ಮೈಸೂರು, ಫೆಬ್ರವರಿ 19: ಮೈಸೂರಿನ ಕಾಲೇಜೊಂದರಲ್ಲಿ ಹಿಜಾಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರಿಗೆ ಆನ್ಲೈನ್ನಲ್ಲಿ ತರಗತಿ ನಡೆಸಲು ಡಿಡಿಪಿಐ ಶ್ರೀನಿವಾಸಮೂರ್ತಿ ಸೂಚನೆ ನೀಡಿದ್ದಾರೆ.
ಮೈಸೂರಿನ ರಾಜೀವ್ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 293 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇದರಲ್ಲಿ 291 ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಿಂದೂ ಧರ್ಮಕ್ಕೆ ಸೇರಿದ್ದಾರೆ.
ಹಿಜಾಬ್ ಗಲಾಟೆ ಆರಂಭವಾದ ಬಳಿಕ ಹಿಂದೂ ಧರ್ಮದ ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿಲ್ಲ. ಫೆ.16ರಿಂದ ಕಾಲೇಜು ಪುನರಾರಂಭ ಆದ ಮೇಲೆ ಕೇವಲ 14 ವಿದ್ಯಾರ್ಥಿನಿಯರಷ್ಟೇ ತರಗತಿಗೆ ಹಿಜಾಬ್ ಹಾಕಿಕೊಂಡೆ ಬಂದರು. ಶಿಕ್ಷಕರು ತೆಗೆಯಲು ಹೇಳಿದರೂ ನಿರಾಕರಿಸಿದರು. ಆ ದಿನ ತರಗತಿಗೆ ಹಾಜರಾಗದೆ ವಾಪಸ್ ತೆರಳಿದರು.
ಮರುದಿನ ಕಾಲೇಜಿನ ಪ್ರಾಂಶುಪಾಲರಾದ ಡಿ.ಧನ್ವಂತರಿ ಹಾಗೂ ಡಿಡಿಪಿಐ ಶ್ರೀನಿವಾಸಮೂರ್ತಿ ಪೋಷಕರ ಸಭೆ ನಡೆಸಿದರು. ಈ ಸಭೆಯಲ್ಲಿ ಪಾಲಕರು ಹಿಜಾಬ್ ವಿವಾದ ಇತ್ಯರ್ಥವಾಗುವರೆಗೆ ಮಕ್ಕಳ ಶಿಕ್ಷಣ ಮೊಟಕುಗೊಳ್ಳುವುದು ಬೇಡ. ಹಾಗಾಗಿ ಆನ್ಲೈನ್ನಲ್ಲೇ ಪಾಠ ಮಾಡಿಕೊಡಿ ಎಂದು ಮನವಿ ಮಾಡಿದರು. ಪರಿಣಾಮ ಫೆ.19ರವರೆಗೆ ಶಿಕ್ಷಕರು ಕಾಲೇಜಿಗೆ ಬಂದು ಪಾಠ ಮಾಡುತ್ತಾರೆ. ಮಕ್ಕಳು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಪಾಠ ಕೇಳುತ್ತಿದ್ದಾರೆ.
“ಮೈಸೂರಿನ ರಾಜೀವ್ ನಗರದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರಲು ನಿರಾಕರಿಸಿದ್ದಾರೆ. ಪೋಷಕರ ಮನವಿ ಮೇರೆಗೆ ಆನ್ಲೈನ್ ತರಗತಿ ನಡೆಸಲಾಗುತ್ತಿದೆ. ಫೆ.19ರವರೆಗೆ ಮಾತ್ರ ಆನ್ಲೈನ್ ಕ್ಲಾಸ್ ನಡೆಸಲಾಗುತ್ತದೆ. ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ನಾವು ತರಗತಿಗೆ ಬರಲು ಅನುಮತಿ ನೀಡಿಲ್ಲ. ಸುಳ್ಳುಸುದ್ದಿಗೆ ಯಾರೂ ಕಿವಿಕೊಡಬಾರದು,” ಎಂದು ಡಿಡಿಪಿಐ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
ತುಮಕೂರಿನಲ್ಲಿ 10 ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್
ಫೆಬ್ರವರಿ 17ರಂದು ತುಮಕೂರಿನ ಬಾಲಕಿಯರ ಎಂಪ್ರೆಸ್ ಸರ್ಕಾರಿ ಪಿಯು ಕಾಲೇಜಿನ ಹೊರಗೆ ಹಿಜಾಬ್ ನಿಯಮವನ್ನು ವಿರೋಧಿಸಿದ ಮತ್ತು ಸಿಆರ್ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ಹೊರಡಿಸಲಾದ ನಿಷೇಧಾಜ್ಞೆ ಉಲ್ಲಂಘಿಸಿದ ಕನಿಷ್ಠ 10 ವಿದ್ಯಾರ್ಥಿನಿಯರ ವಿರುದ್ಧ ಐಪಿಸಿ ಸೆಕ್ಷನ್ 143, 145, 149 ಮತ್ತು 188 ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada