ಮಂಗಳೂರು, ಜನವರಿ, 27: ಇತ್ತೀಚೆಗೆ ನಡೆದ ಪ್ರಜಾಧ್ವನಿ ಮಾದರಿಯಲ್ಲಿಯೇ ‘ಕರಾವಳಿ ಧ್ವನಿ ಯಾತ್ರೆ’ ನಡೆಸಲು ಕಾಂಗ್ರೆಸ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಆರು ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ನಡೆಸಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಫೆಬ್ರವರಿ 5ರಿಂದ ಫೆಬ್ರವರಿ9ರವರೆಗೆ ಮೊದಲ ಹಂತದ ಕರಾವಳಿ ಧ್ವನಿ ರಥಯಾತ್ರೆ ಆರಂಭವಾಗಲಿದೆ. ಬಳಿಕ ಎರಡನೇ ಹಂತದ ರಥಯಾತ್ರೆ ಫೆಬ್ರವರಿ 16 ರಿಂದ ಮಾರ್ಚ್ 10ರವರೆಗೆ ಎಲ್ಲಾ ಕಡೆ ಸಂಚರಿಸಲಿದೆ. ಈ ಬಗ್ಗೆ ಎಲ್ಲಾ ನಾಯಕರು ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕರಾವಳಿ ಧ್ವನಿ ಯಾತ್ರೆಯು ಫೆಬ್ರವರಿ 5ರಂದು ಸುಳ್ಯದಲ್ಲಿ ಆರಂಭಗೊಳ್ಳಲಿದೆ. 30 ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಮಡಿಕೇರಿಯಲ್ಲಿ ಕರಾವಳಿ ಧ್ವನಿ ಯಾತ್ರೆ ನಡೆಯಲಿದೆ. ಬಿ.ಕೆ ಹರಿಪ್ರಸಾದ್, ಆರ್.ವಿ ದೇಶಪಾಂಡೆ, ಮಧು ಬಂಗಾರಪ್ಪ ಸೇರಿದಂತೆ ಕರಾವಳಿಯ ಪ್ರಮುಖ ನಾಯಕರು ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಬಳಿಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸುರ್ಜೇವಾಲ, “ಕರಾವಳಿಯನ್ನು ಬಿಜೆಪಿ ಕೋಮು ವಿಷ ಭಿತ್ತಿ ಫ್ಯಾಕ್ಟರಿ ಮಾಡಿಕೊಂಡಿದೆ. ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ಗೃಹ ಸಚಿವ ಕಲರ್ ನೋಡಿ ಆಡಳಿತ ಮಾಡಿದರೆ ಸಾಮರಸ್ಯ ನೆಲೆಸಲು ಸಾಧ್ಯವೇ..? ಬಿಜೆಪಿಯ ಕೋಮುವಾದದ ಫ್ಯಾಕ್ಟರಿಯನ್ನು ಸಾಮರಸ್ಯದ ಫ್ಯಾಕ್ಟರಿ ಮಾಡುತ್ತೇವೆ ಎಂದರು.
ಮಾತು ಮುಂದುವರಿಸಿದ ಅವರು ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ. ರಮೇಶ್ ಜಾರಕಿಹೊಳಿ ಆರು ಸಾವಿರ ಕೊಡುತ್ತೇವೆ ಎಂದು ಹೇಳಿ ಜನರನ್ನು ಅವಮಾನಿಸಿದ್ದಾರೆ. ಜಾರಕಿಹೊಳಿ ಸರ್ಕಾರದ ಭಾಗವೇ ಆಗಿಲ್ಲ, ಅವರನ್ನು ಬಿಜೆಪಿ ಹೊರಕ್ಕಟ್ಟಿದೆ. ಈಗ ಪಕ್ಷದಿಂದ ಆರು ಸಾವಿರ ಕೊಡುತ್ತೇವೆಂದು ಹೇಳಿ ಜನರನ್ನು ಗೇಲಿ ಮಾಡುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೊಮ್ಮಾಯಿ, ಕಟೀಲ್, ಜೆಪಿ ನಡ್ಡಾ, ಜಾರಕಿಹೊಳಿ ವಿರುದ್ಧ ಕೇಸು ದಾಖಲಿಸಿದ್ದಾರೆ . ಪ್ರಕರಣದಲ್ಲಿ ನಡ್ಡಾ, ಬೊಮ್ಮಾಯಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಬೇಕು ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ಇಡೀ ರಾಜ್ಯವನ್ನು ಅರಾಜಕತೆಗೆ ತಳ್ಳಿದೆ. ಪಿಎಸ್ಐ ಹಗರಣ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ. ಪ್ರಕರಣದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ಅಧಿಕಾರಿ ಬಂಧನ ಆಗಿದೆ. ನೂರಕ್ಕೂ ಹೆಚ್ಚು ಮಂದಿ ಬಂಧನ ಆಗಿದ್ದಾರೆ. ಒಬ್ಬ ಬಿಜೆಪಿ ಶಾಸಕನೂ ಬಂಧನ ಆಗಿಲ್ಲ. ಬಿಜೆಪಿ ಶಾಸಕರೇ ಅಭ್ಯರ್ಥಿಗಳಿಂದ ಹತ್ತು ಲಕ್ಷ ಪಡೆದು ಭ್ರಷ್ಟಾಚಾರ ಮಾಡಿದ್ದಲ್ಲವೇ. ಆರೋಪಿ ಆರ್.ಡಿ ಪಾಟೀಲ್ ಫೇಸ್ಬುಕ್ನಲ್ಲಿ ಸಿಐಡಿ ಅಧಿಕಾರಿಗೆ ಲಂಚ ಕೊಟ್ಟಿದ್ದನ್ನು ಹೇಳುತ್ತಾನೆ. ಲೋಕಾಯುಕ್ತಕ್ಕೆ ದೂರು ಕೊಟ್ಟು ಸಿಐಡಿ ಅಧಿಕಾರಿಗಳು 2.24 ಕೋಟಿ ರೂಪಾಯಿ ಲಂಚ ಕೇಳಿದ್ದಾಗಿ ಹೇಳಿದ್ದಾರೆ .ಅವರದೇ ಪಕ್ಷದ ಯತ್ನಾಳ್ ಸಿಎಂ ಹುದ್ದೆಗೆ 2500 ಕೋಟಿ ರೂಪಾಯಿ ನೀಡಬೇಕೆಂದು ಹೇಳುತ್ತಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಬೇರೆ ಸಾಕ್ಷಿಗಳು ಬೇಕೇ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
https://play.google.com/store/apps/details?id=com.speed.newskannada