ಚಾಮರಾಜನಗರ, ಮಾರ್ಚ್ 4: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯಲ್ಲಿ ಶುಕ್ರವಾರ ಭಾರಿ ದುರಂತವೊಂದು ನಡೆದಿದೆ. ಬಿಳಿ ಕಲ್ಲು ಕ್ವಾರೆಯಲ್ಲಿ ಗುಡ್ಡ ಕುಸಿತದಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಗಣಿಗಾರಿಕೆಯ ಕೆಲಸ ಜಾರಿಯಲ್ಲಿದ್ದ ಸಂದರ್ಭದಲ್ಲಿ ಗುಡ್ಡದ ಒಂದು ಭಾಗದ ಕಲ್ಲುಬಂಡೆಗಳು ಕುಸಿದು ಕೆಳಗಿನ ತಗ್ಗುಪ್ರದೇಶದಲ್ಲಿ ನಿಂತಿದ್ದ ಟಿಪ್ಪರ್ ಮೇಲು ಬಿದ್ದಿವೆ.
ಈ ಘಟನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಬಗ್ಗೆ ಶಂಕಿಸಲಾಗಿದೆ.
ಗುಡ್ಡ ಕುಸಿತದಿಂದ ಸ್ಥಳದಲ್ಲಿದ್ದ ಕಂಪ್ರೆಸರ್ ಪೂರ್ಣವಾಗಿ ಮಣ್ಣಿನಡಿ ಸಿಲುಕಿದ್ದು, ಐದು ಟಿಪ್ಪರ್ ಹಾಗೂ ಮೂರು ಹಿಟಾಚಿ ವಾಹನಗಳಿಗೆ ಹಾನಿಯಾಗಿದೆ. ಇನ್ನು, ಘಟನೆಯಲ್ಲಿ ಗಾಯಗೊಂಡ ಏಳು ಮಂದಿ ಪೈಕಿ ನಾಲ್ವರಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಟಿಪ್ಪರ್ ಚಾಲಕನ ರಕ್ಷಣೆಗೆ 3 ಗಂಟೆ ಕಾರ್ಯಾಚರಣೆ:
ಶುಕ್ರವಾರ ಬೆಳಗ್ಗೆ 11.30ರ ಹೊತ್ತಿಗೆ ಗುಡ್ಡ ಕುಸಿತ ಪ್ರಾರಂಭವಾಗಿದ್ದು, ತಕ್ಷಣ ಎಚ್ಚೆತ್ತುಕೊಂಡ ಆರು ಮಂದಿ ಕಾರ್ಮಿಕರು ಸ್ಥಳದಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಟಿಪ್ಪರ್ ವಾಹನದಲ್ಲೇ ಸಿಲುಕಿದ್ದ ನೂರುದ್ದೀನ್ ಎಂಬುವವರನ್ನು ಮೂರು ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ಕಾರ್ಮಿಕರು ನಾಪತ್ತೆ:
ಗುಡ್ಡ ಕುಸಿತದ ದುರಂತ ನಡೆದ ಬಳಿಕ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ಇದುವರೆಗೂ ಮೂವರ ರಕ್ಷಣೆ ಮಾಡಲಾಗಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಫ್ರಾನ್ಸಿಸ್ ಹಾಗೂ ಅಸ್ರಫ್ ಹಾಗೂ ನೂರುದ್ದೀನ್ ರಕ್ಷಣೆ ಮಾಡಲಾಗಿದ್ದು ಎಲ್ಲರೂ ಮಹಾರಾಷ್ಟ್ರ ಮೂಲದವರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್ಪಿ ಸುಂದರರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada