ವ್ಯಕ್ತಿಯೊಬ್ಬ ಮಕ್ಕಳ ಮುಂದೆಯೇ ತನ್ನ ಪತ್ನಿಯನ್ನು ಅಮಾನುಷವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯೋಗಿತಾ (27) ಗಂಡನಿಂದಲೇ ಕೊಲೆಯಾದ ಮಹಿಳೆ. ರವಿ ಮಕ್ಕಳ ಮುಂದೆಯೇ ಪತ್ನಿ ಕೊಲೆ ಮಾಡಿದ ಪಾಪ ಪತಿ.
ಪರಸ್ತ್ರೀ ಜೊತೆ ರವಿಗೆ ಅನೈತಿಕ ಸಂಬಂಧ ಇತ್ತು. ಇದು ಪತ್ನಿಗೂ ತಿಳಿದಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಪದೇಪದೆ ರವಿ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ಪತಿ-ಪತ್ನಿ ನಡುವಿನ ಜಗಳ ಸಂಬಂಧ ಸಾಕಷ್ಟು ಬಾರಿ ಗ್ರಾಮದ ಮುಖಂಡರು ನ್ಯಾಯ ಪಂಚಾಯಿತಿಯನ್ನು ನಡೆಸಿದ್ದರು. ಆದರೂ ಜಗಳ ಮಾತ್ರ ನಿಂತಿರಲಿಲ್ಲ. ನಿನ್ನೆ ರಾತ್ರಿಯೂ ಗಂಡ ಹೆಂಡತಿ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಆರೋಪಿ ರವಿ ಮಕ್ಕಳಿಗೆ ಪಾನಿಪುರಿ ತಿನಿಸುತ್ತಿದ್ದ ವೇಳೆ ಜಗಳ ಶುರುವಾಗಿತ್ತು.
ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಪತ್ನಿ ಯೋಗಿತಾಗೆ ಮನಬಂದಂತೆ ಥಳಿಸಿದ ರವಿ, ಬಳಿಕ ಪತ್ನಿಯನ್ನು ಕೋಣೆಯೊಳಗೆ ಎಳೆದೊಯ್ದಿದ್ದ. ಈ ವೇಳೆ ಮಕ್ಕಳು ತಕ್ಷಣ ಪಕ್ಕದ ಮನೆಯವರಿಗೆ ಜಗಳದ ವಿಚಾರ ತಿಳಿಸಿದರು. ನೆರೆಮನೆಯವರು ಬರುವಷ್ಟರಲ್ಲಿ ರವಿ ಪತ್ನಿಯನ್ನು ಕೊಲೆಗೈದಿದ್ದ. ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಮಕ್ಕಳಿಗೆ ಹೇಳಿ, ರವಿ ಪರಾರಿಯಾಗಿದ್ದಾನೆ.
ಸದ್ಯ ಮನೆಯ ಮುಂದೆ ಯೋಗಿತಾ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಣ ಮುಂದೆಯೇ ತಾಯಿ ಕಳೆದುಕೊಂಡು ಮಕ್ಕಳಿಬ್ಬರು ತಬ್ಬಲಿಯಾಗಿದ್ದಾರೆ. ಪರಾರಿಯಾಗಿರುವ ರವಿಯನ್ನು ಸ್ಥಳಕ್ಕೆ ಕರೆಸುವಂತೆ ಯೋಗಿತಾ ಪಾಲಕರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada