇಳಿದರು. ಮಾತಿಗೆ ಮಾತು ಬೆಳೆಯಿತು. ಸಿನಿಮಾ ಮಂದಿರದ ಮ್ಯಾನೇಜರ್ ಬಂದ. ಕನ್ನಡದಲ್ಲಿ ಮಾತನಾಡಿದುದಕ್ಕೆ ಅವರನ್ನು ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ. ಸುತ್ತಲೂ ಇದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಇಡೀ ಘಟನೆ ಪ್ರಾಧ್ಯಾಪಕರಲ್ಲಿ ನೋವು, ಕುಪಿತ, ಅಪಮಾನದ ಬೇಗೆ ಉಂಟುಮಾಡಿತ್ತು. ಕನ್ನಡದ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು. ಕರ್ನಾಟಕದ ಆದ್ಯಂತ ಕನ್ನಡ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಉಳಿದ ಬದುಕಿನ ವೇಳೆ, ಆಯಸ್ಸುಗಳನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಆ ಪ್ರಾಧ್ಯಾಪಕರು ಮಾಡಿದರು. ಇದಕ್ಕೆಂದೇ ಹಂಪಿಯ ಕನ್ನಡ ಭುವನೇಶ್ವರಿಯ ಮುಂದೆ ಪ್ರತಿಜ್ಞೆ ಕೈಗೊಂಡರು. ಪ್ರಾಣತ್ಯಾಗಕ್ಕೆ ಕೂಡ ಸಿದ್ಧರಾಗಿ ತಮ್ಮನ್ನು “ಕನ್ನಡ ಗರುಡ’” ಎಂದು ಭಾವಿಸಿದರು.
ಮೂರು ದಶಕ ಅವರು ಕನ್ನಡಕ್ಕಾಗಿ ಶ್ರಮಿಸಿದರು. ತಮ್ಮ ಅಮೂಲ್ಯ ಬರಹ, ಸಂಶೋಧನೆ ತೊರೆದರು. ಬಳಗ ಕಟ್ಟಿದರು. ಕೇಂದ್ರ ಸ್ಥಾಪಿಸಿದರು. ಚಳುವಳಿ ಮಾಡಿದರು. ಕನ್ನಡದ ಕಾರಣಕ್ಕೆ, ಸಮಸ್ಯೆಗಳ ಪರಿಹಾರಕ್ಕೆ ನೂರಾರು ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡ ಮಾಧ್ಯಮ, ಕನ್ನಡ ಶಾಲೆ, ಕನ್ನಡಿಗರಿಗೆ ಉದ್ಯೋಗ, ಕರ್ನಾಟಕದ ನೆಲಜಲಗಳ ಹಕ್ಕುಗಳಿಗೆ ಹೋರಾಡಿದರು. ಇದರಿಂದ ಕನ್ನಡದ ಬಗ್ಗೆ ಕರ್ನಾಟಕದಲ್ಲಿ ಸಮಗ್ರ ಜಾಗೃತಿ ಆಗದಿದ್ದರೂ ಸಾಮಾನ್ಯ ಎಚ್ಚರ ಮೂಡಿತು. ಆದರೆ ನಿರೀಕ್ಷಿಸಿದ ಪ್ರಮಾಣದ ಫಲ, ಪರಿಣಾಮಗಳು ಆಗಲಿಲ್ಲ. ಕನ್ನಡಿಗರು ತಮ್ಮ ಆಲಸ್ಯದಿಂದ, ನಿರುತ್ಸಾಹದಿಂದ, ನಿರಭಿಮಾನದಿಂದ, ನಿಷ್ಕ್ರಿಯತೆಯಿಂದ ಎದ್ದು ಬರಲು, ಮುಕ್ತವಾಗಿ ತಮ್ಮ ಬಗ್ಗೆ ಚಿಂತಿಸಲು ಚಿದಾನಂದಮೂರ್ತಿ ಆತ್ಮತ್ಯಾಗದ ನಿರ್ಧಾರ ಕೈಗೊಂಡರು. ಕರ್ನಾಟಕ “ಇತರ ನಾಡುಗಳಂತೆ ಸ್ವಾಭಿಮಾನದ ಸಂಪತ್ತಿನ ಗೂಡಾಗಿ ವಿಕಾಸ ಹೊಂದಲಿ ಉದ್ಯಮ ಶೀಲವಾಗಿ ಬೆಳೆಯಲಿ ಕರ್ನಾಟಕದಲ್ಲಿ ಉದ್ಯೋಗಗಳು ಅವರಿಗೇ ಸಿಗಲಿ, ಅವರ ಗದ್ದೆಗಳು ಅನ್ಯರ ಪಾಲಾಗದಿರಲಿ ಮಾತೃ ಭಾಷಾ ಮಾಧ್ಯಮ ಜಾರಿಗೆ ಬರಲಿ” ಎಂದು ಹಾರೈಸಿದರು. “ನನ್ನ ಆತ್ಮ ತ್ಯಾಗ ಎಲ್ಲರ ಹೃದಯಗಳಲ್ಲಿ ವಿದ್ಯುತ್ ಸಂಚಾರವುಂಟುಮಾಡಲಿ, ಹೆಚ್ಚಿನ ತ್ಯಾಗಕ್ಕೆ ಅವರನ್ನು ಸಿದ್ಧಗೊಳಿಸಲಿ” ಎಂದು ಆಶಿಸುತ್ತ ಹಂಪಿಯ ತುಂಗಭದ್ರೆಯಲ್ಲಿ ಜಲಪ್ರವೇಶ ಮಾಡಿದರು!
ಕನ್ನಡ-ಕನ್ನಡಿಗ-ಕರ್ನಾಟಕತ್ವ-ಗಳಿಗೋಸುಗ ಯಾವುದೇ ಹಿಂಜರಿಕೆ – ಭಯಗಳಿಲ್ಲದೆ, ಅಳುಕು-ಥಳುಕುಗಳಿಲ್ಲದೆ ಹೀಗೆ ಪ್ರಾಣತ್ಯಾಗದ ಧೀರ ನಿರ್ಧಾರ ಕೈಗೊಂಡ ಅಪೂರ್ವ ಕನ್ನಡಮೂರ್ತಿ ಚಿದಾನಂದಮೂರ್ತಿ.
ಚಿದಾನಂದಮೂರ್ತಿಗಳು 1931 ಮೇ 10ನೆಯ ತಾರೀಖಿನಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಹುಟ್ಟಿದರು. ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ನಡೆದುವು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು ಹತ್ತನೆಯ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಇಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು. ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಸಹಾ ಪಡೆದರು (1953). ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತೆ ರಜೆ ಹಾಕಿ ಮೈಸೂರಿನಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ಗಳಿಸಿದರು.
ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.
ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು ಬಳಿಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿ 1990ರ ಅಕ್ಟೋಬರ್ 10ರಂದು ಸ್ವಯಂಸೇವಾ ನಿವೃತ್ತಿ ಪಡೆದರು. ಅಮೆರಿಕೆ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದರು. ಸಂಶೋಧನೆಗೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತಿದ್ದರು. ಬರ್ಕ್ಲಿ, ಫಿಲಡೆಲ್ಫಿಯ, ಸ್ಟಾನ್ಫೋರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳು ಮತ್ತು ವಿಶ್ವಮಟ್ಟದ ಐತಿಹಾಸಿಕ ಬಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದರು. ಈ ಎಲ್ಲವೂ ಅವರ ನಿರಂತರ ಅಧ್ಯಯನಶೀಲತೆ ಮತ್ತು ವಿದ್ವತ್ತಿನ ಸೂಚಕಗಳಾಗಿವೆ.
ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಯುಗಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕೃತಿ ಸಂಶೋಧಕ, ತೀ.ನಂ.ಶ್ರೀ ಉತ್ತರಾಧಿಕಾರಿ ಎಂಬೆಲ್ಲ ಹೊಗಳಿಕೆಗೆ ಮೂರ್ತಿಗಳು ಪಾತ್ರರಾಗಿದ್ದರು. ಸುಮಾರು ನಾಲ್ಕು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಂಶೋಧನೆಗಳ ಕುರಿತಾದ ಮಹತ್ವದ ಬರಹಗಳನ್ನು ಪ್ರಕಟಿಸಿದ್ದರು.
ಚಿದಾನಂದಮೂರ್ತಿಗಳು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದರು. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕ ಇತಿಹಾಸ –ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದರು.
1960ರ ದಶಕದಲ್ಲಿ ತಾವು ಪ್ರಕಟಿಸಿದ ಹಲವಾರು ಲೇಖನಗಳಲ್ಲೇ ಉಂಬರಿ, ಇರ್, ಡುಂಡುಚಿ, ಅಮ್ಮ, ಅಬ್ಬೆ, ಅಲ್ಲಮ, ಬಾಮಬ್ಬೆ, ಶಬ್ದಗಳನ್ನು ಕನ್ನಡ ಭಾಷೆ, ವ್ಯಾಕರಣ, ಅವಸ್ಥಾಂತರಗಳ ಹಿನ್ನೆಲೆಯಲ್ಲಿ ಮೂರ್ತಿಗಳು ಪರಿಶೀಲಿಸಿದ್ದರು. ಅನಂತರ ‘ಭಾಷಾ ವಿಜ್ಞಾನದ ಮೂಲತತ್ವಗಳು’ (1965), ‘ವಾಗಾರ್ಥ’(1981) ಎಂಬ ಎರಡು ಮುಖ್ಯವಾದ ಅವರ ಭಾಷಾಸಂಬಂಧವಾದ ಕೃತಿಗಳು ಪ್ರಕಟವಾದವು.
ಕನ್ನಡ ಸಂಶೋಧನ ಕ್ಷೇತ್ರದಲ್ಲಿ ತುಂಬಾ ದೊಡ್ಡ ಕೊಡುಗೆ ಕೊಟ್ಟ ಡಿ. ಎಲ್. ನರಸಿಂಹಾಚಾರ್, ತೀ.ನಂ.ಶ್ರೀ ಅವರಿಗೆ ಪ್ರಿಯವಾಗಿದ್ದ ಕ್ಷೇತ್ರಗಳು ಛಂದಸ್ಸು ಮತ್ತು ಗ್ರಂಥಸಂಪಾದನೆ. ಅವರ ನೇರ ಶಿಷ್ಯರಾಗಿದ್ದ ಚಿದಾನಂದಮೂರ್ತಿ ಅವರೂ ಈ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಕನ್ನಡದ ಮೊತ್ತ ಮೊದಲ ಷಟ್ಪದಿ ಕಾವ್ಯವನ್ನು ಸೊಲ್ಲಾಪುರದ ‘ವಿವಾಹ ಪುರಾಣ’ ಶಾಸನದಲ್ಲಿ ಗುರುತಿಸಿಕೊಟ್ಟಿದ್ದಾರೆ. ಕುವೆಂಪು, ಕಣವಿಯವರ ಕಾವ್ಯದ ಛಂದಸ್ಸನ್ನು ಅವರು ವಿಶ್ಲೇಷಿಸಿದ್ದರು. ಗ್ರಂಥ ಸಂಪಾದನೆಯ ಬಗೆಗೆ ಅವರು ಬರೆದಿರುವ ಅನೇಕ ಮೌಲಿಕ ಲೇಖನಗಳು ಕನ್ನಡ ಸಾಹಿತ್ಯದಲ್ಲಿ ಮಹತ್ವಪೂರ್ಣವೆನಿಸಿವೆ.
ತೀ. ನಂ. ಶ್ರೀಕಂಠಯ್ಯ ಅವರು ಚಿದಾನಂದಮೂರ್ತಿಗಳನ್ನು “ಕನ್ನಡ ಭಾಷಾ ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ” ಎಂದು ಮೆಚ್ಚಿದ್ದರು. ಅದರ ಸಮರ್ಥನೆ ಎಂಬಂತೆ ಮೂರ್ತಿಗಳು ಕನ್ನಡ ಸಾಹಿತ್ಯ ಚರಿತ್ರೆಯ ಕ್ಷೇತ್ರದಲ್ಲಿ ವಿಫುಲವಾಗಿ ಕೆಲಸಮಾಡಿದ್ದಾರೆ. ಕವಿರಾಜಮಾರ್ಗ ಕಾಲದ ಕನ್ನಡ ಸಾಹಿತ್ಯದಿಂದ ಹಿಡಿದು ಮುದ್ದಣ್ಣನವರೆಗೆ ಅವರ ಬರವಣಿಗೆ ವ್ಯಾಪಿಸಿದೆ. ‘ಸಂಶೋಧನ ತರಂಗ’ದ ಎರಡು ಸಂಪುಟಗಳು, ‘ಲಿಂಗಾಯತ ಅಧ್ಯಯನಗಳು’, ‘ಹೊಸತು ಹೊಸತು’, ಶೂನ್ಯ ಸಂಪಾದನೆಯನ್ನು ಕುರಿತು’. ‘ವಚನ ಸಾಹಿತ್ಯ’, ‘ವಚನ ಶೋಧ-೧’, ವಚನ ಶೋಧ-೨’ ಈ ದೃಷ್ಟಿಯಿಂದ ಮುಖ್ಯವಾದವು.
ಚಿದಾನಂದಮೂರ್ತಿ ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು. ‘ಗ್ರಾಮೀಣ’ ಹಾಗೂ ‘ಪಗರಣ ಮತ್ತು ಇತರ ಸಂಪ್ರಯದಾಯಗಳು’ ಎಂಬ ಎರಡು ಪುಸ್ತಕಗಳಲ್ಲಿ ಅವರ ಈ ಸಂಬಂಧವಾದ ಸಂಪ್ರಬಂಧಗಳು ಸಂಗ್ರಹಗೊಂಡಿವೆ. ಜಾನಪದ ವಿಜ್ಞಾನದ ದೃಷ್ಟಿಯಿಂದ ಈ ಲೇಖನಗಳು ಮಹತ್ವಪೂರ್ಣವಾಗಿವೆ.
ಚಿದಾನಂದಮೂರ್ತಿಯವರು ತುಂಬಾ ದೂಡ್ಡ ಸಂಶೋಧಕರಾಗಿ ವಿದ್ವಾಂಸರಾಗಿ ಹೆಸರು ಗಳಿಸಿದ್ದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರಿಂದಲೇ. ‘ಸಂಶೋಧನ ತರಂಗ’ದ ಎರಡೂ ಸಂಪುಟಗಳಲ್ಲಿ ಇಂಥ ಲೇಖನಗಳಿವೆ. ಅವರ ಪಿಎಚ್.ಡಿ ಪ್ರಬಂಧವಾದ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ದ ಬಗ್ಗೆ “ಇದೊಂದು ಸಂಸ್ಕೃತಿಯ ವಿಶ್ವಕೋಶ. ಈ ಕೃತಿ ಚಿದಾನಂದಮೂರ್ತಿಯವರ ನಿರ್ದುಷ್ಟವಾದ ಪಾಂಡಿತ್ಯಕ್ಕೂ ಸತ್ಯನಿಷ್ಟೆಗೂ ಪ್ರಖರ ಪ್ರತಿಭೆಗೂ ತಲಸ್ಪರ್ಶಿಯಾದ ವೈಚಾರಿಕ ಸಾಮರ್ಥ್ಯಕ್ಕೂ ನಿದರ್ಶನವಾಗಿದೆ” ಎಂಬ ದೇ. ಜವರೇಗೌಡರ ಅಭಿಪ್ರಾಯ ಸಮುಚಿತವಾಗಿದೆ. ಮೂರ್ತಿಗಳ ಸಾಂಸ್ಕೃತಿಕ ಸಂಶೋಧನೆ ಯಾವ ಯಾವ ಆಯಾಮಗಳನ್ನು ಪಡೆಯಬಹುದು ಎಂಬುದಕ್ಕೆ ‘ಪೂರ್ವಸೂರ್ಯಗ್ರಹಣ’ ದ ‘ಸಮಾಜೋ ಸಾಂಸ್ಕೃತಿಕ’ ಅಧ್ಯಯನ ಒಂದು ಅಪೂರ್ವ ನಿದರ್ಶನ. ಒಂದು ಘಟನೆಯ ಸುತ್ತ ಹುಟ್ಟಿಕೊಳ್ಳುವ ನಂಬಿಕೆ, ಸಂಪ್ರದಾಯ, ಆಚಾರ, ವಿಚಾರಗಳನ್ನು ಇಲ್ಲಿ ವಿಶದೀಕರಿಸಿದ್ದಾರೆ.
ಕಳೆದ ಹಲವು ದಶಕಗಳಲ್ಲಿ ಚಿದಾನಂದ ಮೂರ್ತಿ ಕನ್ನಡ-ಕರ್ನಾಟಕಗಳ ಉಳಿವಿಗೆ ಮಾಡಿದ ಹೋರಾಟ ಪ್ರತ್ಯೇಕ ಉಲ್ಲೇಖಕ್ಕೆ ಅರ್ಹವಾದದ್ದು. 1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರು ಹೋರಾಟ ಹೂಡಿದರು. ಅದೇ ವರ್ಷದ ಎಪ್ರಿಲ್ 13ರಂದು ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿದಾನಂದಮೂರ್ತಿಯವರು ಕನ್ನಡ ಚಳುವಳಿಯ ಹೊಸ ನಾಯಕರಾದರು. ಗೋಕಾಕ್ ಚಳುವಳಿಯಲ್ಲಿ ಮೂರ್ತಿಗಳು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನ ಕನ್ನಡ ಚಳವಳಿಗೆ ಹೊಸ ರೂಪ ವರ್ಚಸ್ಸು, ಗೌರವಗಳನ್ನು ತಂದಿತ್ತವು. ಕನ್ನಡ ಚಳವಳಿಯ ಬಗ್ಗೆ ಜನಸಾಮಾನ್ಯರಲ್ಲಿದ್ದ ಕೀಳು ಮನೋಭಾವ ತೊಲಗಲೂ ಮೂರ್ತಿಗಳೇ ಕಾರಣ. 1988ರಲ್ಲಿ ಚಿದಾನಂದಮೂರ್ತಿ ‘ಕನ್ನಡ ಶಕ್ತಿಕೇಂದ್ರವನ್ನು’ ಅಸ್ತಿತ್ವಕ್ಕೆ ತಂದರು. ಕನ್ನಡ ಶಕ್ತಿಕೇಂದ್ರ ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಜಿಲ್ಲಾ ಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ.
ಚಿದಾನಂದಮೂರ್ತಿಯವರ ದೊಡ್ಡ ಸಾಧನೆ ಕನ್ನಡಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ದುಡಿಯುವ ಕಾರ್ಯಕರ್ತರನ್ನು ರೂಪಿಸಿದ್ದು ಮತ್ತು ಅವರ ಬಳಗ ಕಟ್ಟಿದ್ದು. ಈ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸಮೂಡಲು, ಕನ್ನಡ-ಕರ್ನಾಟಕಗಳ ಬಗ್ಗೆ ಕುರಿತು ಅರಿವು ಹೆಚ್ಚಲು ಅವರು ‘ಮಾತುಗಾರಿಕೆ ಶಿಬಿರ’ಗಳನ್ನೂ ಏರ್ಪಡಿಸಿದರು. ಜನಸಾಮಾನ್ಯರಲ್ಲಿ ಕನ್ನಡತನ ಉಂಟಾಗಲು ‘ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ’ ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದರು. ಈ ಪುಸ್ತಕ ಹಲವು ಮುದ್ರಣಗಳನ್ನು ಕಂಡಿತು. ಇದಾದ ನಂತರ ಶಕ್ತಿಕೇಂದ್ರದ ವತಿಯಿಂದ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ತುಂಬಾ ಉಪಯುಕ್ತವಾದ ಅಂಕಿ-ಅಂಶಗಳನ್ನು, ಖಚಿತ ಮಾಹಿತಿಯನ್ನೂ ಒಳಗೊಂಡ ಪುಸ್ತಕವನ್ನು ಸಂಪಾದಕ ಮಂಡಳಿಯ ನೆರವಿನಿಂದ ಹೊರತಂದರು. ಇದು “ಕನ್ನಡಿಗರ ಅನಧಿಕೃತವಾದ ಸಂವಿಧಾನ” ಎಂಬ ಪ್ರಶಂಸೆಗೆ ಪಾತ್ರವಾಯಿತು.
ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.
ಚಿದಾನಂದಮೂರ್ತಿಗಳಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡಮಿ ಪುರಸ್ಕಾರಗಳು, ಗೌರವಗಳು ದೊರೆತಿವೆಯಲ್ಲದೆ, ಅವರ ಹೆಸರಿನಲ್ಲಿ ‘ಚಿದಾನಂದ ಪ್ರಶಸ್ತಿ’ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ ಹತ್ತರಂದು ಪ್ರತೀವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡುತ್ತ ಬಂದಿದ್ದರು. ಈ ಎಲ್ಲವೂ ನಾಡವರು ಅವರ ಬಗ್ಗೆ ಇಟ್ಟಿರುವ ಪ್ರೀತಿ ಅಭಿಮಾನಗಳ ಕುರುಹಾಗಿವೆ.
ಡಾ. ಚಿದಾನಂದಮೂರ್ತಿಯವರು 2020 ವರ್ಷದ ಜನವರಿ 11ರಂದು ನಮ್ಮನ್ನಗಲಿ ಸಾತ್ವಿಕ ಭಾವದ ಸ್ವರೂಪದಲ್ಲಿದ್ದ ಕನ್ನಡವೆಂಬುವ ಒಂದು ಅಪೂರ್ವ ಚೇತನ ತನ್ನ ನೆಲೆಯನ್ನು ಮತ್ತಷ್ಟು ಕಳೆದುಕೊಂಡಿತೇನೋ ಎಂಬ ಭಾವ ಮೂಡಿಸಿದ್ದಂತೂ ನಿಜ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ಎಸ್. ಸುಂಕಾಪುರ | On the birth anniversary of great scholar Dr. M. S. SunkApura |

Wed Mar 9 , 2022
ಡಾ. ಎಂ. ಎಸ್. ಸುಂಕಾಪುರ ಕಳೆದ ಶತಮಾನದ ವಿದ್ವಾಂಸರಲ್ಲಿ ಒಬ್ಬರು. ಸುಂಕಾಪುರ 1921ರ ಜನವರಿ 10ರಂದು ಮುಳಗುಂದದಲ್ಲಿ ಜನಿಸಿದರು. ತಂದೆ ಸಣ್ಣಬಸಪ್ಪ. ತಾಯಿ ಸಿದ್ಧಮ್ಮ. ಪ್ರಾಥಮಿಕ ಶಿಕ್ಷಣ ಮುಳಗುಂದದಲ್ಲಿ ನಡೆದು ಮುಂದೆ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಓದಿದರು. ಸುಂಕಾಪುರ ಅವರ ಮನೆತನವೆ ಜನಪದಗಳ ತವರು. ಹೀಗಾಗಿ ಇವರಿಗೆ ಜನಪದ ಕಲೆಗಳ ಬಗ್ಗೆ ವಿಶೇಷವಾದ ಆಕರ್ಷಣೆ ಮೂಡಿತು. ಸುಗ್ಗಿ ಕುಣಿತ, ಸೋಬಾನಪದ, ಜಾನಪದ ಕಥೆ ಹೇಳುವ ಕಲೆ ಇವರಿಗೆ ಕರಗತವಾಗಿತ್ತು. ಬೆಳಗಾವಿಯ […]

Advertisement

Wordpress Social Share Plugin powered by Ultimatelysocial