ಗದಗದ ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ರು.ಇತಿಹಾಸದ ಗತವೈಭವವನ್ನ ಸ್ಮರಿಸುವ ನೆಪದಲ್ಲಿ ಮೂರು ದಿನಗಳ ಕಾಲ ಉತ್ಸವ ಆಯೋಜನೆಗೊಂಡಿದ್ದು, ಎರಡನೇ ದಿನವಾದ ಇಂದು ಗ್ರಾಮೀಣ ಕ್ರಿಡೆಗಳನ್ನ ಆಯೋಜಿಸಲಾಗಿತ್ತು. ದೇಸಿ ಕ್ರಿಡೆಯಾದ ಕಬ್ಬಡ್ಡಿ ಹಾಗೂ ಕುಸ್ತಿ ಪಂದ್ಯಾವಳಿಗಳು ಉತ್ಸವದ ಕ್ರಿಡೆಯ ರಂಗನ್ನ ಹೆಚ್ಚಿಸಿತು. ಉತ್ಸವದ 2 ನೇ ದಿನವಾದ ಇಂದು ಗ್ರಾಮೀಣ ಕ್ರೀಡೆಗಳ ಕಲರವ ಜೋರಾಗಿತ್ತು. ಗ್ರಾಮದ ಬಿ.ಎಚ್.ಪಾಟೀಲ ಪ್ರೌಢಶಾಲೆ ಮೈದಾನದಲ್ಲಿ ಕಬ್ಬಡ್ಡಿ ಹಾಗೂ ಕುಸ್ತಿ ಕ್ರಿಡೆಗಳನ್ನ ಆಯೋಜಿಸಲಾಗಿತ್ತು. ಆಯುಧ ಉಪಯೋಗಿಸದೇ ಒಬ್ಬನೊಡನೊಬ್ಬ ಸೆಣಸಿ ಗೆಲ್ಲುವ ಪಂದ್ಯಾಟ ನೆರೆದವರನ್ನ ರೋಮಾಂಚನಗೊಳಿಸಿತ್ತು. ರಟ್ಟೆ ಬಡಿಯುತ್ತಾ ಜಟ್ಟಿಗಳಿಬ್ಬರು ಅಖಾಡಕ್ಕಿಳಿದು ನೆಲಕ್ಕುರುಳಿಸುವ ಸೆಣಸಾಟ ಕಂಡು ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ವಿದ್ಯಾರ್ಥಿನಿಯರ ಕಬ್ಬಡ್ಡಿ ತಂಡಗಳೂ ಸಹ, ಕಣದಲ್ಲಿ ರಣಕಲಿಗಳಂತೆ ಜಿದ್ದಾಜಿದ್ದಿಗೆ ಬಿದ್ದಿದ್ದವು.ಹೆಚ್ಚಿನ ಅಂಕ ಪಡೆಯೋಕೆ ಎದುರಾಳಿ ತಂಡವನ್ನ ಮಕಾಡೆ ಮಲಗಿಸೋ ದೃಶ್ಯ ಮೈ ನವಿರೇಳಿಸುವಂತಿತ್ತು. ಅಂತರಾಷ್ಟ್ರೀಯ ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪಗೌಡ ಮತ್ತು ಅಂತರಾಷ್ಟ್ರೀಯ ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ ಸೇರಿದಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಎಸ್ಪಿ ಬಾಬಾಸಾಬ ನೇಮಗೌಡ, ಇನ್ನಿತರರು ಸಸಿಗೆ ನೀರು ಹಾಕುವ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಅಲ್ಲದೇ ಉತ್ಸವಕ್ಕೆಂದು ಬಂದ ಪ್ರವಾಸಿಗರಿಗೆ ಮನೋರಂಜನೆ ಹಿನ್ನೆಲೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಒಟ್ಟಾರೆ ಲಕ್ಕುಂಡಿ ಉತ್ಸವ ಕೇವಲ, ಕಲೆ, ಸಾಹಿತ್ಯ, ಸಂಸ್ಕೃತಿ, ಕವಿಗೋಷ್ಠಿಗಳಿಗಷ್ಟೇ ಸೀಮಿತಗೊಳ್ಳದೇ, ಗ್ರಾಮೀಣ ಕ್ರೀಡೆಗಳ ಹಬ್ಬದೊಂದಿಗೆ, ಯುವಕ್ರಿಡಾಪಟುಗಳಿಗೆ ಪ್ರೋತ್ಸಾಹವೂ ನೀಡಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada