ವಿಧಾನಸಭೆ ಚುನಾವಣೆ 2023 ಕ್ಕೆ ಕಾಂಗ್ರೆಸ್ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಜನವರಿ ಮೊದಲ ವಾರದಲ್ಲಿ ಬಸ್ ಯಾತ್ರೆ ಹಮ್ಮಿಕೊಂಡಿದೆ. ಒಟ್ಟು 20 ಜಿಲ್ಲೆಗಳ 150 ಕ್ಷೇತ್ರಗಳಲ್ಲಿ ಆರಂಭಿಕ ಹಂತವಾಗಿ ಬಸ್ ಯಾತ್ರೆ ನಡೆಯಲಿದ್ದು, ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಯಾಗಿ ಬಸ್ ಯಾತ್ರೆ ಕೈಗೊಳ್ಳುತ್ತಾರಾ? ಅಥವಾ ಪ್ರತ್ಯೇಕವಾಗಿ ಕೈಗೊಳ್ಳುತ್ತಾರಾ ಎಂಬುವುದರ ಬಗ್ಗೆ ಇನ್ನೂ ಗೊಂದಲಗಳು ಮುಂದುವರಿದಿವೆ.ದೆಹಲಿ ಸಭೆಗೂ ಮೊದಲು ಎರಡು ತಂಡವಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಡಿಕೆಶಿ ಬಸ್ ಯಾತ್ರೆ ಕೈಗೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಸಿದ್ದರಾಮಯ್ಯ ಬಣಕ್ಕೂ ಪ್ರತ್ಯೇಕ ಬಸ್ ಯಾತ್ರೆ ಕೈಗೊಳ್ಳಬೇಕು ಎಂಬ ಇಚ್ಛೆ ಇದೆ. ಈ ಮೂಲಕ ತಮ್ಮ ವೈಯಕ್ತಿಕ ಶಕ್ತಿ ಪ್ರದರ್ಶನವೂ ಆಗಲಿದೆ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ. ಆದರೆ ಹೈಕಮಾಂಡ್ ಇದಕ್ಕೆ ಅವಕಾಶ ನೀಡಿಲ್ಲ. ಪ್ರತ್ಯೇಕ ಬಸ್ ಯಾತ್ರೆ ಬದಲಾಗಿ ಒಗ್ಗಟ್ಟಾಗಿ ಬಸ್ ಯಾತ್ರೆ ಕೈಗೊಳ್ಳುವಂತೆ ಸೂಚನೆ ನೀಡಿದೆ. ದೆಹಲಿಯಲ್ಲಿ ನಡೆದಿದ್ದ ಪ್ರಮುಖ ನಾಯಕರ ಸಭೆಯಲ್ಲಿ ಹೈಕಮಾಂಡ್ ಈ ಸೂಚನೆಯನ್ನು ನೀಡಿದೆ.ಹೈಕಮಾಂಡ್ ಸೂಚಿಸಿದರೂ ಒಗ್ಗಟ್ಟಾಗಿ ಬಸ್ ಯಾತ್ರೆ ಕೈಗೊಳ್ಳುವುದಕ್ಕೆ ಸಿದ್ದು ಬಣ ಪೂರ್ಣ ಮನಸ್ಸಿನಲ್ಲಿ ಒಪ್ಪಿಗೆ ಸೂಚಿಸಿದ್ದಂತಿಲ್ಲ. ಪರಿಣಾಮ ಸಾಕಷ್ಟು ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಬಸ್ ಯಾತ್ರೆಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಹಾಗಿದ್ದರೂ ಮೊದಲ ಹಂತದಲ್ಲಿ ಇಬ್ಬರು ಮುಖಂಡರೂ ಒಗ್ಗಟ್ಟಾಗಿ ಬಸ್ ಯಾತ್ರೆ ಕೈಗೊಳ್ಳಬೇಕಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada