ಜಿ. ಕೆ. ಸತ್ಯ ಪ್ರಸಿದ್ಧ ಕಲಾವಿದರಾಗಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಕನ್ನಡಪರ ಹೋರಾಟಗಾರರಾಗಿ, ಕಾರ್ಮಿಕ ಒಕ್ಕೂಟದ ನಾಯಕರಾಗಿ ಹೀಗೆ ಬಹುಮುಖಿ ವ್ಯಕ್ತಿತ್ವದವರು.ಜಿ. ಕೆ. ಸತ್ಯ ಅವರು 1943ರ ಫೆಬ್ರವರಿ 7ರಂದು ಜನಿಸಿದರು.ಬಹುಮುಖಿ ಪ್ರತಿಭೆಯ ಜಿ. ಕೆ. ಸತ್ಯ ಅವರು ಎದ್ದು ಕಾಣುವುದು ಅವರ ಸುಂದರ ರೇಖಾಚಿತ್ರಗಳಿಂದ. 1960ರ ವರ್ಷದಿಂದ 5 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾಲೋಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸತ್ಯ ಅವರ ಪ್ರಾರಂಭಿಕ ಚಿತ್ರಗಳು ಜನಪ್ರಗತಿಯಂತಹ ಪತ್ರಿಕೆಗಳಲ್ಲಿ ಕಂಡುಬರುತ್ತವೆ.ನಾಡಿನ ಪ್ರಸಿದ್ಧ ಚಿತ್ರಕಲಾವಿದರೂ ಮತ್ತು ಹಿರಿಯ ಗೌರವಾನ್ವಿತ ಪತ್ರಕರ್ತರೂ ಆದ ಸತ್ಯ ಅವರು ಮುಂದೆ ಮೂರು ದಶಕಗಳ ಕಾಲ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹದಲ್ಲಿ ಸೇವೆ ಸಲ್ಲಿಸಿದರು. ಸತ್ಯ ಅವರು ರಚಿಸಿದ ಶ್ರೇಷ್ಠ ಮಟ್ಟದ ಚಿತ್ರಗಳು ಪತ್ರಿಕಾಲೋಕದ ಅನೇಕ ಕಥೆ ಕಾವ್ಯಗಳ ಮೌಲ್ಯವನ್ನು ಹೆಚ್ಚಿಸಿರುವುದರ ಜೊತೆಗೆ, ಅವರು ರಚಿಸಿರುವ ಚಿತ್ರಗಳು ಸಹಸ್ರಾರು ಪುಸ್ತಕಗಳ ಹೊದಿಕೆಗಳಾಗಿ ಹಾಗೂ ಕಥಾಚಿತ್ರಗಳ ಭಾಗವಾಗಿಯೂ ಕಂಗೊಳಿಸಿ ಕೃತಿಮೌಲ್ಯವನ್ನು ವೃದ್ಧಿಸಿವೆ.ಪ್ರಸಕ್ತದಲ್ಲಿಯೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಜಿ. ಕೆ. ಸತ್ಯ ಅವರು ‘ಇಂಡಸ್ಟ್ರಿಯಲ್ ನ್ಯೂಸ್ ಅಂಡ್ ಅನಾಲಿಸಿಸ್’ನ ಪ್ರಧಾನ ಸಂಪಾದಕತ್ವ ನಿರ್ವಹಿಸುತ್ತಿದ್ದಾರೆ.ಜಿ. ಕೆ. ಸತ್ಯ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರಲ್ಲದೆ, ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಒಕ್ಕೂಟದಲ್ಲೂ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
https://play.google.com/store/apps/details?id=com.speed.newskannada