ಮುಂಬೈ: ‘ಆರ್ಬಿಎಲ್ ಬ್ಯಾಂಕ್ನ ಹಣಕಾಸು ಸ್ಥಿತಿ ಸ್ಥಿರವಾಗಿದೆ. ಠೇವಣಿದಾರರು ಮತ್ತು ಷೇರುದಾರರು ವದಂತಿಗಳಿಗೆ ಕಿವಿಗೊಟ್ಟು ಆತಂಕಪಡುವ ಅಗತ್ಯ ಇಲ್ಲ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೋಮವಾರ ಹೇಳಿದೆ.
ಬ್ಯಾಂಕ್ನ ಕೆಲವು ತ್ರೈಮಾಸಿಕಗಳ ಸಾಧನೆ ಮತ್ತು ಅದರ ಆಡಳಿತ ಮಂಡಳಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ವದಂತಿಗಳು ಹರಡುತ್ತಿರುವ ಕುರಿತು ಆರ್ಬಿಐ ಸ್ಪಷ್ಟನೆ ನೀಡಿದೆ.
ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಶ್ವವೀರ್ ಅಹುಜಾ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀವ್ ಅಹುಜಾ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ಅಲ್ಲದೆ, ಆರ್ಬಿಐ ಸಹ ಬ್ಯಾಂಕ್ನ ಆಡಳಿತ ಮಂಡಳಿಗೆ ಯೋಗೇಶ್ ಕೆ. ದಯಾಳ್ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿದೆ. ದಯಾಳ್ ಅವರು ಆರ್ಬಿಎಲ್ ಬ್ಯಾಂಕ್ನಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿದ್ದರು. ಈ ಬೆಳವಣಿಗೆಗಳ ಕುರಿತು ಆರ್ಬಿಐ ಸ್ಪಷ್ಟನೆ ನೀಡಿದೆ.
ಬ್ಯಾಂಕ್ನ ಆರ್ಥಿಕ ಸ್ಥಿತಿಯು ಸ್ಥಿರವಾಗಿದೆ. ಸೆಪ್ಟೆಂಬರ್ 30ರವರೆಗಿನ ಲೆಕ್ಕಪತ್ರ ಪರಿಶೋಧನೆಯ ಪ್ರಕಾರ, ಬ್ಯಾಂಕ್ನ ಬಂಡವಾಳ ಲಭ್ಯತೆ ಪ್ರಮಾಣವು ಶೇಕಡ 16.33ರಷ್ಟು, ಹಿತಕರ ಮಟ್ಟದಲ್ಲಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವು ಶೇ 76.6ರಷ್ಟಿದೆ ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಿಯಂತ್ರಣ ಅಥವಾ ಮೇಲ್ವಿಚಾರಣೆ ವಿಷಯಗಳಲ್ಲಿ ಬ್ಯಾಂಕ್ಗೆ ಬೆಂಬಲದ ಅಗತ್ಯ ಇದೆ ಎಂದು ಭಾವಿಸಿದಾಗ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 36ಎಬಿ ಅಡಿಯಲ್ಲಿ ಖಾಸಗಿ ಬ್ಯಾಂಕ್ಗೆ ಹೆಚ್ಚುವರಿ ನಿರ್ದೇಶಕರನ್ನು ನೇಮಿಸಲಾಗುತ್ತದೆ ಎಂದು ಆರ್ಬಿಐ ಸ್ಪಷ್ಟನೆ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: