ಬೀಗ ಹಾಕಿದ ಒಂಟಿ ಮನೆಗಳನ್ನು ಗುರುತಿಸಿ ದೋಚುತ್ತಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ರಮ್ಯಾ ಹಾಗೂ ಬೆಂಗಳೂರು ಉತ್ತರಹಳ್ಳಿ ಮೂಲದ ನಾಗರಾಜ್ ಬಂಧಿತ ಆರೋಪಿಗಳು.
ರಮ್ಯಾ ಹಾಗೂ ನಾಗರಾಜ್ ಪರಸ್ಪರ ಪರಿಚಯ ಆದ ನಂತರ ಇನ್ಸ್ಟಾಗ್ರಾಮ್ ಮೂಲಕ ಚಾಟ್ ಮಾಡಿಕೊಂಡು ಮತ್ತಷ್ಟು ಸ್ನೇಹ ಬೆಳೆಸಿಕೊಂಡಿದ್ದರು.
ಸ್ನೇಹ ಪ್ರೀತಿಗೆ ತಿರುಗಿದ ಬಳಿಕ ಮದುವೆಯಾಗಿದ್ದರು. ಮದುವೆಯ ಬಳಿಕ ಜೀವನ ನಡೆಸಲು ನಾಗರಾಜ್ ಮತ್ತು ರಮ್ಯ ಕಳ್ಳತನ ಮಾಡಲು ಶುರು ಮಾಡಿದ್ದರು.
ಇಬ್ಬರು ಪ್ರಮುಖ ರಸ್ತೆಗಳಲ್ಲಿ ತಿರುಗಿ ವಸತಿ ಸ್ಥಳಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡ್ತಿದ್ರು. ನಾಗರಾಜ್ ಕಳ್ಳತನ ಮಾಡಲು ಮನೆ ಒಳಗೆ ಹೋಗಿದ್ರೆ ರಮ್ಯ ಬಾಗಿಲಲ್ಲಿ ನಿಂತು ಕಾವಲು ನಿಂತಿರುತ್ತಿದ್ದಳು. ಯಾರಾದರೂ ಬಂದರೆ ನಾಗರಾಜ್ಗೆ ಸಿಗ್ನಲ್ ಕೊಟ್ಟು ಪರಾರಿ ಆಗುತ್ತಿದ್ದರು.
ಕದ್ದ ಚಿನ್ನವನ್ನು ರಮ್ಯ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಹೀಗೆ ಜೀವನ ನಡೆಸುತ್ತಿದ್ದ ಚಾಲಾಕಿ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ. ಒಂಟಿ ಮನೆಗಳ ಕಳ್ಳತನದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಹುಡುಕಾಟದ ವೇಳೆ ಈ ದಂಪತಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ವಾಹನಗಳು ವಶಕ್ಕೆ ಪಡೆಯಲಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: