ಮಧ್ಯಮವೇಗಿ ವೈಶಾಖ ವಿಜಯಕುಮಾರ್ ಮತ್ತು ವಿ. ಕೌಶಿಕ್ ಅವರ ಅಮೋಘ ದಾಳಿಯ ಮುಂದೆ ರಾಜಸ್ಥಾನ ತಂಡವು ಕುಸಿಯಿತು.ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರಾಜಸ್ಥಾನ ತಂಡವು 45.3 ಓವರ್ಗಳಲ್ಲಿ 129 ರನ್ ಗಳಿಸಿ ಆಲೌಟ್ ಆಯಿತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ಬಳಗಕ್ಕೆ ಆತಿಥೇಯ ತಂಡದ ವೇಗಿ ವಿದ್ವತ್ ಕಾವೇರಪ್ಪ ಮೊದಲ ಓವರ್ನಲ್ಲಿಯೇ ಪೆಟ್ಟು ಕೊಟ್ಟರು. ಆರಂಭಿಕ ಬ್ಯಾಟರ್ ಯಶ್ ಕೊಠಾರಿ ಅವರು ಗೌತಮ್ಗೆ ಕ್ಯಾಚಿತ್ತರು. ತಂಡ ಹಾಗೂ ಕೊಠಾರಿ ಇಬ್ಬರೂ ಖಾತೆ ತೆರೆದಿರಲಿಲ್ಲ.ನಾಲ್ಕು ಓವರ್ಗಳ ನಂತರ ಕೌಶಿಕ್ ಎಸೆತದಲ್ಲಿ ಅನುಭವಿ ಲೊಮ್ರೊರ್ ವಿಕೆಟ್ ಕಬಳಿಸಿದರು. ತಮ್ಮ ಎರಡನೇ ಸ್ಪೆಲ್ನಲ್ಲಿಯೂ ವಿದ್ವತ್ ವಿಕೆಟ್ ಬೇಟೆಯಾಡಿದರು.ಅವರು ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಆದಿತ್ಯ ಬಿದ್ದರು.ಈ ನಡುವೆಯೂ ಇನ್ನೊಂದೆಡೆ ನೆಲಕಚ್ಚಿ ಆಡುತ್ತಿದ್ದ ಕುನಾಲ್ ಸಿಂಗ್ ರಾಥೋಡ್ (33; 54ಎ, 4X5, 6X1) ಅವರ ವಿಕೆಟ್ ಗಳಿಸುವ ಮೂಲಕ ವೈಶಾಖ ತಮ್ಮ ಖಾತೆ ತೆರೆದರು.ಇದರಿಂದಾಗಿ ಭೋಜನ ವಿರಾಮಕ್ಕೆ ರಾಜಸ್ಥಾನ ತಂಡವು 84 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರದ ಅವಧಿಯಲ್ಲಿ ರಾಜಸ್ಥಾನ ತಂಡದ ಪತನಕ್ಕೆ ವೈಶಾಖ ಮತ್ತು ಕೌಶಿಕ್ ‘ಜೊತೆಯಾಟ’ ಕಾರಣವಾಯಿತು.ತಂಡದ ಮೊತ್ತಕ್ಕೆ 45 ರನ್ಗಳು ಸೇರುವಷ್ಟರಲ್ಲಿ ಆರು ವಿಕೆಟ್ಗಳು ಪತನವಾದವು. ಚಹಾ ವಿರಾಮಕ್ಕೆ ಮುನ್ನವೇ ರಾಜಸ್ಥಾನ ತಂಡದ ಮೊದಲ ಇನಿಂಗ್ಸ್ಗೆ ತೆರೆಬಿತ್ತು.ಪಡಿಕ್ಕಲ್ ಇನ್: ಅನಾರೋಗ್ಯದಿಂದ ಗುಣಮುಖರಾಗಿ ಮರಳಿರುವ ದೇವದತ್ತ ಪಡಿಕ್ಕಲ್ ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಲಾಯಿತು. ಇದಕ್ಕಾಗಿ ವಿಶಾಲ್ ಒಣತ್ ಅವರನ್ನು ಕೈಬಿಡಲಾಗಿದೆ. ಹೋದ ಪಂದ್ಯದಲ್ಲಿ ಗಾಯಗೊಂಡಿದ್ದ ವಿಕೆಟ್ಕೀಪರ್ ಬಿ.ಆರ್. ಶರತ್ಗೆ ವಿಶ್ರಾಂತಿ ನೀಡಿ, ಶರತ್ ಶ್ರೀನಿವಾಸ್ ಅವರಿಗೆ ಆಡುವ ಅವಕಾಶ ನೀಡಲಾಯಿತು.ಜೇನು ದಾಳಿ ಆಲೂರು ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಸಂದರ್ಭದಲ್ಲಿ ಜೇನುನೋಣಗಳ ದಂಡಿನಿಂದ ರಕ್ಷಿಸಿಕೊಳ್ಳಲು ಆಟಗಾರರು ನೆಲದ ಮೇಲೆ ಕೆಲಹೊತ್ತು ಬೋರಲಾಗಿ ಒರಗಿದ ಘಟನೆ ನಡೆಯಿತು. ಜೇನು ಹುಳಗಳು ಚದುರಿದ ನಂತರ ಆಟ ಮುಂದುವರೆಯಿತು.
https://play.google.com/store/apps/details?id=com.speed.newskannada