ಬೇಸಿಗೆ ಮುನ್ನವೇ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಗುಣಮಟ್ಟದ ವಿದ್ಯುತ್ ನೀಡದೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಫೆ.೨೪ರಂದು ಪೊರಕೆ ಚಳುವಳಿ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ಬಂಗಾರಪೇಟೆ ಗಡಿಭಾಗದ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ ಕ್ರಾಸ್ನ ಅರಣ್ಯ ಪ್ರದೇಶದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ದೇವರು ವರ ಕೊಟ್ಟರೂ ಪೂಜಾರಿ ನೀಡಲಿಲ್ಲ ಎಂಬ ಗಾಧೆಯಂತೆ ಸರ್ಕಾರದ ಇಂಧನ ಸಚಿವರಾದ ಸುನೀಲ್ಕುಮಾರ್ ಅವರು ರೈತರಿಗೆ ಬೇಸಿಗೆಯಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಯಾಗುವುದಿಲ್ಲ. ಅವರ ಬೇಡಿಕೆಯಿಂದ ಹೆಚ್ಚಾಗಿ ೨ ತಾಸು ಗುಣಮಟ್ಟದ ವಿದ್ಯುತ್ ನೀಡುತ್ತೇನೆಂದು ವಿಧಾನಸೌಧದಲ್ಲಿ ಹೇಳಿಕೆ ನೀಡಿರುವುದು ಪತ್ರಿಕಾ ಮತ್ತು ಮಾಧ್ಯಮಕ್ಕೆ ಸೀಮಿತವೇ ?
ಈ ಆದೇಶ ಬೆಸ್ಕಾಂ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲವೇ. ಇನ್ನೂ ಬೇಸಿಗೆ ಸಂಪೂರ್ಣವಾಗಿ ಆರಂಭವಾಗಿಲ್ಲ. ಈಗಲೇ ನಾನಾ ಕಾರಣಗಳನ್ನು ಹೇಳಿ ೮ ತಾಸು ನೀಡಬೇಕಾದ ಗುಣಮಟ್ಟದ ತಮಗೆ ಇಷ್ಟ ಬಂದ ರೀತಿ ರಾತ್ರಿ ವೇಳೆ ೧೨ ಇಲ್ಲವೇ ೩ ಗಂಟೆಯೊಳಗೆ ೧ ತಾಸು ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ರೈತರು ಕೇಳಿದರೆ ನಿಮಗೆ ಬೇಕಾದ ವಿದ್ಯುತ್ ನೀಡಿದ್ದೇವೆ. ನೀವು ಮನೆಯಲ್ಲಿ ಮಲಗಿದ್ದರೆ ಅದಕ್ಕೆ ನಾವು ಜವಾಬ್ದಾರರೇ ಎಂದು ರೈತರ ವಿರುದ್ಧವೇ ದೌರ್ಜನ್ಯ ಮಾಡುತ್ತಿರುವುದು ವಿಪರ್ಯಾಸ ಎಂದು ಅಸಮಧಾನ ವ್ಯಕ್ತಪಡಿಸಿದರು.ಖಾಸಗಿ ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಮಳೆಗಾಲದಲ್ಲಿ ಮಳೆರಾಯನಕಾಟ ಬೇಸಿಗೆಯಲ್ಲಿ ವಿದ್ಯುತ್ ಅಡಚಣೆಯ ಕಾಟದಿಂದ ಇನ್ನೇನು ತನ್ನ ಬೆವರಿನ ದುಡಿಮೆಗೆ ತಕ್ಕ ಆದಾಯ ಬರುತ್ತದೆ ತನ್ನ ಕಷ್ಟವೆಲ್ಲ ತೀರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಒಂದೇ ವಾರದಲ್ಲಿ ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಹಾಯಿಸದೆ ಬೆಳೆ ಕಣ್ಣ ಮುಂದೆಯೇ ಒಣಗಿ ಹಾಳಾಗಿ ರೈತನ ಬೆಳೆ ನೋಡಿ ಕಣ್ಣೀರು ಸುರಿಸುವ ಮಟ್ಟಕ್ಕೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಹಾಗೂ ನೊಂದ ರೈತ ಕದಿರಿನತ್ತ ಅಪ್ಪೋಜಿರಾವ್ ಮಾತನಾಡಿ, ಶ್ರೀಮಂತರ ಮನೆ ಕಾರ್ಯಕ್ರಮಗಳಿಗೆ ರಾಜಕಾರಣಿಗಳ ಸಮಾವೇಶಗಳಿಗೆ, ಕೈಗಾರಿಕೆಗಳಿಗೆ ದಿನದ ೨೪ ಗಂಟೆ ವಿದ್ಯುತ್ ನೀಡಲು ಬೆಸ್ಕಾಂ ಅಧಿಕಾರಿಗಳಿಗೆ ಯಾವುದೇ ನಿಯಮ ಅನ್ವಯಿಸುವುದಿಲ್ಲ. ಆದರೆ, ರೈತನ ಬೆಳೆ ರಕ್ಷಣೆಗೆ ವಿದ್ಯುತ್ ನೀಡಬೇಕಾದರೆ ಅಧಿಕಾರಿಗಳಿಗೆ ಇಲ್ಲದ ಒತ್ತಡ ಸರ್ಕಾರದ ನಿಯಮಗಳು ಅಡ್ಡಿಯಾಗುತ್ತವೆ ಎಂದು ವ್ಯಂಗ್ಯವಾಡಿದರು.ಬೆಸ್ಕಾಂ ಅಧಿಕಾರಿಗಳು ನೀಡುವ ವಿದ್ಯುತ್ ಎಷ್ಟರ ಮಟ್ಟಿಗೆ ಗುಣಮಟ್ಟ ಇದೆ ಎಂದರೆ ಮನೆಯಲ್ಲಿ ರೈತನು ನೆಮ್ಮದಿಯಿಂದ ನಿದ್ದೆ ಮಾಡದೆ ತನ್ನ ಸಂಸಾರವನ್ನು ಪಂಪ್ಸೆಟ್ಗಳ ಬಳಿ ಆಸ್ಪತ್ರೆಯಲ್ಲಿ ರೋಗಿ ದಿನದ ೨೪ ಗಂಟೆ ಮಲಗಿರುವ ಹಾಗೆ ವಿದ್ಯುತ್ಗಾಗಿ ಜಾತಕ ಪಕ್ಷಿಗಳಂತೆ ಕಾಯುವ ಜೊತೆಗೆ ನೀಡುವ ವಿದ್ಯುತ್ ಗಂಟೆಗೆ ೩ ಬಾರಿ ಹೋಗಿ ಬರುತ್ತಿರುವುದರಿಂದ ಕೊಳವೆಬಾವಿಯಿಂದ ನೀರು ಸಹ ಹೊರ ಬರದ ಮಟ್ಟಕ್ಕೆ ವಿದ್ಯುತ್ ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ಕಡೆ ಬೆಳೆದ ಬೆಳೆಯನ್ನು ಕಣ್ಣ ಮುಂದೆಯೇ ಕಾಡಾನೆಗಳು ಹಾಳು ಮಾಡಿದರೆ ಮತ್ತೊಂದು ಕಡೆ ಮಾತು ಬರುವ ಮನುಷ್ಯ ಕಾಡಾನೆಗಳಿಗಿಂತ ವಿಭಿನ್ನ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾನೆ. ಇಷ್ಟೆಲ್ಲಾ ಅವ್ಯವಸ್ಥೆಗೆ ಕಡಿವಾಣ ಹಾಕಬೇಕಾದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ. ಜಿಲ್ಲಾದ್ಯಂತ ರೈತರ ಬೆಳೆ ರಕ್ಷಣೆಗೆ ಗುಣಮಟ್ಟದ ೧೦ ತಾಸು ವಿದ್ಯುತ್ ನೀಡಬೇಕು. ಹಾಗೂ ವಿದ್ಯುತ್ ನೀಡದೆ ಬೆಳೆ ನಷ್ಟವಾದರೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಪರಿಗಣಿಸಿ ಅವರ ಸಂಬಳದಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಮತ್ತು ಪ್ರತಿ ಪಂಚಾಯಿತಿಗೊಂದು ವಿದ್ಯುತ್ ಸಹಾಯವಾಣಿ ಕೇಂದ್ರ ತೆರೆಯಬೇಕೆಂದು ಫೆ.೨೪ರ ಶುಕ್ರವಾರ ಕೋಲಾರ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಪೊರಕೆ, ನಷ್ಟ ಬೆಳೆ ಸಮೇತ ಹೋರಾಟ ಮಾಡುವ ನಿರ್ಧಾರವನ್ನು ಸಭೆಯಲ್ಲಿ ತೀರ್ಮನಿಸಲಾಯಿತು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಮುನ್ನ, ಭೀಮಗಾನಹಳ್ಳಿ ಮುನಿರಾಜು, ವಿಶ್ವ, ಸಂದೀಪ್ರೆಡ್ಡಿ, ಸಂದೀಪ್ಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್ಪಾಷ, ಬಾಬಾಜಾನ್, ಆರೀಫ್, ಜಾವೀದ್, ಮಾಸ್ತಿ ವೆಂಕಟೇಶ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ರಾಮಸಾಗರ ವೇಣು, ಸುರೇಶ್ಬಾಬು, ಪಾರಂಡಹಳ್ಳಿ ಮಂಜುನಾಥ್, ಮುಳಬಾಗಿಲು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada