ಗೂಗಲ್ ಸಿಇಒ ಭಾರತದ ಮೂಲದ ಸುಂದರ್ ಪಿಚ್ಚೈ 2022ರ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ಪ್ರಕಟಿಸಿದ್ದು, ಇದರಲ್ಲಿ ಗೂಗಲ್ ಸಿಇಒ ಕೂಡ ಇದ್ದಾರೆ. ಇದೇ ಬೆನ್ನಲ್ಲೇ ಈಗ ಸುಂದರ್ ಪಿಚ್ಚೈ ಅವರ ವಿರುದ್ಧ ಕೇಸ್ ದಾಖಲಾಗಿದೆ ಎನ್ನುವ ಸುದ್ದಿ ಹೊರ ಬಂದಿದೆ.
ಕೃತಿಸ್ವಾಮ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಮುಂಬೈ ಪೊಲೀಸರು, ಗೂಗಲ್ ಸಿಇಒ ಸುಂದರ್ ಪಿಚ್ಚೈ ಮತ್ತು ಇತರೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ, ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಲಾಗಿದೆ. ಗೂಗಲ್ ಸಿಇಒ ಸುಂದರ್ ಪಿಚ್ಚೈ ಮತ್ತು ಐವರು ಕಂಪನಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
‘ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಚಿತ್ರವನ್ನು ಅನುಮತಿ ಇಲ್ಲದೇ ಗೂಗಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು, ಆರೋಪಿಸಿ ನಿರ್ದೇಶಕ ಸುನೀಲ್ ದರ್ಶನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಟ್ಯೂಬ್ನಲ್ಲಿ ತಮ್ಮ ಚಲನಚಿತ್ರ ‘ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಅಪ್ಲೋಡ್ ಮಾಡಲಾಗಿದೆ. ಇದು ಹಕ್ಕುಸ್ವಾಮ್ಯ ಉಲ್ಲಂಘನೆ ಎಂದು ನಿರ್ಮಾಪಕ ಸುನೀಲ್ ದರ್ಶನ್ ಆರೋಪಿಸಿದ್ದಾರೆ. ತಮ್ಮ ದೂರಿನಲ್ಲಿ ಇದಕ್ಕೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರೇ ಕಾರಣ ಎಂದು ದಾಖಲಿಸಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿರುವ ನಿರ್ಮಾಪಕ ಸುನೀಲ್ ದರ್ಶನ್, “ನಾನು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿಲ್ಲ. ನಾನು ದಾಖಲೆ ಸಮೇತ ಸತ್ಯಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕಿಂತ ಹೊರತಾಗಿ ಬೇರೆ ಯಾವುದೇ ಉದ್ದೇಶ ಹೊಂದಿಲ್ಲ. ಚಲನಚಿತ್ರ ನಿರ್ಮಾಪಕ ಮತ್ತು ಹಕ್ಕುಸ್ವಾಮ್ಯ ಮಾಲೀಕನಾಗಿ, ನಾನು ಕೆಲವು ಹಕ್ಕುಗಳನ್ನು ಹೊಂದಿದ್ದೇನೆ. ಅವುಗಳನ್ನು ನಿರ್ದಯವಾಗಿ ಉಲ್ಲಂಘಿಸಿದಾಗ, ನಾನು ಏನು ಮಾಡಬೇಕು? ನಾನೊಬ್ಬ ಅಸಹಾಯಕ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಚಿತ್ರದ ಬಾಲಿವುಡ್ನ ರೊಮ್ಯಾಂಟಿಕ್, ಮ್ಯೂಸಿಕ್ ಸಿನಿಮಾ. ಈ ಚಿತ್ರ 2017ರಲ್ಲೇ ತೆರೆ ಕಂಡಿದೆ. ಈ ಚಿತ್ರವನ್ನು ಸುನೀಲ್ ದರ್ಶನ್ ಅವರು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಶಿವ್ ದರ್ಶನ್, ನತಾಶಾ ಫರ್ನಾಂಡಿಸ್, ಸೋನಿ ಕೌರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada