ಬೆಂಗಳೂರು, ಏಪ್ರಿಲ್ 22: ದೇಶದ ರಾಜಧಾನಿ ನವದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳ ಆಗುತ್ತಿದ್ದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ನ ನಾಲ್ಕನೇ ಅಲೆ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ ಎಂಬುವುದು ಕೂಡಾ ಹಲವರಿಗೆ ಪ್ರಶ್ನೆಯಾಗಿದೆ.
ಈ ಬಗ್ಗೆ ತಜ್ಞರು ಸ್ಪಷ್ಟಣೆ ನೀಡಿದ್ದಾರೆ.
ಟಿಒಐ ಜೊತೆ ಮಾತನಾಡಿದ ಆರೋಗ್ಯ ತಜ್ಞರು, “ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಪ್ರತಿದಿನ ಸುಮಾರು 50-60 ರಷ್ಟು ದಾಖಲು ಆಗುತ್ತಿದೆ. ಆದರೆ ನಗರದಲ್ಲಿ ನಾವು ಚಿಂತಿಸುವಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿಲ್ಲ,” ಎಂದು ತಿಳಿಸಿದ್ದಾರೆ.
“ಸದ್ಯಕ್ಕೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೇವಲ ಏಳು ಕೋವಿಡ್ ರೋಗಿಗಳಿದ್ದು, ಒಬ್ಬರು ವೆಂಟಿಲೇಟರ್ನಲ್ಲಿದ್ದಾರೆ. ಪ್ರಸ್ತುತ, ರಾಜ್ಯದಲ್ಲಿ ವಾರದ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಶೇಕಡ 1ಕ್ಕಿಂತ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಏಪ್ರಿಲ್ 20ರಂದು ಶೇಕಡ 1.6 ಆಗಿತ್ತು,” ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಬಗ್ಗೆಯೂ ತಜ್ಞರು ಉಲ್ಲೇಖ ಮಾಡಿದ್ದಾರೆ, “ಗುರುವಾರ ರಾಜ್ಯದಲ್ಲಿ 100 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಸುಮಾರು 91 ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿದೆ. ಹಾಗೆಯೇ ರಾಜ್ಯದಲ್ಲಿ ಕೋವಿಡ್ ದೈನಂದಿನ ಪಾಸಿಟಿವಿಟಿ ದರವು ಶೇಕಡ 1ಕ್ಕಿಂತ ಅಧಿಕವಾಗಿದೆ,” ಎಂದು ತಜ್ಞರು ಉಲ್ಲೇಖ ಮಾಡಿದ್ದಾರೆ.
ರಾಜ್ಯದಲ್ಲಿ ನಾಲ್ಕನೇ ಕೋವಿಡ್ ಅಲೆಯ ಲಕ್ಷಣವಿಲ್ಲ
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಮಾತನಾಡಿ, ಕರ್ನಾಟಕ ಅಥವಾ ಬೆಂಗಳೂರಿನಲ್ಲಿ ಸದ್ಯಕ್ಕೆ ನಾಲ್ಕನೇ ಅಲೆಯ ಯಾವುದೇ ಲಕ್ಷಣಗಳಿಲ್ಲ. ನಾವು ಕಾದು ನೋಡಬೇಕಾಗಿದೆ ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಮಾಸ್ಕ್ ಬಳಕೆ ಮತ್ತು ಇತರ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕಾಗಿದೆ,” ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ ರಂಣದೀಪ್ ಮಾತನಾಡಿ, “ಈಗ ಆತಂಕ ಪಡಬೇಕಾಗಿಲ್ಲ. ಆದರೆ ನಾವು ಇತರ ರಾಜ್ಯಗಳಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮಲ್ಲಿ ವಾರದ ಕೋವಿಡ್ ಪರೀಕ್ಷೆಯ ಪಾಸಿಟಿವಿಟಿ ದರವು ಪ್ರಸ್ತುತ ಶೇಕಡ 1ಕ್ಕಿಂತ ಕಡಿಮೆಯಿದೆ. ಹೊಸ ಕೋವಿಡ್ ರೂಪಾಂತರ ಕಂಡು ಬಂದಿಲ್ಲ. ಆದರೆ ನಾವು ಎಲ್ಲರನ್ನು ಜಾಗರೂಕರಾಗಿರಿಸಬೇಕು. ಲಸಿಕೆ ಪಡೆಯುವಂತೆ ಉತ್ತೇಜಿಸಬೇಕು,” ಎಂದು ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada