ಎಂ. ಗೋಪಾಲಕೃಷ್ಣ ಅಡಿಗರು ಯಾವುದೇ ನಾಡು ಹೊಂದಲು ಹೆಮ್ಮೆ ಪಡುವಂತಹ ಅಸಾಮಾನ್ಯ ಕವಿ.

ಡಾ. ಎಂ. ಗೋಪಾಲಕೃಷ್ಣ ಅಡಿಗರು ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ ಎಂಬ ಹಳ್ಳಿಯಲ್ಲಿ 1918ರ ಫೆಬ್ರವರಿ 18ರಂದು ಜನಿಸಿದರು. ಮನೆಯ ಮುಂಜಗಲಿಯ ಮೇಲೆ ಕುಳಿತರೆ ದೂರದಲ್ಲಿ ಮೋಡಗಳಾಚೆ ಕಾಣುವ ಪಶ್ಚಿಮ ಘಟ್ಟಗಳ ಸಾಲು; ಹಿಂಬಾಗಿಲಿನ ಹಿತ್ತಲಿಗೆ ಬಂದರೆ ಅಡಿಕೆ, ಬಾಳೆ, ಸೀಬೆ, ನಿಂಬೆ, ಮಾವು, ಹಲಸು – ಈ ಸಸ್ಯಲೋಕ; ಅಕ್ಕಪಕ್ಕ ತೋಟ ಗದ್ದೆಗಳಲ್ಲಿ ಬೆಳೆದುನಿಂತ ಮರ ಗಿಡ ಪೈರು; ಅಂಗಳದಲ್ಲಿ ನಿಂತು ಕಣ್ಣು ಹಾಯಿಸಿದರೆ ಮೇಲೆ ಕಾಣುವ ಆ ನೀಲ ಲೋಕ; ಅನತಿ ದೂರದಲ್ಲೇ ಪ್ರಕೃತಿ ಚೇಷ್ಟೆಗಳಿಗೆಲ್ಲ ಶೃತಿ ಹಿಡಿದಂತೆ ಸದಾ ಭೋರ್ಗರೆಯುತ್ತ, ಸದಾ ತುಡಿಯುತ್ತ ಸ್ಥಾಯಿಯಾಗಿ ಇರುವ ಸಮುದ್ರ – ಈ ಎಲ್ಲ ವಿಸ್ಮಯ, ವಿಚಿತ್ರ ವೈಭವಗಳ ನಡುವೆ ಅಡಿಗರ ಬಾಲ್ಯ ಕಳೆಯಿತು.ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ಅವರ ಹತ್ತಿರದ ಬಂಧುಗಳೊಬ್ಬರು ಅವರ ಮನೆಯಲ್ಲೇ ಇದ್ದು ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿದ್ದರಂತೆ. ಮನೆಯಲ್ಲಿ ಪದ್ಯ ರಚನೆ, ವಾಚನಗಳ ವಾತಾವರಣವಿತ್ತು. ಪ್ರತಿರಾತ್ರಿಯೂ ಅವರ ಸೋದರತ್ತೆ ನಾರಣಪ್ಪನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವುಗಳನ್ನು ರಾಗವಾಗಿ ಓದಿ ಹೇಳುತ್ತಿದ್ದರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರು. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತು. ಈ ವಾತಾವರಣದಲ್ಲಿ ಅಡಿಗರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಪದ್ಯರಚನೆಗೆ ಕೈಹಾಕಿದರು. ಭಾಮಿನಿಷಟ್ಪದಿ, ವಾರ್ಧಕ ಷಟ್ಪದಿ ಕಂದ ಪದ್ಯಗಳನ್ನು ರಚಿಸುತ್ತಿದ್ದರು.ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ. ಎ (ಆನರ್ಸ್), ಎಂ.ಎ (ಇಂಗ್ಲಿಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರಿನ ಶಾರದಾ ವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮುಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿ ತಮ್ಮ ವಿಶ್ರಾಂತ ಬದುಕನ್ನು ಬೆಂಗಳೂರಿನಲ್ಲಿ ಕಳೆದರು.‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ ಅಡಿಗರು ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು.ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ ಪ್ರಕಟವಾದದ್ದು 1946ರಲ್ಲಿ. ನಂತರದಲ್ಲಿ ಅವರ ಹನ್ನೊಂದು ಕವನ ಸಂಕಲನಗಳು ಪ್ರಕಟವಾದವು. ಕಟ್ಟುವೆವು ನಾವು (1948), ನಡೆದು ಬಂದ ದಾರಿ (1952), ಚಂಡೆಮದ್ದಳೆ (1954), ಭೂಮಿಗೀತ (1959), ವರ್ಧಮಾನ (1972), ಇದನ್ನು ಬಯಸಿರಲಿಲ್ಲ (1975), ಮೂಲಕ ಮಹಾಶಯರು (1981), ಬತ್ತಲಾರದ ಗಂಗೆ (1983), ಚಿಂತಾಮಣಿಯಲ್ಲಿ ಕಂಡ ಮುಖ (1987), ಸುವರ್ಣ ಪುತ್ಥಳಿ (1990) ಹಾಗೂ ಬಾ ಇತ್ತ ಇತ್ತ (1993) ಪ್ರಕಟಗೊಂಡವು. 1937ರಿಂದ 1976ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ 1987ರಲ್ಲಿ ಪ್ರಕಟಗೊಂಡಿತು. ಅಡಿಗರು ಅನಾಥೆ, ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನೂ ಬರೆದರು. ಅವರ ಅನೇಕ ಅನುವಾದ ಕೃತಿಗಳೂ ಪ್ರಕಟಗೊಂಡವು.ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದರು. ಅವರ ಈ ಎಲ್ಲ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’ ಎಂಬ ಸಂಪುಟವೊಂದರಲ್ಲಿ ಪ್ರಕಟಗೊಂಡಿದೆ. ಅಡಿಗರು ಕೆಲವು ಸಣ್ಣಕಥೆಗಳನ್ನೂ ಬರೆದರು. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ‘ಆಧುನಿಕ ಮಹಾಕಾವ್ಯ’ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಅಡಿಗರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅಡಿಗರ ಕಾವ್ಯನಾಯಕನ ಕೆಲವು ಲಕ್ಷಣಗಳನ್ನೂ ಹೀಗೆ ಗುರುತಿಸಬಹುದು: ಸಾಂಪ್ರದಾಯಿಕವಾದ ಒಪ್ಪಿತ ಮೌಲ್ಯಗಳ ಬಗ್ಗೆ ಈತನಿಗೆ ಆರಾಧಕ ಮನೋಭಾವವಿಲ್ಲ. ಹಾಗೆಂದು ಅವುಗಳನ್ನು ಈತ ಸಾರಾಸಗಟಾಗಿ ತಿರಸ್ಕರಿಸುವಂಥವನೂ ಅಲ್ಲ. ಚಿಕಿತ್ಸಕ ಮನೋಭಾವದ ಈತನಿಗೆ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಪರಂಪರೆಯನ್ನು ಸೂಕ್ತವಾಗಿ ಒಗ್ಗಿಸಿಕೊಳ್ಳುವುದರ ಬಗ್ಗೆ ಆಸಕ್ತಿ. ಅನೇಕ ನವ್ಯಕೃತಿಗಳಲ್ಲಿ ಕಾಣಿಸುವಂತೆ ಅಡಿಗರ ನಾಯಕ ಸೂಕ್ಷ್ಮ ಮನಸ್ಸಿನ ದುರ್ಬಲ ವ್ಯಕ್ತಿಯಲ್ಲ. ಈತನೊಬ್ಬ ಹೋರಾಟಗಾರ. ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧವೂ ಈತ ಪ್ರತಿಭಟಿಸುತ್ತಾನೆ. ಈ ಪ್ರತಿಭಟನೆ ಆತ್ಮ ವಿಶ್ಲೇಷಣೆಯ ಪ್ರಕ್ರಿಯೆಯೂ ಆಗುತ್ತದೆ. ಎಲ್ಲ ರೀತಿಯ ಆಕ್ರಮಣಗಳನ್ನೂ ಎದುರಿಸಿ ವ್ಯಕ್ತಿವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಈತನ ತುಡಿತ.ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದುಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದುನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವಪನ್ನತಿಕೆ ಬರುವನಕ ನನ್ನ ಬಾಳಿದು ನರಕ (ನನ್ನ ನುಡಿ)
“ಭಾವತರಂಗದ ಮೊದಲ ಕವಿತೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳುವ ಮನೋಭಾವವನ್ನು ಅಡಿಗರು ಸ್ಪಷ್ಟವಾಗಿ ಸೂಚಿಸಿದ್ದಾರೆ. (೧) ಬಗೆಯೊಳಗನೇ ತೆರೆದು, (೨) ನನ್ನ ನುಡಿಯೊಳೆ, ಅಡಿಗರು ಹೇಳುವ ಈ ಎರಡು ಸಂಗತಿಗಳು ಅವರ ಇಡೀ ಕಾವ್ಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಬೀಜರೂಪದ ಮಾತುಗಳಾಗಿವೆ. ವಸ್ತು ಹಾಗೂ ಅಭಿವ್ಯಕ್ತಿ ಎರಡರಲ್ಲೂ ಹೊಸದನ್ನು ಸಾಧಿಸಬೇಕೆಂಬ ಹಂಬಲವನ್ನು ಇಲ್ಲಿ ಕಾಣಬಹುದಾಗಿದೆ. ಭಾವತರಂಗದ ಹೆಸರೇ ಸೂಚಿಸುವಂತೆ ಅಡಿಗರ ಕಾವ್ಯ ಇಲ್ಲಿ ಭಾವದ ಅಲೆಯ ಮೇಲೆ ತೇಲಿದೆ.
ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ ಕೆಚ್ಚೆದೆತನದ ಬಲ್ಮೆಯನು ಬಿತ್ತರಿಪೆನುಪದವನಿಡುತೆನ್ನೆದೆಯ ಮೇಲೆ ತಾಂಡವವೆಸಗುಬೆದರುವೆನೆ ಬೆಚ್ಚುವೆನೆ ನಿನಗೆ ನಾನು (ವಿಧಿಗೆ)ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವಾವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ.ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದಹೊಸ ಜೀವ ಹೊಸ ಭಾವ ಹೊಸ ವೇಗದಿಂದೆಅಂಜದಿರು ಗೆಳೆಯಹೊಸಹಾದಿಯನುಹಿಡಿಯೆಮಂಜುತರಸೃಷ್ಟಿಗಾನದಲಿ ಮೈಮೆರೆಯೆಎಂಜಲಾಗದ ಮಧುರ ಮಧುರಸವ ಸವಿಯೆರಂಜಿಸುವ ಕಾಡುಮೇಡುಗಳನಂಡಲೆಯೆ (ಹೊಸಹಾದಿ)ಹೊಸ ಹಾದಿಯನ್ನು ಹಿಡಿಯಬೇಕೆಂಬ ಹಂಬಲವನ್ನು ವ್ಯಕ್ತಪಡಿಸುವ ಈ ಮಾತುಗಳು ಸಹ ಭಾವಾವೇಶದ ಮನೋಭಾವದ ನೆಲೆಯಿಂದಲೇ ಮೂಡಿಬಂದಿವೆ. ಅಡಿಗರ ಈ ಆವೇಶ ಉತ್ಸಾಹ ಕ್ರಮೇಣ ವ್ಯಾವಹಾರಿಕ ಜಗತ್ತಿನ ಆಕ್ರಮಣದಿಂದಾಗಿ ಆಘಾತಕ್ಕೊಳಗಾಗದಂತೆ ಕಂಡುಬರುತ್ತದೆ. ಬಾಲ್ಯದ ಮುಗ್ಧಲೋಕ, ಹದಿಹರಯದ ಹೊಂಗನಸಿನ ಜಗತ್ತು ಒಡೆದು ಛಿದ್ರವಾಗಿ ಕವಿಮನಸ್ಸು ವ್ಯಗ್ರವಾಗುತ್ತದೆ, ದಿಕ್ಕೆಡುತ್ತದೆ.ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯದುಲ್ಕೆಯಿದು ಥಟ್ಟನೆ ಪಳಂಚಲೆದೆಗೆಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತಸರದೊಳಾವುದೋ ಕಲ್ಲು ಬಿದ್ದ ಹಾಗೆಹಲವು ತಾನಗಳ ಸಂತಾನವಾದುದು ಮಧುರನೊಳಬಾಳು; ಹರಯದೊಡ್ದೋಲಗದಲಿತನೆಗೆಲ್ಲಿ ನೆಲೆ? ಬಾಳಹಾಡಿಗೆಲ್ಲಿಹುದು ಬೆಲೆ?ಎಂದು ಮುರುಟಿದನು ತನುಮನಗಳಲ್ಲಿ (ಒಳತೋಟಿ)ಅತ್ಯುತ್ಸಾಹ ಇಲ್ಲಿ ತಲ್ಲಣದ ದನಿಯಾಗುತ್ತದೆ. ಆವೇಶ ಹದಗೊಂಡು ನೋವು ಮನಸ್ಸನ್ನು ಆಕ್ರಮಿಸುತ್ತದೆ. ‘ತನ್ನನೆಲೆ’ಯನ್ನು ಹುಡುಕಿಕೊಳ್ಳುವ ತವಕದಲ್ಲಿ ಕವಿಮನಸ್ಸು ಅಸ್ವಸ್ಥಗೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ಸಹಜವಾಗಿ ತಂಪೆದೆಗೆ ಸಮಾಧಾನ ನೀಡಬಹುದಾದ ಪ್ರೀತಿ ಸ್ನೇಹಗಳಿಂದಲೂ ಕವಿ ವಂಚಿತರಾದಂತೆ ತೋರುತ್ತದೆ.ಕಂಡು ಮಾತನಾಡಿ ಮೈದಡವಿ ನಗಿಸಿ ನಲಿವರಿಲ್ಲಬೆಂದ ಬಗೆಗೆ ಸೊದೆಯನೆರೆದುಕಂಬನಿಯ ತೊಡೆವರಿಲ್ಲ (ಗಾಳಿಯೊಡನೆ)ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ:ಕಲ್ಲಾಗು ಕಲ್ಲಾಗು ಬಾಳ ಬಿರಿಗಾಳಿಯಲ್ಲಿಅಲ್ಲಾಡದೆಯೆ ನಿಲ್ಲು ಜೀವ (ಕಲ್ಲಾಗು ಕಲ್ಲಾಗು)ಹತಾಶೆಯ ಸ್ಥಿತಿಯಲ್ಲಿ ಕವಿ ಮನಸ್ಸು ನಿಷ್ಟುರವಾಗಲು ಪ್ರಯತ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ಹರಯದ ಮನಸ್ಸನ್ನು ಸಹಜವಾಗಿ ಸೆಳೆಯಬಹುದಾಗಿದ್ದ ಹೆಣ್ಣಿನ ಸ್ನೇಹ ಕವಿಗೆ ಕಪಟವೆನಿಸುತ್ತದೆ. ಕವಿ ಅನುಭವಿಸುವ ಈ ಹತಾಶ ಸ್ಥಿತಿ ಸ್ವಾನುಕಂಪೆಯಾಗಿ ಕರುಣಾಜನಕ ಸ್ಥಿತಿ ತಲುಪದೆ, ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಸಾಧನವಾಗಿ, ಏಕಾಗ್ರತೆಗೆ ಧ್ಯಾನಕ್ಕೆ ಹಿನ್ನೆಲೆಯಾಗಿ ನಿಲ್ಲುವಲ್ಲಿ ಅಡಿಗರ ಕಾವ್ಯದ ಸತ್ವವಿದೆ. ಈ ಹಂತದಲ್ಲಿ ಅಡಿಗರ ಕಾವ್ಯ ‘ಬಗೆಯೋಳಗನೇ ತೆರೆದು ನೋಡುವ’ ರೀತಿಯದಾಗುತ್ತದೆ.ಒಲವೆಯೆಂದು ನಲವೆಯೆಂದು ನಾವು ಹುಸಿಯ ಮುಸುಕನುತೊಡಿಸಿ ನಿಜಕೆ ಮೆರೆವೆವುಒಲವು ಸುಳ್ಳು ನಲವು ಜಳ್ಳು ನಮ್ಮ ನಾವೆ ವಂಚಿಸುವೆವು
ಇಲ್ಲದುದನೆ ಹೊರೆವೆವುನಾನೆ ನನ್ನ ನಲ್ಲ ನಲ್ಲೆ ಒಲುಮೆ ಸಂಭ್ರಮಉಳಿದುದೆಲ್ಲ ವಿಭ್ರಮ (ಬಿಡುಗಡೆಯ ಹಾಡು)ಎಂದು ಹೇಳುವಲ್ಲಿ ಕವಿ ಪ್ರೀತಿ-ಸ್ನೇಹಗಳ ಬದುಕನ್ನು ಭ್ರಮೆಯೆಂದು ಕರೆದು ಅದನ್ನು ನಿರಾಕರಿಸುತ್ತಾರೆ. ಅಷ್ಟೇ ಅಲ್ಲ ಇವುಗಳಿಂದೆಲ್ಲ ದೂರ ಹೋಗಲು ಬಯಸುತ್ತಾರೆ:
ಓಡಲೆಳಸುತಿಹುದು ಜೀವ ದೂರ ದೂರ ಜನವಿದೂರವಿಪಿನದೆಡೆಗೆ (ಓಡಲೆಳಸುತಿಹುದು)ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅಡಿಗರ ಕಾವ್ಯದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರೀತಿ, ಚೆಲುವು, ಒಲವುಗಳಿಗೆ ಜಡರೇನೂ ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮುಖ್ಯವಾಗಿ ಧ್ಯಾನರೂಪೀ ಮನಸ್ಸು. ಅವರದೇ ಮಾತಿನಲ್ಲಿ ಹೇಳುವುದಾದರೆ – ‘ಹುತ್ತಗಟ್ಟಿದ ಚಿತ್ತ’.ಅನ್ಯರೊಳು ಲೋಪದೋಷಗಳ ಬೆದಕಲು ಬೆದರಿ
ತನ್ನೆದೆಯನೇ ಗುಡಿಸಲನುವಾದನು (ಒಳತೋಟಿ)ಈ ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ-ಅಡಿಗರ ಕಾವ್ಯರೀತಿ. ಅವರ ಆರಂಭದ ಕವಿತೆಗಳನ್ನು ವೈಯಕ್ತಿಕ-ಸಾಮಾಜಿಕ ಕವಿತೆಗಳೆಂದು ಸರಳವಾಗಿ ವಿಭಾಗಿಸುವುದು ಸಾಧ್ಯ. ಆದರೆ ನಂತರದ ಕವಿತೆಗಳು ಈ ರೀತಿಯ ಸರಳ ವಿಂಗಡಣೆಗೆ ಸಿಕ್ಕದಂಥವು.ಮರೆತುಬಿಡಲೊ ಮಗುವೆ ನಿನ್ನ ಒಲವಿನಂಗಭಂಗವತೆರೆಯೋ ಅಂತರಂಗವಅಲ್ಲಿ ಹುಡುಕು ಕಳಚಿಬಿದ್ದ ನಿನ್ನ ಜೀವರತ್ನವತನ್ನತನದ ಸತ್ವವ
ಸಿಕ್ಕಿರಬಹುದು, ಸಿಕ್ಕದಿದ್ದರೇನು? ಹುಡುಕಾಟವೇಅದರ ದಿವ್ಯಪಾರವೇಎದೆಗೆ ಬಲವ ಮಾತೆಗೆ ಧೃತಿಯ ಬಾಳಿಗೊಂದು ಶಾಂತಿಯನೀಡಬಹುದು ಕಾಂತಿಯ (ಬಿಡುಗಡೆಯ ಹಾಡು)ಬಗೆ ತೆರೆದು ನೋಡುವ, ತನ್ನತನದ ಸತ್ವವನ್ನು ಕಂಡುಕೊಳ್ಳುವ ಮನೋಭಾವ ಮೊದಲ ಕವಿತೆ ‘ನನ್ನ ನುಡಿ’ಯಲ್ಲಿಯೇ ಪ್ರಕಟವಾಗಿದ್ದರೂ, ಇಲ್ಲಿ ಅದು ಹರಳುಗಟ್ಟುತ್ತದೆ. ಕವಿಗೆ ಇಲ್ಲಿ ಗುರಿಯ ಜೊತೆಗೆ ಪ್ರಕ್ರಿಯೆಯೂ ಮುಖ್ಯ. ಗುರಿಯತ್ತ ಸಾಗುವುದೇ, ಆ ಹುಡುಕಾಟವೇ ಅರ್ಥಪೂರ್ಣವಾದುದೆಂದು ಕವಿ ನಂಬುತ್ತಾರೆ. ಅಡಿಗರ ಮುಂದಿನ ಕಾವ್ಯವೆಲ್ಲ ಆ ‘ಹುಡುಕಾಟವೇ’ ಆಗಿದೆ. ಹೀಗಾಗಿ ಅವರ ಕಾವ್ಯದಲ್ಲಿ ವೈವಿಧ್ಯ ವಿಸ್ತಾರ ಇಲ್ಲದಂತಾಯಿತು. ಆದರೆ ಆಳ ಲಭ್ಯವಾಯಿತು. ಈ ಹಂತದಲ್ಲಿ ಅವರ ಅಂತರಂಗದಲ್ಲಿ ಒಂದು ಬಗೆಯ ಕ್ರಾಂತಿ ನಡೆದು ಅವರ ಕಾವ್ಯ ಸಂಪೂರ್ಣವಾಗಿ ಹೊಸ ರೂಪ ತಾಳಿತು. ಈ ಹಂತದ ಅವರ ಕಾವ್ಯಕಲ್ಪನೆಯನ್ನು ಅಡಿಗರೇ ಹೀಗೆ ವಿವರಿಸಿದ್ದಾರೆ.
೧ ಮೇಲ್ಪದರುಗಳನ್ನಷ್ಟೇ ಒಳಗೊಳ್ಳುವ ಹಾಗೆ ಕಾವ್ಯರಚನೆಯಾದರೆ ಉತ್ತಮ ಕಾವ್ಯ ಸಿದ್ಧಿಸುವುದಿಲ್ಲ. ಪ್ರಜ್ಞೆಯ ಜೊತೆಗೆ ಪ್ರಜ್ಞೆಯ ತಳದಲ್ಲಿ ಅಥವಾ ಅದರ ಮೇಲಕ್ಕೆ ಇರುವ ಎಲ್ಲ ಒಳ ಅಂಶಗಳೂ ಹಠಾತ್ತಾಗಿ ಸೇರಿದರೆ ಉತ್ತಮ ಕಾವ್ಯ ಆಗುತ್ತದೆ. ಇದಕ್ಕೆ ನಿರಂತರ ಶ್ರಮ ಹೇಗೋ ಹಾಗೇ ಅಸಾಧಾರಣವಾದ ತಾಳ್ಮೆಯೂ ತಕ್ಕ ಮುಹೂರ್ತಕ್ಕಾಗಿ ಕಾಯುವುದೂ ಅಗತ್ಯ.೨. ಸಾಧಿಸಬೇಕಾದದ್ದು ಇತರರಿಗೆ ಮನೋರಂಜಕವಾಗುವ ಅಭಿವ್ಯಕ್ತಿಯನ್ನಲ್ಲ. ತನಗೆ ಅತ್ಯಂತ ಸಹಜವಾದುದನ್ನು, ಆಡುವ ಮಾತು ಅಂತರನುಭವಾದ ತದ್ರೂಪು ಆಗುವ ಹಾಗೇ, ಕವಿಯ ವ್ಯಕ್ತಿ ವಿಶೇಷವನ್ನು ತೆರೆಯುವ ಹಾಗೆ.ಈ ಹಿನ್ನೆಲೆಯಲ್ಲಿ ಕವಿ ವ್ಯಕ್ತಿತ್ವದ ಒಳಹೊರಗುಗಳನ್ನು ಒಂದೇ ಬಿಂದುವಿನಲ್ಲಿ ಹಿಡಿಯುವ ಪ್ರಯತ್ನಕ್ಕೆ ತೊಡಗುತ್ತಾರೆ.ಅಡಿಗರ ಕಾವ್ಯದುದ್ದಕ್ಕೂ ಕಂಡುಬರುವ ಪ್ರಧಾನ ಅಂಶಗಳಲ್ಲೊಂದು ಭೂಮಿ ಆಕಾಶಗಳ ಸೆಳೆತಕ್ಕೆ ಸಿಕ್ಕ ಮಾನವನ ಸ್ಥಿತಿ. ಇದು ದೇಹ-ಮನಸ್ಸುಗಳ ಸಂಘರ್ಷವೂ ಹೌದು; ಆದರ್ಶ ವಾಸ್ತವಗಳ ನಡುವಿನ ತಿಕ್ಕಾಟವೂ ಹೌದು. “ಇಲ್ಲಿ ಭೂಮಿಯೆಂದರೆ ಪೃಥ್ವಿ ಎಂದಷ್ಟೇ ತಿಳಿಯಬಾರದು. ಇಹ ಇಲ್ಲಿಯದು, ಈ ನಾಗರೀಕತೆ, ಈ ನಾಗರೀಕತೆಯ ಎಲ್ಲ ವಿಪರ್ಯಾಸಗಳನ್ನೂ ಒಳಗೊಂಡದ್ದು ಎಂದು ತಿಳಿಯಬೇಕು.”
ಎತ್ತರೆತ್ತರಕ್ಕೆ ಏರುವ ಮನಕೂಕೆಸರ ಲೇಪ ಲೇಪಕೊಳೆಯ ಕೊಳಚೆಯಲ್ಲಿ ಮುಳುಗಿ ಕಂಡನೋಬಾನಿಗೊಂದು ಪೆಂಪ (ಇದು ಬಾಳು)ಆದರ್ಶ ಸಾಧನೆಯ ಧ್ರುವತಾರೆಯೊಂದು ಬಾನಂಗಳದಿ ನಿಂತು ಕೈಮಾಡಿ ಕರೆಯುತಿಹುದುವಿಷಯ ಸುಖದಾಸೆ ಕಾರ್ಮುಗಿಲಾಗಿ ಹಗೆಯಾಗಿ
ದೃಷ್ಟಿಯನು ನೆಲದೆಡೆಗೆ ದೂಡುತಿಹುದು (ಒಳತೋಟಿ)ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ವ್ಯಕ್ತವಾಗುವ ಈ ಸಂಘರ್ಷ, ನೆಲಮುಗಿಲಿನ ಸೆಳೆತ ಸೇಂದ್ರಿಯವಾಗಿ ಅಭಿವ್ಯಕ್ತಿ ಪಡೆಯುವುದು ‘ಮೋಹನ ಮುರಲಿ’ ಕವಿತೆಯಲ್ಲಿ. ಅಡಿಗರ ಕಾವ್ಯ ಬೆಳವಣೆಗೆಯಲ್ಲಿ ಇದು ಮುಖ್ಯ ಕವಿತೆ. ಲೌಕಿಕ ಸುಖದಲ್ಲಿ ತೃಪ್ತಿ ಪಡೆದಿದ್ದ ಮನಸ್ಸು ಅಲೌಕಿಕದ ಸೆಳೆತಕ್ಕೆ ಒಳಗಾಗಿರುವ ಚಿತ್ರವನ್ನು ಈ ಕವಿತೆ ಸೊಗಸಾಗಿ ಚಿತ್ರಿಸುತ್ತದೆ. ಇದಿಷ್ಟೇ ಕವಿತೆಯ ಆಶಯವಾಗಿದ್ದರೆ ‘ಮೋಹನ ಮುರಲಿ’ ಮಹತ್ವದ್ದಾಗುತ್ತಿರಲಿಲ್ಲ.ಇರುವುದೆಲ್ಲವ ಬಿಟ್ಟು ಇರದುರೆಡೆಗೆ ತುಡಿವುದೆ ಜೀವನ
(ಮೋಹನ ಮುರಲಿ)ಅಲೌಕಿಕ ಹಂಬಲದ ಉತ್ಕಟ ಕ್ಷಣದಲ್ಲಿಯೇ ಕವಿಗೆ ಈ ಪ್ರಶ್ನೆಯೂ ಮೂಡುತ್ತದೆ. ಇಹದ ಬಿಡುಗಡೆಯ ಸುಖದ ಹಂಬಲವನ್ನು ತೀವ್ರವಾಗಿ ಚಿತ್ರಿಸುವಂತೆಯೇ ಇಲ್ಲಿಯ ‘ಬಂಧನ’ದ ಪ್ರಿಯ ಅನುಭವವನ್ನೂ ಕವಿತೆ ದಟ್ಟವಾಗಿ ಚಿತ್ರಿಸುತ್ತದೆ. ಇವೆರಡರ ಸಂಘರ್ಷದಲ್ಲಿ ಕವಿತೆ ಪ್ರಾಮಾಣಿಕವೂ, ಶೋಧಕವೂ ಆಗುತ್ತದೆ.ಮುಗಿಲಿನ ಹಂಬಲ ಸಹಜ ನಿಜ. ಈ ಹಂಬಲ ಬದುಕಿನಾಚೆ ಫಲಿಸುವಂಥದಲ್ಲ; ಈ ಬದುಕಿನಲ್ಲೇ ಆವಿಷ್ಕಾರವಾಗಬೇಕಾದುದು-ಇದು ಅಡಿಗರ ನಿಲುವು.ಮರ್ತ್ಯಜೀವದ ತರುವೊಳುಮರತೆಯ ಫಲ ತನಗೆಸಿಕ್ಕಬೇಕೆಂದವನು ಭಾವಿಸಿದನು (ಒಳತೋಟಿ)
ಮರ್ತ್ಯದಲ್ಲಿಯೇ ಅಮರತೆಯ ಫಲಿಸಬೇಕೆಂಬುದು ಅಡಿಗರ ಕಾವ್ಯದರ್ಶನ. ಆದ್ದರಿಂದಲೇ ಕವಿ ಬಾನಿನೂರಿನಲ್ಲಿ ನೆಲಸಿರುವ ಒಕ್ಕಲನು ಈ ನೆಲಕ್ಕೆ ಆಹ್ವಾಸಿಸುತ್ತಾರೆ (ಅತಿಥಿಗಳು). ಕ್ಷಣ ಬಂದು ಮಿಂಚಿ ಮರೆಯಾಗುವ ಅನೂಹ್ಯ ಅತಿಥಿಗಳನ್ನು ಇಲ್ಲೇ ನೆಲೆನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಈ ಮಣ್ಣಿನ ಮನದಲ್ಲಿ ಹೊನ್ನನ್ನು ಬೆಳೆಯಬಲ್ಲಂಥ ಅಪೂರ್ವ ತೇಜದ ಮಾಂತ್ರಿಕರನ್ನು ಕವಿ ಆಹ್ವಾನಿಸುತ್ತಾರೆ.ಅಡಿಗರ ಈ ಶೋಧನೆ – ಮರ್ತ್ಯದಲ್ಲಿಯೇ ಅಮರತೆಯ ಫಲ ಸಾಧಿಸುವ ಶೋಧನೆ-ಉದ್ದಕ್ಕೂ ಆತ್ಮಶೋಧನೆಯಾಗಿಯೇ ಬೆಳೆಯುತ್ತ ಹೋಗುತ್ತದೆ. ಈ ನೆಲದಲ್ಲಿಯೇ ಹುಟ್ಟಿದ ರಾಮ, ಕೃಷ್ಣ, ಬುದ್ಧ, ಗಾಂಧಿ ದೊಡ್ಡವರಾದರು, ಮಹಾತ್ಮರಾದರು. ನಾನು ಮಾತ್ರ ಹಾಗೆಯೇ ಉಳಿದೆನೇಕೆ?ನಾನು ಅವನು ಒಂದೆ ಲೋಹಕಬ್ಬಿಣ-ಕರಿ ಕಬ್ಬಿಣಯಾವ ರಸವು ಸೋಂಕಿತವನ?ಯಾವ ಬೆಂಕಿ ತಾಕಿತವನ?ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ (ನನ್ನ ಅವತಾರ)ಕಬ್ಬಿಣ್ಣ ಚಿನ್ನವಾಗಿ ರೂಪುಗೊಂಡ ಬಗೆ ವ್ಯಕ್ತಿತ್ವ ಮಾಗಬೇಕಾದ ರೀತಿಯನ್ನು ಹೇಳುತ್ತದೆ. ಇದು ಹೇಗೆ ಸಾಧ್ಯ? ಯಾವ ಸಿದ್ಧ ಮಾರ್ಗದರ್ಶನವೂ ಈತನ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಈತನನ್ನು ಕರೆದುಕೊಂಡು ಹೋಗಬೇಕಾಗಿದ್ದ ರೈಲು ಈತ ಕಾಯುತ್ತಿದ್ದ ನಿಲ್ದಾಣಕ್ಕೆ ಬರುವುದೇ ಇಲ್ಲ. (ಹಿಮಗಿರಿಯ ಕಂದರ) ನಿಲ್ದಾಣಕ್ಕೂ, ರೈಲಿಗೂ ನಡುವೆ ಬಿರುಕು ಬಿಟ್ಟಿದೆ. ಇಂದ್ರಿಯ ಜೀವನಕ್ಕೂ, ಅಲೌಕಿಕದ ಆಕರ್ಷಣೆಗೂ ನಡುವೆ ಬಿರುಕು ಉಂಟಾದ ಸ್ಥಿತಿಯಲ್ಲಿ ಅವನಿಗನ್ನಿಸುತ್ತದೆ –
ಇವಳೆದೆಗೆ ಬೇರಿಳಿದ ಕಾಲು ನನ್ನದುಬರಿದೆ ನಕ್ಷತ್ರ ಲೋಕಕ್ಕೂ ರೈಲುಬಿಟ್ಟೆ (ಭೂಮಿಗೀತ)ಹಿಡಿದ ಗುರಿ ಸಾಧಿಸಬೇಕೆಂಬ ಹಟದಲ್ಲಿ ಕವಿ ಮನಸ್ಸು ಮತ್ತೆ ಮತ್ತೆ ಜಿಜ್ಞಾಸೆಗೊಳಗಾಗುತ್ತದೆ. ತನ್ನ ಇಡೀ ವ್ಯಕ್ತಿತ್ವವನ್ನು ಪಣಕ್ಕೊಡಿ ಕವಿ ಶೋಧನೆಗೆ ತೊಡಗುತ್ತಾರೆ. ಗುರಿ ಸಾಧಿಸಬೇಕಾದರೆ ತನ್ನ ಒಟ್ಟು ವ್ಯಕ್ತಿತ್ವದಲ್ಲೇ, ಒಟ್ಟು ಜೀವನದಲ್ಲೇ ಸಾರ್ಥಕ ಮಾರ್ಪಾಟಾಗಬೇಕು ಎಂಬ ಅರಿವು ಮೂಡುತ್ತದೆ. ಅದಕ್ಕಾಗಿ ಕವಿ ಪ್ರಾರ್ಥಿಸುತ್ತಾರೆ:ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನುಹೊತ್ತಿನ ಮುಖಕ್ಕೆ ಶಿಖೆ ಹಿಡಿವುದನ್ನು, ಹಾಗೇಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನೂಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದುಬರಲಿ ಪರಿಪೂರ್ಣಾವತಾರಿ ವಿನತ ಪುತ್ರ (ಪ್ರಾರ್ಥನೆ)ವಿನತೆಯ ಅವಸರದಲ್ಲಿ ತೊಡೆ ಹೊರೆಯದೆ ಹುಟ್ಟಿದ ಅರ್ಧಾವತಾರಿ ಅರುಣನಂತಾಗದೆ ಪರಿಪೂರ್ಣಾವತಾರಿ ಗರುಡನಂತಾಗಬೇಕೆಂದು ಕವಿಯ ಪ್ರಾರ್ಥನೆ. ಈ ವಿವೇಕದ ಪ್ರಾರ್ಥನೆ ಜೀವನತತ್ವವೂ ಹೌದು; ಕಾವ್ಯ ದರ್ಶನವೂ ಹೌದು.ಈ ಪ್ರಾರ್ಥನೆ ಸಾಕಾರವಾಗಲು, ಬದುಕನ್ನು ನಿಜವಾಗಲು – ಪರಂಪರೆಯ ಸತ್ವವನ್ನೂ, ಅಂತಃಶಕ್ತಿಯನ್ನೂ, ಕನಸು-ವಾಸ್ತವಗಳ ಹಠಾತ್ ಸಂಯೋಗವನ್ನೂ ವರ್ತಮಾನದಲ್ಲಿ ಸಾರ್ಥಕಪಡಿಸಿಕೊಳ್ಳಬೇಕಾದ ಅಗತ್ಯವನ್ನು ಕವಿ ಮನಗಾಣುತ್ತಾರೆ.ಅಗೆವಾಗ್ಗೆ ಮೊದಲ ಕೋಶಾವಸ್ಥೆ ಮಣ್ಣುಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆಕಂಡೀತು ಗೆರೆಮಿರಿವ ಚಿನ್ನದದಿರುಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳಇನ್ನಾದರೂ ಕೊಂಚ ಕಲಿಯಬೇಕುಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾವಿಗ್ರಹಕ್ಕೊಗಿಸುವ ಅಸಲು ಕಸಬು (ಭೂತ)
“ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸ ಕಾಲದ, ಹೊಸ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿನ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ”ಹೀಗೆ ತನ್ನ ಇಷ್ಟದೇವತಾ ವಿಗ್ರಹವನ್ನು ರೂಪಿಸಿಕೊಳ್ಳಲು ಸಹಜವಾಗಿಯೇ ವಿಶೇಷ ಸಾಮರ್ಥ್ಯಬೇಕು, ಶ್ರದ್ಧೆಬೇಕು, ಸಂಕಲ್ಪಬಲ ಬೇಕು. ಸಕಲ್ಪಬಲದಿಂದ ಮಾತ್ರ ವ್ಯಕ್ತಿ ಔನ್ನತ್ಯವನ್ನು ಸಾಧಿಸುವುದು ಸಾಧ್ಯ. ಸಾಮಾನ್ಯವಾಗಿ ಹುಟ್ಟಿದ ರಾಮ ಈ ನೆಲದ ಪ್ರಜ್ಞೆಯನ್ನು ಹೀರಿನಿಂತು ಸಂಕಲ್ಪಬಲದಿಂದ ಉನ್ನತ ಚೇತನವಾಗಿ ಬೆಳೆದುನಿಂತ; ಅಂತರಂಗ ಪರಿವೀಕ್ಷಣೆಯ ಅಗ್ನಿದಿವ್ಯದಲ್ಲಿ ತನ್ನನ್ನು ತಾನು ಕಂಡುಕೊಂಡು ಪುರುಷೋತ್ತಮನಾದ.ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನುಪುರುಷೋತ್ತಮನ ಆ ಅಂಥ ರೂಪರೇಷೆ (ಶ್ರೀರಾಮನವಮಿಯ ದಿವಸ)ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾಗಿ ಬೆಳೆದ ರಾಮನ ಬದುಕಿನಲ್ಲಿ, ಆತನ ವ್ಯಕ್ತಿತ್ವ ವಿಕಾಸ ಕ್ರಮದಲ್ಲಿ ಅಡಿಗರಿಗೆ ಆಸಕ್ತಿ; ಕಪಿಚೇಷ್ಟೆಯ ವ್ಯಕ್ತಿ ತನ್ನಲ್ಲೇ ಹತ್ತಿ ಉರಿದು ಹನುಮನ ಚೇತನವನ್ನು ಒಳಗೊಳ್ಳುವುದು ಸಾಧ್ಯವೆಂದು ಅವರ ನಂಬುಗೆ (ವರ್ಧಮಾನ) . ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸವಾಗಬೇಕು. ಉನ್ನತ ಚೇತನವಾಗಿ ರೂಪುಗೊಳ್ಳಬೇಕು – ಇದೇ ಅಡಿಗರ ದರ್ಶನ.
“ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗುವುದಿದ್ದರೂ ಅದು ವ್ಯಕ್ತಿಯಲ್ಲಿ. ಈ ಬಂಡಾಯದ ಕಲ್ಪನೆ ಕೂಡ ವಿಶಿಷ್ಟವಾದದ್ದು. ಸೃಷ್ಟಿಯಲ್ಲಿನ ಪ್ರತಿಯೊಂದು ಚೇತನವೂ ಬೆಲೆಯುಳ್ಳದ್ದು, ಮುಂದೆ ವಿಕಾಸಗೊಂಡು ಪರಿಪೂರ್ಣಾವಸ್ಥೆಗೆ ಸಲ್ಲಬಹುದು ಸ್ವವಿಶಿಷ್ಟವಾದ ಶೀಲದ್ರವ್ಯವೇನನ್ನೋ ಪಡೆದು ಬಂದಿರುವಂಥದ್ದು. ಅದನ್ನು ಕಂಡುಕೊಳ್ಳುವುದೇ, ಬೆಳೆಸಿಕೊಳ್ಳುವುದೇ, ಫಲಾವಸ್ಥೆಗೆ ಮುಟ್ಟಿಸುವುದೇ ಬದುಕಿನ ಗುರಿ. ಅದೇ ನಿಜವಾದ ಸ್ವಸ್ವರೂಪ ದರ್ಶನ, ಆತ್ಮ ಸಾಕ್ಷಾತ್ಕಾರ.”“ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ಮಂದೆ ಜೊತೆ-ಕ್ರಾಂತಿ ಮಾಡುವುದು ನಿರರ್ಥಕವಷ್ಟೇ ಅಲ್ಲ, ಅದು ಬೇಕು – ಬೇಡಗಳನ್ನು ದಾಟಿ, ದಬ್ಬಾಳಿಕೆಯಲ್ಲಿ, ಪೀಡಕ ರಾಜ್ಯದಲ್ಲಿ ಕೊನೆಯಾಗುತ್ತದೆ. ಈ ಸತ್ಯ ನಮಗೆ ಕಾಣುವ ಹಾಗೆ, ಸ್ಪರ್ಶದ ಅನುಭವಕ್ಕೆ ಬರುವ ರೀತಿಯಲ್ಲಿ ಅಡಿಗರ ರೂಪಕಗಳಲ್ಲಿ ಅವತರಿಸುತ್ತದೆ. ನಿಜವಾದ ಪ್ರಜಾರಾಜ್ಯದಲ್ಲಿ ಪ್ರತಿಯೊಬ್ಬನಿಗೂ ತನಗೆ ಸಿಕ್ಕ ಸಿಂಹಾಸನವಿದೆ. ಅದನ್ನು ದೊರಕಿಸಿಕೊಳ್ಳಬೇಕು, ದಂಗೆ ಮಾಡಿ, ಚಿನ್ನ, ಮಣ್ಣು ಮರದ್ದಾಗಬಹುದು ಸಿಂಹಾಸನ – ಡೆಮಾಕ್ರಸಿಯಲ್ಲಿ ಪ್ರತಿ ಪ್ರಜೆಯೂ ರಾಜ. ಈ ಅರ್ಥವನ್ನು ಅಡಿಗರು ಎಷ್ಟು ಸೊಗಸಾಗಿ ಚಿತ್ರಿಸುತ್ತಾರೆ.”ದಂಗೆಯೇಳಬೇಕಾಗುತ್ತಲೇ ಇರುತ್ತದೆ
ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ (ಬಂಡಾಯ)ವ್ಯಕ್ತಿತ್ವದ ಸಿದ್ಧಿ ಸಿದ್ಧಿಸುವವರೆಗೆ ಈ ಬಂಡಾಯ ನಿರಂತರ, ಹೋರಾಟ ಅನಿವಾರ್ಯ.ಅಂತರಂಗದ ಶೋಧನೆಯಂತೆಯೇ ಬಹಿರಂಗದ ತಿಳುವಳಿಕೆಯೂ ವ್ಯಕ್ತಿತ್ವ ವಿಕಾಸದ ಮುಖ್ಯ ಆಯಾಮ. ‘ಪರಿಪೂರ್ಣತೆ’ ಒಳಹೊರಗು’ಗಳ ಸಂಯೋಗದಲ್ಲಿ. ಈ ವೈಯಕ್ತಿಕ – ಸಾಮಾಜಿಕ ಏಕತ್ರ ಬಿಂದುವಿನ ಮತ್ತೊಂದು ಮಜಲು – ‘ಚಿಂತಾಮಣಿಯಲ್ಲಿ ಕಂಡ ಮುಖ’. ‘ಕೂಪ ಮಂಡೂಕ’ದಲ್ಲಿ ತನ್ನೊಳಗಿನ ಚೇತನವನ್ನು ಗೆಳೆಯನೆಂದು ಕರೆದ ಅಡಿಗರು ಅದೇ ಚೇತನವನ್ನು ಇಲ್ಲಿ ಸಭೆಯ ಮಧ್ಯೆ ಸಾಮಾಜಿಕವಾಗಿ ಗುರುತಿಸುತ್ತಾರೆ. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು.ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ ‘ವ್ಯಕ್ತಿತ್ವ ವಿಕಾಸದ ಹೋರಾಟ’ವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ.ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್ ಪ್ರಶಸ್ತಿ, ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಮಾಲಯದ ಮೇಲೆ ದಕ್ಷಿಣ ಧ್ರುವಕ್ಕೆ ಸವಾರಿ ಮಾಡಿದ ವ್ಯಕ್ತಿ!

Fri Feb 18 , 2022
ನೀವು ರಾಯಲ್ ಎನ್‌ಫೀಲ್ಡ್ ಆಗಿದ್ದಾಗ ವಿಷಯಗಳು ಅಷ್ಟು ಸುಲಭವಲ್ಲ. ಹಿಮಾಲಯಕ್ಕೆ ಬಂದಾಗ ಅವರು ಪ್ರವರ್ತಕರಾಗಿದ್ದಾರೆ ಮತ್ತು ಅದರ ಹೆಸರಿನ ಮೋಟಾರ್ಸೈಕಲ್ ಅನ್ನು ಸಹ ಹೊಂದಿದ್ದಾರೆ. ಆದ್ದರಿಂದ ಹೊಸ ಅಡೆತಡೆಗಳನ್ನು ಮುರಿಯಲು, ರಾಯಲ್ ಎನ್‌ಫೀಲ್ಡ್ ಸ್ವಲ್ಪ ಮಾರ್ಪಡಿಸಿದ ಹಿಮಾಲಯದಲ್ಲಿ ಇಬ್ಬರು ಸವಾರರೊಂದಿಗೆ ದಕ್ಷಿಣ ಧ್ರುವಕ್ಕೆ ಹೋಗಲು ನಿರ್ಧರಿಸಿತು, ಮತ್ತು ಅವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದರು! ಈ ಅದ್ಭುತ ರೈಡ್‌ನಿಂದ ಇಬ್ಬರು ರೈಡರ್‌ಗಳಲ್ಲಿ ಒಬ್ಬರೊಂದಿಗೆ ನಾವು ಬ್ರಾಂಡ್‌ನೊಂದಿಗೆ ಸಂಪರ್ಕ ಹೊಂದಿದ್ದೇವೆ: ಸಂತೋಷ್ ವಿಜಯ್ […]

Advertisement

Wordpress Social Share Plugin powered by Ultimatelysocial