ಮಂಗಳೂರು, ಜುಲೈ 7: ನಡೆದಾಡುವ ಮಂಜುನಾಥ ಸ್ವಾಮಿಯ ಸಮಾಜ ಸೇವೆಯನ್ನು ಕೇಂದ್ರ ಸರಕಾರ ದೇಶದ ಜನತೆಗೆ ತೋರಿಸಿಕೊಟ್ಟಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಮೂಲಕ ಮೋದಿ ಸರ್ಕಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮಾಜಮುಖಿ ಕೆಲಸಗಳಿಗೆ ಬಹುದೊಡ್ಡ ಗೌರವವನ್ನು ಸಲ್ಲಿಸಿದೆ.
ಇದು ನಮ್ಮ ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯ ಎಂದರೆ ತಪ್ಪಾಗಲಾರದು.
ಡಾ. ಡಿ. ವೀರೇಂದ್ರ ಹೆಗ್ಗಡೆಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ಮೋದಿ ಸರಕಾರದ ಘೋಷಣೆ ಮಾಡಿದೆ. ನಡೆದಾಡುವ ಮಂಜುನಾಥ ಎಂದೇ ಪ್ರಸಿದ್ಧರಾಗಿರುವ, ಹತ್ತು ಹಲವು ಸಾಮಾಜಿಕ ಚಿಂತನೆ- ಯೋಜನೆಗಳ ಚಿಂತಕ, ಸಾಕಾರಮೂರ್ತಿ, ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತರಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿನ ಅಪಾರ ಕೊಡುಗೆಗೆ ನಾಮನಿರ್ದೇಶನದ ಗೌರವವನ್ನು ಕೇಂದ್ರ ಸರ್ಕಾರ ನೀಡಿದೆ. ಗ್ರಾಮೀಣಾಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ರುಡ್ ಸೆಟ್, ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಶೈಕ್ಷಣಿಕ ಕ್ಷೇತ್ರದಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿರುವ ಖಾವಂದರ ಸಾಧನೆಗೆ ಸಂದ ಗೌರವ ಇದಾಗಿದೆ.
ಈ ಬಗ್ಗೆ ಖುಷಿ ಹಂಚಿಕೊಂಡ ಹೆಗ್ಗಡೆಯವರು, “ನಾನು ಈ ಗೌರವದ ಬಗ್ಗೆ ಊಹೆ ಮಾಡಿರಲಿಲ್ಲ, ಇದು ದೇವರು ಕೊಟ್ಟ ಅನುಗ್ರಹ, ನಮ್ಮಿಂದ ಸಮಾಜಕ್ಕೆ ಏನೆಲ್ಲಾ ಆಗುತ್ತದೋ ಅದೆಲ್ಲಾ ಸೇವೆಯನ್ನು ಮಾಡುವುದಕ್ಕೆ ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
ಧಾರ್ಮಿಕ ಕ್ಷೇತ್ರವಾಗಿ ಧರ್ಮಸ್ಥಳದ ಚತುರ್ವಿಧ ದಾನ ಪರಂಪರೆಯನ್ನು ಮತ್ತಷ್ಟು ಮೇಲ್ಮಟ್ಟಕ್ಕೇರಿಸಿದ್ದು, ಜೊತೆಗೆ ಧರ್ಮೋತ್ಥಾನ ಟ್ರಸ್ಟ್ ಮೂಲಕ ಸಾವಿರಾರು ಧಾರ್ಮಿಕ ಕ್ಷೇತ್ರಗಳ ಏಳಿಗೆಗೆ ಅವರು ಕಾರಣವಾಗಿದ್ದಾರೆ.
ಸಮಾಜದ ಸರ್ವಾತೋಮುಖ ಏಳಿಗೆಯನ್ನೇ ಬಯಸಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಮೋದಿ ಸರ್ಕಾರಕ್ಕೆ ಹೊಸ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
ಮುಖ್ಯಮಂತ್ರಿಗಳ ಅಭಿನಂದನೆ; ಮುಖ್ಯಮಂತ್ರಿ ಬಸವರಾಜ ಬೊಬ್ಬಾಯಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧ ಆಯಾಮಗಳ ಜನಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವ ಶ್ರೀ ಹೆಗ್ಗಡೆಯವರ ಅನುಭವ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಿಸಲಿದೆ. ಅವರನ್ನು ರಾಜ್ಯಸಭೆ ನಾಮನಿರ್ದೇಶನಕ್ಕೆ ಶಿಫಾರಸು ಮಾಡಿದ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada