ಮಂಗಳೂರು, ಸೆಪ್ಟೆಂಬರ್, 14: ಸೆಪ್ಟೆಂಬರ್ 19ರಿಂದ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಸೆಪ್ಟೆಂಬರ್ 19ರಂದು ಸರ್ಕಾರಿ ರಜೆ ಘೋಷಣೆ ಮಾಡಬೇಕೆನ್ನುವ ಕೂಗುಗಳು ಎದ್ದಿದೆ. ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಅದೇ ಬೇಡಿಕೆಗಳು ಕೇಳಿಬಂದಿವೆ.
ಗಣೇಶೋತ್ಸವ ಹಿನ್ನೆಲೆ ಸೆಪ್ಟೆಂಬರ್ 19ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದರು. ಇದೀಗ ಸೆಪ್ಟೆಂಬರ್ 19ರಂದು ರಜೆ ನೀಡಲು ಸರ್ಕಾರದ ಮುಖ್ಯ ಕಾರ್ಯಕರ್ಶಿಗೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿಗೆ ಸರ್ಕಾರಿ ರಜೆ ಇದ್ದು, ಇದನ್ನು ಜಿಲ್ಲೆಯಲ್ಲಿ ಸೆಪ್ಟೆಂಬರ್ 19ರಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ವಿಶೇಷ ರೈಲುಗಳನ್ನು ಬಿಡುವಂತೆ ಒತ್ತಾಯ
ಇದೇ ಸೆಪ್ಟೆಂಬರ್ 18ರಂದು ಗಣೇಶ ಹಬ್ಬ ಇದ್ದು, ಈ ಹಿನ್ನೆಲೆ ನಗರ ಪ್ರದೇಶಗಳಿಂದ ತಮ್ಮ ಊರಿಗೆ ಬಸ್ಸುಗಳಿಗಿಂತ ರೈಲಿನಲ್ಲೆಯೇ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಇದನ್ನು ಎಚ್ಚೆತ್ತುಕೊಂಡು ಪ್ರಯಾಣಿಕರ ದಟ್ಟಣೆ ತಡೆಯಲು ಈಗಾಗಲೇ ಭಾರತೀಯ ರೈಲ್ವೆ ಹೆಚ್ಚುವರಿ ರೈಲುಗಳನ್ನು ಬಿಟ್ಟಿದೆ. ಅಲ್ಲದೆ ಈ ಭಾಗಗಳಲ್ಲಿ ಇನ್ನೂ ಹೆಚ್ಚಿನ ವಿಶೇಷ ರೈಲುಗಳನ್ನು ಬಿಡಲು ಒತ್ತಾಯಗಳು ಬರುತ್ತಿವೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಬಿಡಬೇಕೆಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘವು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ. ಆದ್ದರಿಂದ ಬೆಂಗಳೂರು-ಹುಬ್ಬಳ್ಳಿ- ಮೀರಜ್, ಹುಬ್ಬಳ್ಳಿ-ದಾವಣಗೆರೆ-ಅರಸೀಕೆರೆ-ಮೈಸೂರು, ಹುಬ್ಬಳ್ಳಿ-ಅರಸೀಕೆರೆ-ಬೆಂಗಳೂರು, ಬೆಂಗಳೂರು-ಅರಸೀಕೆರೆ-ಮಂಗಳೂರು, ಹುಬ್ಬಳ್ಳಿ ಯಶವಂತಪುರ-ಕೊಯಿಮತ್ತೂರು ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಒತ್ತಾಯಿಸಿದ್ದಾರೆ