ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆಯವರ ಹೆಸರು ಸುಪ್ರಸಿದ್ಧವಾದುದು.

ದಾದಾ ಸಾಹೇಬ್ ಫಾಲ್ಕೆಯವರ ಮೂಲ ಹೆಸರು ‘ದುಂಡಿರಾಜ್ ಗೋವಿಂದ ಫಾಲ್ಕೆ’ಯೆಂದು. ದುಂಡಿರಾಜರು ಬರೋಡದ ‘ಕಲಾಭವನ’ದ ಶಿಕ್ಷಣ ಮುಗಿಸಿ, ‘ಸರಕಾರಿ ಪ್ರಾಚ್ಯವಸ್ತು ಇಲಾಖೆ’ಯಲ್ಲಿ ಚಿತ್ರಕಾರರಾಗಿ, ಛಾಯಾಚಿತ್ರಗಾರರಾಗಿ 1903 ರಲ್ಲಿ ಖಾಯಂ ನೌಕರಿ ಗಳಿಸಿದರು. ದುಂಡಿರಾಜರು ‘ಫೋಟೋ-ಕೆಮಿಕಲ್ ರಂಗ’ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಮಹಾನ್ ಸೃಜನಶೀಲ ಸಾಹಸಿಯಾದ ಈತ ಭಾರತೀಯ ಚಲನ ಚಿತ್ರರಂಗವೆಂಬ ಮಾಯಾಲೋಕವನ್ನು ‘ಹರಿಶ್ಚಂದ್ರ’ ಚಿತ್ರದ ಮೂಲಕ ತೆರೆದಿಟ್ಟರು. ‘ದಾದಾಸಾಹೇಬ್ ಫಾಲ್ಕೆ’ಯವರು. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾನ್ ತ್ಯಾಗಿ.’ದುಂಡಿರಾಜ್’ ಅವರು ಮಹಾರಾಷ್ಟ್ರದ ‘ನಾಸಿಕ್’ ಜಿಲ್ಲೆಯ ಗೋದಾವರಿ ನದಿಯ ಉಗಮಸ್ಥಾನವಾದ ‘ತ್ರ್ಯಂಬಕೇಶ್ವರ’ದ ವೈದಿಕ ಮನೆತನವೊಂದರಲ್ಲಿ 1870ರ ಏಪ್ರಿಲ್ 30ರಂದು ಜನಿಸಿದರು. ತಂದೆ ದಾಜಿಶಾಸ್ತ್ರಿ ಫಾಲ್ಕೆ ಸಂಸ್ಕೃತ ಶಿಕ್ಷಕರಾಗಿದ್ದರು. ಚಿಕ್ಕಂದಿನಿಂದಲೂ ದುಂಡಿರಾಜರು ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ, ಪುರಾಣ, ಕಥೆ, ಅತಿಮಾನುಷ ವಿಚಾರಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು. ತ್ರ್ಯಂಬಕೇಶ್ವರ ದೇಗುಲದಲ್ಲಿ ನಡೆಯುತ್ತಿದ್ದ ನೃತ್ಯ, ನಾಟಕಗಳು, ರಂಗಸಜ್ಜಿಕೆಗಳು, ವೇಷಭೂಷಣಗಳು ಚಿಕ್ಕ ಬಾಲಕನಮೇಲೆ ಅಪಾರ ಪ್ರಭಾವವನ್ನು ಬೀರಿತ್ತು. ನಟನೆ, ಹಾವ-ಭಾವಗಳನ್ನು ಕಂಡಾಗ ಅವರು ರೋಮಾಂಚನಗೊಳ್ಳುತ್ತಿದ್ದರು. ತಂದೆಯವರು ಹೇಳಿಕೊಡುತ್ತಿದ್ದ ವೈದಿಕ, ಸಂಸ್ಕೃತ ಪಾಠಗಳಲ್ಲಿ ಮುಂದಿದ್ದರೂ ನಾಟಕ, ನೃತ್ಯ, ಚಿತ್ರಕಲೆ ಇವುಗಳಲ್ಲಿ ದುಂಡಿರಾಜನ ಆಸಕ್ತಿ ಗಮನಿಸಿದ ಅವರ ತಂದೆಯವರು ಸ್ವಲ್ಪ ಚಿಂತಿತರಾದರು. ಲಲಿತ ಕಲೆಗಳ ಆಸಕ್ತಿಯಲ್ಲಿ ಪ್ರವರ್ಧಮಾನಕ್ಕೆ ಬರಲು, ತ್ಯ್ರಂಬಕೇಶ್ವರದಂತಹ ಚಿಕ್ಕ ಜಾಗ ಉತ್ತಮವಾದದ್ದಲ್ಲವೆಂದು ಅರಿತರೂ, ದೂರವೆನಿಸಿದ್ದ ಮುಂಬಯಿಗೆ ಒಬ್ಬನೇ ಮಗನನ್ನು ಕಳಿಸಲು ಅವರಿಗೆ ಮನಸ್ಸು ಬರಲಿಲ್ಲ.ಮುಂದೆ ದುಂಡಿರಾಜ್ ಅವರಿಗೆ ಸರಸ್ವತೀಬಾಯಿ ಎಂಬ ಕನ್ಯೆಯೊಡನೆ ವಿವಾಹವಾಯಿತು. ಸರಸ್ವತಿಬಾಯಿಯವರು ಕೊಟ್ಟ ಸಹಕಾರ, ಮಾಡಿದ ತ್ಯಾಗ ಮೆಚ್ಚುವಂತಹದು. ಅವರ ಪ್ರೋತ್ಸಾಹದಿಂದಲೇ ದುಂಡಿರಾಜರು ಮುಂದೆ ತಮ್ಮ ಜೀವನದ ಪರಮೋದ್ದೇಶದ ಸಾಧನೆಯನ್ನು ಮಾಡಲು ಸಾಧ್ಯವಾದದ್ದು.1885ರಲ್ಲಿ ದಾಜಿಶಾಸ್ತ್ರಿ ಅವರಿಗೆ, ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೌಕರಿ ದೊರಕಿತು. ಅವರ ಕುಟುಂಬ ಮುಂಬಯಿಗೆ ವಲಸೆ ಬಂದಿತು. ದುಂಡಿರಾಜ್ ಅವರಿಗೆ ಮುಂಬೈನ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ದೊರಕಿತು. ಇದು ಅವರ ಚಿತ್ರಾಸಕ್ತಿಗೆ ಭದ್ರ ಬುನಾದಿ ಹಾಕಿತು. ಅಲ್ಲಿನ ಕಾಲಾವಧಿ ಮುಗಿದ ನಂತರ ಮುಂದಿನ ಕಲಿಕೆಗಾಗಿ ಬರೋಡದ ಕಲಾಭವನ ಸೇರಿದರು. ಅಲ್ಲಿ ದುಂಡಿರಾಜರ ಪ್ರಾವಿಣ್ಯ, ಪಾಂಡಿತ್ಯವನ್ನು ಗುರುತಿಸಿದ ಪ್ರೊ.ಗುಜ್ಜರ್ ಎಂಬುವರು ಈ ಯುವಕನ ಪಾಂಡಿತ್ಯಕ್ಕೆ ಕೇವಲ ಚಿತ್ರಕಲೆ ಸಾಲದೆಂದು, ಛಾಯಾಚಿತ್ರ ವಿಭಾಗದ ಮೇಲ್ವಿಚಾರಕನಾಗಿ ನೇಮಿಸಿ ಸಹಕರಿಸಿದರು. ಭಾರತದಲ್ಲಿ ಆಗ ಸ್ವಾತಂತ್ರ್ಯ ಸಂಗ್ರಾಮದ ಸ್ವದೇಶಿ ಚಳವಳಿ ಭರದಿಂದ ಸಾಗಿತ್ತು. ಬ್ರಿಟಿಷ್ ಸರಕಾರ ಆಯೋಜಿಸುತ್ತಿದ್ದ ಪ್ರಾಚ್ಯವಸ್ತು ಇಲಾಖೆಯ ವೃತ್ತಿಗೆ ರಾಜೀನಾಮೆ ಕೊಟ್ಟು, ಗೆಳೆಯರೊಡಗೂಡಿ ಕೆತ್ತನೆ ಹಾಗೂ ಮುದ್ರಣದ ವ್ಯಾಪಾರವನ್ನು ಪ್ರಾರಂಭಿಸಿದರು. ಆಗಿನ ಬೊಂಬಾಯಿಯಲ್ಲಿ ಕಲಾರಂಗದ ವಲಯದಲ್ಲಿ ಮಹಾನ್ ಮೇಧಾವಿಗಳೆಂದು ಅವರು ಹೆಸರು ಗಳಿಸಿದರು. 1909ರ ವರ್ಷದಲ್ಲಿ ಹೊಸಯಂತ್ರವೊಂದನ್ನು ತರಲು, ಹೊಸ ಯಂತ್ರಗಳ ಮಾಹಿತಿ ಪಡೆಯಲು, ಜರ್ಮನಿಗೆ ತೆರಳಿದರು. 1911ರಲ್ಲಿ ತಮ್ಮ ಸಹಉದ್ಯಮಿಗಳ ಜೊತೆ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಅವರ ವ್ಯಾಪಾರದಲ್ಲಿ ಹೆಚ್ಚು ಪ್ರಗತಿಯಾಗಲಿಲ್ಲ. ಮಡದಿ ಸರಸ್ವತೀಬಾಯಿಯವರು, ಪತಿಯ ಕಷ್ಟದದಿನಗಳಲ್ಲಿ ಅವರ ಮನಸ್ಸಿಗೆ ಬೇಸರಪಡಿಸದೆ, ಸಹಕಾರನೀಡಿ ಇದ್ದ ಹಣದಲ್ಲೇ ಮನೆಯ ಅವಶ್ಯಕತೆಗಳನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದರು.ಒಂದು ದಿನ ಬೇಸರ ಕಳೆಯಲೆಂದು ‘ಲೈಫ್ ಆಫ್ ಕ್ರೈಸ್ಟ್’ ಎಂಬ ಇಂಗ್ಲೀಷ್ ಚಿತ್ರ ವೀಕ್ಷಿಸಿದ ದುಂಡಿರಾಜರು, ಚಿತ್ರಮಂದಿರದ ಬಳಿ ಎಸೆದಿದ್ದ ರೀಲಿನ ಸಣ್ಣ ಸಣ್ಣ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಮಸೂರದ ಸಹಾಯದಿಂದ ನೋಡಿದರು. ಕಂಪನಿಯೊಂದರಿಂದ ಆಟಿಕೆಯ ಸಿನಿಮಾ ಪ್ರದರ್ಶಿಸುವ ಯಂತ್ರವೊಂದನ್ನೂ, ಸಣ್ಣ ಪ್ರಮಾಣದ ರೀಲನ್ನೂ ತಂದು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು. ಇದು ಅವರ ಮೊದಲ ಚಿತ್ರವಾಗಿತ್ತು. ಕುಟುಂಬದ ಸದಸ್ಯರು ಮೊದಲ ಪ್ರೇಕ್ಷಕರಾಗಿದ್ದರು. ದುಂಡಿರಾಜರಿಗೆ ತಮ್ಮ 40ನೆಯ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಇದ್ದಕ್ಕಿದ್ದಂತೆ ಮಂದವಾಗಿ ಹೋಗಿ ಕಣ್ಣು ಸರಿಯಾಗಿ ಕಾಣದಾಯಿತು. ಅವರ ಆಸೆಗಳು ನುಚ್ಚುನೂರಾಗಿತ್ತು. ಅವರ ಪಾಲಿಗೆ ಪ್ರಪಂಚವೇ ತಲೆಕೆಳಗಾಗಿತ್ತು. ವೈದ್ಯ ಮಿತ್ರ ಡಾ.ಪ್ರಭಾಕರ್ ಅವರ ನಿರಂತರ ಚಿಕಿತ್ಸೆ ಹಾಗೂ ಆರೈಕೆಯಿಂದ ಕಣ್ಣುಗಳು ಮತ್ತೆ ಕಾಣುವಂತಾಯಿತು. ದುಂಡಿರಾಜರ ಆಸೆ ಮತ್ತೆ ತಲೆ ಎತ್ತಿತು. ದುಂಡಿರಾಜರಿಗೆ ಅಪ್ಪಟ ಭಾರತೀಯ ಚಿತ್ರ ಮಾಡಬೇಕೆಂಬ ಹಂಬಲ ಅತಿಯಾಯ್ತು. ತಮ್ಮಲ್ಲಿದ್ದ ಸಮಸ್ತವನ್ನೂ ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ತೆರಳಿದರು. 42ವರುಷ ವಯಸ್ಸಿನ ದುಂಡಿರಾಜರಿಗೆ ಸ್ನೇಹಿತರಿಂದಾಗಲೀ ನೆಂಟರಿಷ್ಟರಿಂದಲಾಗಲೀ ಹೆಚ್ಚಿನ ನೆರವು ದೊರೆಯಲಿಲ್ಲ. ಅಲ್ಲಿನ ‘ಬಯಾಸ್ಕೋಪ್’ ಎಂಬ ‘ಚಲನಚಿತ್ರ ವಾರಪತ್ರಿಕೆಯ ಸಂಪಾದಕ’ರಾಗಿದ್ದ ‘ಕಾರ್ಬೋನ್’ ಮೊದಲು ಹಿಂಜರಿದರೂ, ದುಂಡಿರಾಜರ ಅಚಲ ನಿರ್ಧಾರ ಕಂಡು ಮೆಚ್ಚಿ, ‘ಚಿತ್ರ ನಿರ್ಮಾಪಕ ಸಿಸಿಲ್’ ಅವರನ್ನು ‘ದುಂಡಿರಾಜ’ರಿಗೆ ಪರಿಚಯಿಸಿದರು. ಇವರ ಗರಡಿಯಲ್ಲಿ ಚಲನಚಿತ್ರ ನಿರ್ಮಾಣದ ಎಲ್ಲಾ ಭಾಗಗಳನ್ನು ಅಧ್ಯಯನ ಮಾಡಿ, ಚಿತ್ರ ನಿರ್ಮಾಣದ ಅಚಲ ನಿರ್ಧಾರದೊಂದಿಗೆ ಮತ್ತೆ ತವರಿಗೆ ಮರಳಿದರು ‘ಫಾಲ್ಕೆ ಸಾಹೇಬರು’.
ಫಾಲ್ಕೆಯವರ ಚಿತ್ರನಿರ್ಮಾಣದ ಪ್ರಯತ್ನದಲ್ಲಿ, ಮತ್ತೆ ಹಣ ಸಾಲದಾಯಿತು. ಪತ್ನಿ ಸರಸ್ವತೀಬಾಯಿ, ತಮ್ಮ ಒಡವೆಗಳನ್ನು ಅಡವಿಟ್ಟರು. ರಾಮ, ಕೃಷ್ಣರ ಕಥೆಗಳು ಬೇಡವೆಂದು ಕಡೆಗೆ, ‘ರಾಜಾ ಹರಿಶ್ಚಂದ್ರನ ಕಥೆ’ಯನ್ನು ಚಿತ್ರ ಮಾಡುವುದೆಂದು ‘ದಾದಾ’ ನಿರ್ಧಾರ ಮಾಡಿದರು. ಆ ಕಾಲದಲ್ಲಿ ಚಿತ್ರನಿರ್ಮಾಣದ ಕಲೆ ಯಾರಿಗೂ ತಿಳಿದಿರಲಿಲ್ಲ. ಇದರಿಂದಾಗಿ ರಾಜಾ ಹರಿಶ್ಚಂದ್ರ ಚಿತ್ರದ ಲೇಖನ, ನಿರ್ಮಾಣ ಕಾರ್ಯ, ನಿರ್ದೇಶನ, ಹಾಗೂ ನಟನೆ ಮತ್ತು, ಛಾಯಾಗ್ರಹಣವನ್ನೂ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ ಶ್ರೇಯಸ್ಸು ದುಂಡಿರಾಜರದು. ಅವರ ಮನೆಯೇ ಫಾಲ್ಕೆ ಫಿಲ್ಮ್ ಸಂಸ್ಥೆ. ಇಡೀ ಚಿತ್ರರಂಗದ ಊಟ, ಉಪಚಾರ ಸರಸ್ವತೀಬಾಯಿಯವರದ್ದು. ಕಾಳಗದ ದೃಶ್ಯ ಚಿತ್ರೀಕರಣಗೊಂಡಿದ್ದು ಸಹಾ, ದುಂಡಿರಾಜರ ಮನೆಯಲ್ಲಿಯೇ.ಕಟ್ಟಕಡೆಗೆ ಏಪ್ರಿಲ್ 21, 1913ರಂದು ಮುಂಬಯಿಯ ‘ಒಲಂಪಿಯಾ ಚಿತ್ರಮಂದಿರ’ದಲ್ಲಿ ಮುಂಬಯಿಯ ಶ್ರಿಮಂತರು, ಪತ್ರಿಕಾರಂಗದವರು, ಹಲವು ಮಹನೀಯರ ಮುಂದೆ ಪೂರ್ವಭಾವಿ ಪ್ರದರ್ಶನ ಏರ್ಪಟ್ಟಿತ್ತು. ಈ ಚಿತ್ರವನ್ನು ವೀಕ್ಷಿಸಿದ ಆ ಗುಂಪು ದಂಗಾದರು. ಕಡೆಗೂ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ, ಕನಸು ನನಸಾಯಿತೆಂದು ದುಂಡಿರಾಜರು ಸಂತಸಪಟ್ಟರು. ಆದರೆ ಪ್ರೇಕ್ಷಕರ ಮುಂದೆ ಚಿತ್ರ ಗೆಲ್ಲಬೇಕಾಗಿತ್ತು.
‘1913ರ ವರ್ಷದ ಮೇ 13’ ಭಾರತೀಯ ಚಲನಚಿತ್ರರಂಗ ತನ್ನ ಚರಿತ್ರೆಯನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿದ ದಿನ. ಅಂದು ಮುಂಬೈನ ಜನಸಾಗರದ ದೃಷ್ಟಿಯೆಲ್ಲಾ ಒಂದೆಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು ‘ಮುಂಬೈನ ಕಾರೋನೇಷನ್ ಚಿತ್ರಮಂದಿರ’ ದಲ್ಲಿದ್ದರು. ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಜಮಾಯಿಸಿದ್ದರು. ಥಿಯೇಟರ್ ಒಳಗೆ ಕುಳಿತ ಜನರ ಕಣ್ಣುಗಳು ಚಿತ್ರರಂಗ ಪರದೆಯ ಮೇಲೆ ಕೇಂದ್ರೀಕೃತವಾಗಿತ್ತು. ಎಲ್ಲರ ಕಣ್ಣಿನಲ್ಲೂ ಅದೇನೋ ಕುತೂಹಲ, ತವಕ, ಹಾಗೂ ವಿಸ್ಮಯಲೋಕವೊಂದನ್ನು ತಮ್ಮ ಎರಡೂ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ ಆವರಿಸಿತ್ತು. ಮೊದಲಿಗೆ ಪಾಶ್ಚಾತ್ಯ ತರುಣಿಯರಿಂದ ಚೆಂದದ ನೃತ್ಯ ಮುಗಿದಂತೆ ತೆರೆಯ ಮೇಲೆ, ಅವರು ಕಂಡಿದ್ದೇನು. ಭಾರತದ ನಾಯಕ, ನಾಯಕಿಯರನ್ನು. ಸಾಕ್ಷಾತ್ ಹರಿಶಂದ್ರ ಮತ್ತು ಚಂದ್ರಮತಿಯರನ್ನು. ಥಿಯೇಟರಿನಲ್ಲಿ ಎಲ್ಲವೂ ನಿಶ್ಯಬ್ದ. ಮಾತಿಗೆ ಎಡೆಯಿರಲಿಲ್ಲ. ನಟನೆಯೇ ಮಾತಿನ ಜಾಗವನ್ನು ಆವರಿಸಿತ್ತು. ಬೆಳ್ಳಿಯ ತೆರೆಯ ಮೇಲೆ ಮಹಾರಾಜ ಹರಿಶ್ಚಂದ್ರ ಹಾಗೂ ರಾಣೀ ಚಂದ್ರಮತಿಯರ ‘ಸತ್ಯಾನ್ವೇಷಣೆಯ ಪರಿ’ಯನ್ನು ಕಂಡು ಪ್ರೇಕ್ಷಕರು ಕಣ್ಣೀರಿಟ್ಟರು. ‘ರಾಜಶ್ರೀ ವಿಶ್ವಾಮಿತ್ರ’ ಮತ್ತು ‘ವಸಿಷ್ಠ’ರ ನಡುವೆಯ ವಾಗ್ಯುದ್ಧದಲ್ಲಿ ಏನೂ ಪಾಪವರಿಯದ ರಾಜ ದಂಪತಿಗಳು ಪಡುತ್ತಿರುವ ಬವಣೆಯನ್ನು ಕಂಡು ಚಿತ್ರರಸಿಕರು ಹಲುಬಿದರು. ನಿಟ್ಟುಸಿರೆಳೆದರು. ಕಾಲದ ಪರಿವೆಯನ್ನು ಮರೆತು ಹರಿಶ್ಚಂದ್ರ-ಚಂದ್ರಮತಿಯರ ಕಷ್ಟ-ಸುಖಗಳಲ್ಲಿ ಒಂದಾದರು. ಈ ಚಿತ್ರ ನಮ್ಮ ಭಾರತೀಯ ಚಿತ್ರರಂಗದ ಬೆಳವಣಿಗೆಯ, ನಾಂದಿಗೆ ದಾರಿಯಾಯಿತು. ನಂತರ, ಮರಾಠಿ, ತಮಿಳು, ಕನ್ನಡ, ಮುಂತಾದ ಭಾಷೆಗಳ ಚಲನ ಚಿತ್ರಗಳು ದಕ್ಷಿಣ ಭಾರತದಲ್ಲಿ ಪಾದಾರ್ಪಣೆಗೊಂಡು ಚರಿತ್ರೆಯನ್ನೇ ಸೃಷ್ಟಿಸಿದವು.ಹೀಗೆ, ಇಪ್ಪತ್ತನೆಯ ಶತಮಾನದಲ್ಲಿ ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆಯವರ ಹೆಸರು, ದೇಶದಾದ್ಯಂತ ದುಂದುಬಿಯಂತೆ ಪಸರಿಸಿತು. ಚಿತ್ರರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಇವರ ಹೆಸರಿನಲ್ಲಿ ಪುರಸ್ಕಾರಗಳನ್ನು ಘೋಷಿಸಲಾಯಿತು. ಈ ಪ್ರಶಸ್ತಿ ಪಡೆಯುವುದು ಚಲನಚಿತ್ರ ರಂಗದ ಉತ್ತಮ ಕಲಾವಿದನೊಬ್ಬನ ಜೀವಮಾನದ ಗುರಿ. ಆ ಪ್ರಶಸ್ತಿ ಪಡೆದ ಕಲಾವಿದ ಎಲ್ಲಾ ಘಟ್ಟಗಳನ್ನೂ ದಾಟಿ ‘ಎವರೆಸ್ಟ್ ಶಿಖರದ ತುಟ್ಟ ತುದಿ ಮುಟ್ಟಿದಂತೆ’. ಇಂತಹ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಮೊದಲಿಗರು ‘ದೇವಿಕಾರಾಣಿ ರೋರಿಚ್’ (1969). 1995ರಲ್ಲಿ ನಮ್ಮ ವರನಟ,’ಡಾ.ರಾಜ್‌ಕುಮಾರ್’ ಫಾಲ್ಕೆ ಪ್ರಶಸ್ತಿ ಪಡೆದರು. ಮುಂದೆ ಕನ್ನಡದವರೇ ಅಗಿರುವ ಚಲನಚಿತ್ರ ಛಾಯಾಗ್ರಾಹಕರಾದ ‘ವಿ.ಕೆ.ಮೂರ್ತಿ’ಯವರಿಗೆ ‘ದಾದಾ ಸಾಹೇಬ್ ಫಾಲ್ಕೆಪ್ರಶಸ್ತಿ’ ಸಂದಿದೆ.ಈ ಮಹಾನ್ ಸಾಹಸಿ ದಾದಾ ಸಾಹೇಬ್ ಫಾಲ್ಕೆಯವರು 1944ರ ಫೆಬ್ರವರಿ 16ರಂದು ಈ ಲೋಕವನ್ನಗಲಿದರು. ಭಾರತೀಯ ಚಲನಚಿತ್ರಯುಗದ ಸೃಷ್ಟಿಕರ್ತರಾದ ದಾದಾ ಸಾಹೇಬ್ ಫಾಲ್ಕೆ ಅವರು ಹೆಸರು ಎಂದೆಂದೂ ಅಜರಾಮರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲೇಷಿಯಾದ ಸಚಿವರು ತಮ್ಮ 'ಮೊಂಡುತನದ' ಹೆಂಡತಿಯರನ್ನು 'ಮೆದುವಾಗಿ' ಹೊಡೆಯುವಂತೆ ಗಂಡನಿಗೆ ಸಲಹೆ ನೀಡುತ್ತಿದ್ದಂತೆ ಆಕ್ರೋಶ

Fri Feb 18 , 2022
  ಹೊಸದಿಲ್ಲಿ, ಫೆ.18: ‘ಅಶಿಸ್ತಿನ’ ನಡವಳಿಕೆಗಾಗಿ ಶಿಸ್ತಿಗೆ ತಮ್ಮ ‘ಹಠಮಾರಿ’ ಪತ್ನಿಯರನ್ನು ‘ಮೆದುವಾಗಿ’ ಹೊಡೆಯುವಂತೆ ಗಂಡಂದಿರಿಗೆ ಸಲಹೆ ನೀಡಿದ ಮಲೇಷ್ಯಾದ ಮಹಿಳಾ ಸಚಿವೆಯೊಬ್ಬರು ವಿಶ್ವಾದ್ಯಂತ ಟೀಕೆಗೆ ಗುರಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಎರಡು ನಿಮಿಷಗಳ ವೀಡಿಯೊದಲ್ಲಿ ತಾಯಿಯ ಸಲಹೆಗಳು, ಮಹಿಳೆಯರು, ಕುಟುಂಬ ಮತ್ತು ಸಮುದಾಯ ಅಭಿವೃದ್ಧಿಯ ಉಪ ಮಂತ್ರಿ ಸಿತಿ ಜೈಲಾ ಮೊಹಮ್ಮದ್ ಯೂಸಾಫ್, ಮೊದಲು “ಅಶಿಸ್ತಿನ ಮತ್ತು ಮೊಂಡುತನದ ಹೆಂಡತಿಯರೊಂದಿಗೆ” ಮಾತನಾಡಲು ಮತ್ತು ಅವರು ಪಾಲಿಸದಿದ್ದರೆ, ಅವುಗಳನ್ನು ಹೊರತುಪಡಿಸಿ […]

Advertisement

Wordpress Social Share Plugin powered by Ultimatelysocial