ಖಟೀಮಾ: ಉತ್ತರಾಖಂಡದ ಜನತೆ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಖಂಡಿತವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಖಟೀಮಾದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ತಾವೇನು ಮಾಡುತ್ತೇವೆ ಎಂಬುದನ್ನು ಮುಖ್ಯಮಂತ್ರಿಗಳು ಜನರಿಗೆ ತಿಳಿಸಬೇಕು. ಮಹಿಳೆಯರಿಗೆ ಅವರು ಯಾವ ಯೋಜನೆಯನ್ನು ತರಲಿದ್ದಾರೆ? ಉದ್ಯೋಗಕ್ಕಾಗಿ ಜನರು ರಾಜ್ಯದಿಂದೇಕೆ ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ? ಏಕೆಂದರೆ ಇಲ್ಲಿ ಉದ್ಯೋಗಗಳ ಸೃಷ್ಟಿಯಾಗುತ್ತಿಲ್ಲ. ಸಮಾಜದ ಪ್ರತಿಯೊಂದು ವರ್ಗವೂ ಕಷ್ಟದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನರ ‘ಮನ್ ಕಿ ಬಾತ್’ ಕೇಳಲು ಸಿದ್ಧರಿಲ್ಲ ಎಂದು ಹರಿಹಾಯ್ದಿದ್ದಾರೆ.ಉತ್ತರಾಖಂಡದಲ್ಲಿ ಎಲ್ಲವೂ ಇದೆ. ಹಿಮಾಲಯ ಪರ್ವತಗಳು, ಪ್ರಕೃತಿ, ಪ್ರವಾಸೋದ್ಯಮ ಅವಕಾಶಗಳು ಇವೆ. ಆದರೆ ಉದ್ಯೋಗಗಳಿಲ್ಲ. ಜನರು ಇಲ್ಲಿಂದ ವಲಸೆ ಹೋಗುತ್ತಿದ್ದಾರೆ. ವಲಸೆ ಹೋಗುವವರ ಸಂಖ್ಯೆ ರಾಜ್ಯದಲ್ಲಿ ಅಧಿಕವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.ರಾಜಕಾರಣಿಯ ಬಹು ದೊಡ್ಡ ಕರ್ತವ್ಯ ಜನ ಸೇವೆಯಾಗಿದೆ. ಜನರ ಅಭಿವೃದ್ಧಿಗೆ ಸಹಕರಿಸುವುದಾಗಿದೆ. ಆದರೆ ಇವತ್ತು ಸಿಎಂ ನಿಂದ ಪಿಎಂ ವರೆಗೆ ಬಿಜೆಪಿಯ ಪ್ರತಿಯೊಬ್ಬ ನಾಯಕನೂ ತಮ್ಮ ಅಭಿವೃದ್ಧಿಯನ್ನಷ್ಟೇ ನೋಡುತ್ತಾರೆ. ಯಾರೂ ಜನರ ಬಗ್ಗೆ ಯೋಚಿಸುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.ಪ್ರಧಾನಿಯ ಇಬ್ಬರು ಸ್ನೇಹಿತರ ಉದ್ಯಮಕ್ಕೆ ಸಹಾಯ ಮಾಡುವ ಯೋಜನೆಗಳನ್ನೇ ರಾಷ್ಟ್ರಾದ್ಯಂತ ಚಾಲ್ತಿಯಲ್ಲಿವೆ. ಬಜೆಟ್ ಬಂದರೆ ರಾಷ್ಟ್ರದ ಬೆನ್ನೆಲುಬಾದ ಬಡವರಿಗೆ, ರೈತರಿಗೆ, ಮಧ್ಯಮ ವರ್ಗದವರಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಯಾವ ಯೋಜನೆಗಯೂ ಇರುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ‘ಎಎನ್ಐ’ ವರದಿಯಲ್ಲಿ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada