ಧಾರವಾಡ: ಕವಿ ಡಾ. ಚೆನ್ನವೀರ ಕಣವಿ ಅವರು ಚಿಕಿತ್ಸೆ ಪಡೆಯುತ್ತಿರುವ ಎಸ್ಡಿಎಂ ಆಸ್ಪತ್ರೆಗೆ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್ ಅವರು ಸೋಮವಾರ ಭೇಟಿ ನೀಡಿ, ಅವರ ಆರೋಗ್ಯ ಕುರಿತು ವೈದ್ಯರ ತಂಡ ಹಾಗೂ ಕುಟುಂಬದವರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಮುನೇನಕೊಪ್ಪ, ‘ಕಣವಿ ಅವರ ಆರೋಗ್ಯದ ಕುರಿತು ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿದೆ. ಚಿಕಿತ್ಸೆಗೆ ತಗಲುವ ಎಲ್ಲ ವೆಚ್ವವನ್ನು ಸರ್ಕಾರದಿಂದಲೇ ಭರಿಸಲಾಗುತ್ತಿದೆ. ಉತ್ತಮ ಚಿಕಿತ್ಸೆ ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ’ ಎಂದು ತಿಳಿಸಿದರು.ಜಗದೀಶ ಶೆಟ್ಟರ್ ಮಾತನಾಡಿ, ‘ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡವಿದೆ. ಆದರೂ, ಕಣವಿ ಅವರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಅಗತ್ಯ. ಅಗತ್ಯವಿದ್ದಲ್ಲಿ ಕಿಮ್ಸ್ ಮತ್ತು ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರ ಸಲಹೆ, ನೆರವು ಪಡೆಯಬೇಕು’ ಎಂದು ಸೂಚಿಸಿದರು.ಕಣವಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ ಮಾತನಾಡಿ, ‘ಕಣವಿ ಅವರ ಆರೋಗ್ಯದಲ್ಲಿ ಕಳೆದ ವಾರಕ್ಕಿಂತ ಈಗ ಚೇತರಿಕೆ ಕಂಡು ಬಂದಿದೆ. ರಕ್ತದೊತ್ತಡ ನಿಯಂತ್ರಣದಲ್ಲಿದೆ. ಮೂತ್ರಪಿಂಡ ಕಾರ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಶ್ವಾಸಕೋಶದ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ. ವಯಸ್ಸಿನ ಕಾರಣ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿಸಿದರು.ತಂಡದ ಶ್ವಾಸಕೋಶ ತಜ್ಞ ಶ್ರೀಕಾಂತ ಹಿರೇಮಠ, ಅರಿವಳಿಕೆ ತಜ್ಞ ಶ್ರೀರಂಗ ತೋರಗಲ್ಲ, ಜನರಲ್ ಫಿಜಿಷನ್ ರಾಜೇಂದ್ರ ಪಾರಿಕ್, ಜಿಲ್ಲಾ ಆರೋಗ್ಯಾಧಿಕಾರಿ ಬಸನಗೌಡ ಕರಿಗೌಡರ, ಎಸ್ಡಿಎಂ ವೈದ್ಯಕೀಯ ಸೂಪರಿಂಟೆಂಡೆಂಟ್ ಕಿರಣ ಹೆಗಡೆ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada