ಕಳೆದ ಎಂಟು ತಿಂಗಳ ಹಿಂದೆಯಷ್ಟೇ ೩೩ ಲಕ್ಷ ರೂ.ಗೆ ಖರೀದಿಸಿದ್ದ ಜೆಸಿಬಿಯು ಪದೇಪದೇ ರಿಪೇರಿಯಾಗುತ್ತಿದ್ದರೂ ಕಂಪನಿಯವರು ಬಗೆಹರಿಸದೆ ಬೇಜವಾಬ್ದಾರಿ ತೋರುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಡೀಲರ್ ಶಾಪ್ಗೆ ಬೀಗ ಹಾಕಿ ಜೆಸಿಬಿಯನ್ನು ಅಡ್ಡ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಆರ್.ಟಿ.ಒ ಕಚೇರಿ ಬಳಿ ಮಂಗಳವಾರ ನಡೆಯಿತು. ತಾಲೂಕಿನ ಉದ್ದಪ್ಪನಹಳ್ಳಿ ನವೀನ್ಗೌಡ ಕಳೆದ ೮ ತಿಂಗಳ ಹಿಂದೆ ೩೩ ಲಕ್ಷ ರೂಗೆ ಇಲ್ಲಿನ ಆರೆನ್ಎಸ್ ಜೆಸಿಬಿ ಡೀಲರ್ ಬಳಿ ೫೦ ಎಚ್.ಪಿ. ಜೆಸಿಬಿಯನ್ನು ಖರೀದಿಸಿದ್ದರು.ಆರಂಭದಿಂದಲೂ ರಿಪೇರಿ ಬರುತ್ತಿದ್ದು, ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಕಾಟಾಚಾರಕ್ಕೆ ಎಂಬಂತೆ ಎಂಜಿನಿಯರ್ಗಳು ಅದನ್ನು ಪರಿಶೀಲಿಸಿ ಸಬೂಬುಗಳನ್ನು ಹೇಳಿ ಕಳುಹಿಸುತ್ತಿದ್ದರು ಆದರೆ, ಇತ್ತೀಚೆಗೆ ರಿಪೇರಿ ಹೆಚ್ಚಾಗಿದ್ದು, ಆಯಿಲ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿತ್ತು.ರಸ್ತೆಯಲ್ಲಿ ಹೋಗುವಾಗಲೂ ಎಲ್ಲೆಂದರಲ್ಲಿ ನಿಂತು ಹೋಗಿ ತೊಂದರೆ ಕೊಡುತ್ತಿತ್ತು. ಈ ಬಗ್ಗೆ ಫೋನ್ ಹಾಗೂ ಡೀಲರ್ ಬಳಿ ನೇರವಾಗಿ ಹೇಳಿಕೊಂಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಜೆಸಿಬಿ ಸಮೇತ ಆಗಮಿಸಿ ಡೀಲರ್ ಶಾಪ್ಗೆ ಬೀಗ ಹಾಕಿ ಜೆಸಿಬಿಯನ್ನು ಶಾಪ್ಗೆ ಅಡ್ಡ ನಿಲ್ಲಿಸಿ ನಮಗೆ ೩೩ ಲಕ್ಷರೂಗಳನ್ನಾದರೂ ವಾಪಸ್ ಕೊಡಿ ಇಲ್ಲವೇ ಜೆಸಿಬಿಯನ್ನು ಬದಲಾವಣೆ ಮಾಡಿಕೊಡುವಂತೆ ಪಟ್ಟು ಹಿಡಿದರು. ಜೆಸಿಬಿ ಮಾಲೀಕ ನವೀನ್ಗೌಡ ಮಾತನಾಡಿ, ನಮಗೆ ೭೫ ಎಚ್.ಪಿ. ಜೆಸಿಬಿ ಅವಶ್ಯಕವಿತ್ತಾದರೂ ಇವರು ಬಲವಂತ ಮಾಡಿ ೫೦ ಎಚ್.ಪಿ. ಜೆಸಿಬಿಯನ್ನೇ ಖರೀದಿಸಲು ಪ್ರೇರೇಪಿಸಿದ್ದರು. ಆದರೆ ಖರೀದಿಸಿಕೊಂಡು ಹೋದಾಗಿನಿಂದಲೂ ರಿಪೇರಿಗಳು ಸಾಮಾನ್ಯವಾಗಿದೆ. ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲವೆಂದು ಕಿಡಿಕಾರಿದರು.
ಜೆಸಿಬಿ ಖರೀದಿಸಿ ೮ ತಿಂಗಳಷ್ಟೇ ಆಗಿದೆ. ವಾರಂಟಿ, ಗ್ಯಾರೆಂಟಿ ಇರುವುದರಿಂದ ಬದಲಾಯಿಸಿಕೊಡಲಿ. ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ಬೀಗ ತೆರೆಯುವುದಿಲ್ಲ. ಇಂದು ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಜೆಸಿಬಿ ಮಾಲೀಕರೊಂದಿಗೆ ತೀವ್ರತರದ ಹೋರಾಟ ನಡೆಸಲಾಗುವುದಾಗಿ ಎಚ್ಚರಿಕೆ ನೀಡಿದರು.ಸ್ಥಳಕ್ಕಾಗಮಿಸಿದ ಡೀಲರ್ ಸುರೇಶ್ರನ್ನು ಮಾಲೀಕರು ಪ್ರಶ್ನಿಸಿದಾಗಲೂ ಬೇಜವಾಬ್ದಾರಿ ಉತ್ತರ ನೀಡಲು ಮುಂದಾದರು. ಇದಕ್ಕೆ ಮಾಲೀಕರು ಮತ್ತಷ್ಟು ಕಿಡಿಕಾರಿದರು.
ಜೆಸಿಬಿಗಳ ಮಾಲೀಕರಾದ ರಾಜಪ್ಪ, ಚಂದ್ರಶೇಖರ್, ನಾರಾಯಣಸ್ವಾಮಿ, ಬ್ಯಾಟೇಗೌಡ, ನಾಗರಾಜ್, ಸುರೇಶ್, ರವೀಂದ್ರ, ನಾಗೇಶ್, ಅಶೋಕ್, ಪ್ರಭಾಕರ್, ನವೀನ್ಕುಮಾರ್ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada