ಕಾರವಾರ:ಸಾರ್ವಜನಿಕರಿಗೆ ಕುಷ್ಠ ರೋಗದ ಬಗ್ಗೆ ಅರಿವು ಮೂಡಿಸಿ, ಭಾರತವನ್ನು ಕುಷ್ಠ ರೋಗದಿಂದ ಮುಕ್ತ (Leprosy Free) ಮಾಡಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕುಷ್ಠ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಈಗಾಗಲೇ ಗಣನೀಯ ಪ್ರಗತಿಯನ್ನು ಸಾಧಿಸಿದ್ದೇವೆ. ನಾವು ತುಂಬಾ ಬದ್ಧತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸಿ ಕುಷ್ಠ ರೋಗವನ್ನು ಹೋಗಲಾಡಿಸಬೇಕಾಗಿದೆ. ದೇಶದಲ್ಲಿ ಈಗಾಗಲೇ ಪೋಲಿಯೊವನ್ನು ನಾವು ಹೇಗೆ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ, ಅದೇ ರೀತಿಯಲ್ಲಿ ಕುಷ್ಠ ರೋಗವನ್ನು ಕೂಡ ನಿರ್ವಹಣೆ ಮಾಡಬೇಕಿದೆ. ಜನಸಾಮಾನ್ಯರಲ್ಲಿ ಇಂತಹ ರೋಗದ ಲಕ್ಷಣಗಳು ಕಂಡುಬಂದಲ್ಲಿ ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಬೇಕು ಎಂದರು.
ಬಳಿಕ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಶಂಕರ ರಾವ್ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರು ಕುಷ್ಠ ರೋಗಿಗಳ ಬಗ್ಗೆ ಹೆಚ್ಚು ಸಹಾನುಭೂತಿಯನ್ನು ಹೊಂದಿದ್ದರು. ಅವರು ಎಲ್ಲಾ ರೋಗಿಗಳನ್ನು ಸೇವಾ ಮನೋಭಾವದಿಂದ ಕಾಣುತ್ತಿದ್ದರು. ಈ ಉದ್ದೇಶಕ್ಕಾಗಿ ಸ್ಪರ್ಶ್ ಕುಷ್ಠ ರೋಗ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಕುಷ್ಠ ರೋಗದ ಬಗ್ಗೆ ಗ್ರಾಮೀಣ ಭಾಗದ ಜನರು ಸಾಕಷ್ಟು ಮೂಢನಂಬಿಕೆಗಳನ್ನು ಹೊಂದಿದ್ದಾರೆ. ಅಂತಹ ರೋಗಕ್ಕೆ ತುತ್ತಾದವರನ್ನು ಶಾಪಗ್ರಸ್ಥರು ಎಂದು ಭಾವಿಸಿ ಗ್ರಾಮದಿಂದ ಹೊರಗುಳಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ಇಂತಹ ರೋಗಕ್ಕೆ ಒಳಗಾದವರು ರಸ್ತೆ ಬದಿಗಳಲ್ಲಿ ದೇವಸ್ಥಾನದ ಬದಿಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡಿ ಜೀವನ ಮಾಡುವಂತಹ ಸ್ಥಿತಿ ಇತ್ತು. ಆಗ ಇದಕ್ಕೆ ಪೂರಕ ಔಷಧಗಳು ಸಹ ಇರಲಿಲ್ಲ. ಆರ್ಯುವೇದ ಪದ್ಧತಿಯಲ್ಲಿ ಚಾಮುಲುಗ್ರಾಮ ಎಂಬ ಎಣ್ಣೆಯನ್ನು ಕುಡಿಯಲು ಮತ್ತು ಮೈಗೆ ಹಚ್ಚಲು ಕೋಡುತ್ತಿದ್ದರು. ಇಂದು ಕಾಲ ಬದಲಾಗಿದೆ. ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಇವುಗಳ ಅರಿವು ಅವರಿಗೆ ಮಾಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯಧಿಕಾರಿ ಡಾ. ಶರದ್ ನಾಯಕ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕರು ಡಾ. ಶಿವಾನಂದ ಕುಡ್ತರಕರ್, ತಾಲೂಕು ಆರೋಗ್ಯ ಅಧಿಕಾರಿ ಸೂರಜ್ ನಾಯಕ, ಡಾ.ಶ್ರುತಿ ಎಚ್.ಎನ್, ಡಾ. ರಮೇಶ್ ರಾವ್, ಡಾ. ಅನ್ನಪೂರ್ಣ ವಸ್ತ್ರದ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada