ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಇದುವರೆಗಿನ ರಾಜಕೀಯ ಜೀವನದಲ್ಲಿ ಒಂದು ನಿಲುವು/ಸಿದ್ದಾಂತದ ಪರವಾಗಿ ನಿಂತವರಲ್ಲ ಎನ್ನುವುದು ಅವರ ಪಕ್ಷದಲ್ಲೇ ಕೇಳಿಬರುತ್ತಿರುವ ಮಾತು. ಕಳೆದ ಕೆಲವು ದಿನಗಳ ಅವರ ಹೇಳಿಕೆಗಳನ್ನು ನೋಡಿದರೆ, ಅದನ್ನು ಪುಷ್ಟೀಕರಿಸುವಂತಿದೆ.
ಬಿಜೆಪಿಯವರೂ ನಾಚಿಸುವಂತೆ ಕಾಂಗ್ರೆಸ್ ಮುಖಂಡರ ವಿರುದ್ದ ಅದರಲ್ಲೂ ಪ್ರಮುಖವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ ಕುಮಾರಸ್ವಾಮಿಯವರು ಈಗ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ವಿರುದ್ದ ತಿರುಗಿ ಬೀಳುತ್ತಿದ್ದಾರೆ.
ಹಿಜಾಬ್ ಸೇರಿದಂತೆ ಇತ್ತೀಚಿನ ಕೆಲವು ಮತೀಯ ಸೂಕ್ಷ್ಮತೆಯ ವಿಚಾರದಲ್ಲಿ ಅಲ್ಲೋ ಇಲ್ಲೊಂದು ಹೇಳಿಕೆಯನ್ನು ನೀಡುತ್ತಿದ್ದ ಕುಮಾರಸ್ವಾಮಿಯವರು ಈಗ ಕಂಪ್ಲೀಟ್ ಆಗಿ ಬಿಜೆಪಿ ಹಿಂದೆ ಬಿದ್ದಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಮುಖ್ಯಮಂತ್ರಿಗಳಿಗೇ ಗಂಡಸ್ತನವಿಲ್ಲ ಎನ್ನುವಷ್ಟರ ಮಟ್ಟಿಗೆ.
ಹಾಗಾದರೆ, ಚುನಾವಣಾ ವರ್ಷದಲ್ಲಿ ಕುಮಾರಸ್ವಾಮಿಯವರು ಒಂದು ರೀತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಬೆನ್ನಿಗೆ ನಿಲ್ಲುತ್ತಿದ್ದಾರಾ? ಎರಡು ದಿನಗಳ ಕೆಳಗೆ ಮುಕ್ತಾಯಗೊಂಡ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲೂ ಕೆಲವೊಂದು ವಿಚಾರದಲ್ಲಿ ತಟಸ್ಥ ನಿಲುವು ತಾಳಿದ್ದ ಕುಮಾರಸ್ವಾಮಿ, ಬಿಜೆಪಿ ವಿರುದ್ದ ಅಗ್ರೇಸ್ಸಿವ್ ಆಗಿರಲು ಕಾರಣಗಳೇನು?
ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಮತ್ತೆ ಮುನ್ನಲೆಗೆ ತರಲು ಕುಮಾರಸ್ವಾಮಿ ಮುಂದು
ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ, ಬಿಜೆಪಿಯಿಂದ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದು ಮೊದಲ ಹಂತದ ಚುನಾವಣಾ ಕಹಳೆಯನ್ನು ಊದಿ ಹೋಗಿದ್ದಾರೆ. ಈ ಹೊತ್ತಿನಲ್ಲಿ, ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಮತ್ತೆ ಮುನ್ನಲೆಗೆ ತರಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಹಲವು ಕಾರ್ಯಕ್ರಮಗಳನ್ನು ಜೆಡಿಎಸ್ ಮುಂದಿನ ದಿನಗಳಲ್ಲಿ ಆಯೋಜಿಸುತ್ತಿದೆ. ಇದರ ಜೊತೆಜೊತೆಗೆ, ಸಂಘ ಪರಿವಾರ, ಬೆಲೆ ಏರಿಕೆ ಮುಂತಾದ ವಿಚಾರಗಳ ವಿರುದ್ದ ಬಿಜೆಪಿ ವಿರುದ್ದ ತಿರುಗಿಬೀಳುತ್ತಿದ್ದಾರೆ.
ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶಾಂಪೂರ್ ಜೊತೆ ಜಂಟಿ ಪತ್ರಿಕಾಗೋಷ್ಠಿ
ಇವತ್ತು, ನಾಳೆ, ನಾಡಿದ್ದು ಅಂದುಕೊಂಡು ಕೊನೆಗೂ ವಿಧಾನ ಪರಿಷತ್ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ರಾಜೀನಾಮೆಯನ್ನು ನೀಡಿದ್ದಾರೆ. ಇದಾದ ನಂತರ, ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶಾಂಪೂರ್ ಜೊತೆ ಜಂಟಿ ಪತ್ರಿಕಾಗೋಷ್ಠಿಯೂ ನಡೆದಿದೆ. “ಇಬ್ರಾಹಿಂ ಅವರು ಮೊದಲಿಂದಲೂ ದೇವೇಗೌಡರ ಕುಟುಂಬದವರ ಜೊತೆ ಸಹೋದರ ಬಾಂಧವ್ಯ ಹೊಂದಿದ್ದ ನಾಯಕರು. ಇಬ್ರಾಹಿಂ ಅವರು ಇಂದು ಮನೆಗೆ ಮರಳಿ ಬರುತ್ತಿದ್ದಾರೆ. 2023ರ ಚುನಾವಣೆ ಇಬ್ರಾಹಿಂ ನೇತೃತ್ವದಲ್ಲಿ ನಡೆಸುವ ಸಂದರ್ಭ ಬಂದಿದೆ. ಇಬ್ರಾಹಿಂ ನೇತೃತ್ವದಲ್ಲಿ ಸ್ವತಂತ್ರ ಸರ್ಕಾರ ತರುವ ಕೆಲಸ ಆಗುತ್ತಿದೆ”ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ.
ಇಬ್ರಾಹಿಂ ಅವರು ಪಕ್ಷ ಸೇರಲು ಏನಾದರೂ ಕಂಡೀಷನ್ ಹಾಕಿದ್ದಾರಾ?
ಇಬ್ರಾಹಿಂ ಅವರು ಜೆಡಿಎಸ್ ಬರುತ್ತಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಕುಮಾರಸ್ವಾಮಿಯವರು ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ದ ಹರಿಹಾಯುತ್ತಿದ್ದಾರೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ಇದಿಲ್ಲದಿದ್ದರೆ, ಕಾಂಗ್ರೆಸ್ ವಿರುದ್ದ ದಿನಾ ಬೆಳಗಾದರೆ ಟೀಕಾ ಪ್ರಹಾರ ನಡೆಸುತ್ತಿದ್ದ ಕುಮಾರಸ್ವಾಮಿ ಇದ್ದಕ್ಕಿದ್ದಂತೆಯೇ ಬದಲಾದ ರಾಜಕೀಯ ನಿಲುವು ತಾಳಲು ಕಾರಣವೇನು ಎನ್ನುವ ಅಂಶವೇನು? ಇಬ್ರಾಹಿಂ ಅವರು ಪಕ್ಷ ಸೇರಲು ಏನಾದರೂ ಕಂಡೀಷನ್ ಹಾಕಿದ್ದಾರಾ? ಅಥವಾ ರಾಜ್ಯ ರಾಜಕೀಯದಲ್ಲಿ ಇಬ್ರಾಹಿಂ, ಮತಬ್ಯಾಂಕ್ ಅನ್ನು ಜೆಡಿಎಸ್ಸಿಗೆ ಕ್ರೋಢೀಕರಿಸಿ ಕೊಡುವಷ್ಟು ಜನಪ್ರಿಯರಾ ಮುಂತಾದ ಪ್ರಶ್ನೆಗಳು ಎದುರಾಗುವುದು ಸಹಜ.
ಸಿ.ಎಂ.ಇಬ್ರಾಹಿಂ ಹೆಸರನ್ನು ಉಲ್ಲೇಖಿಸದೇ ಬಿಜೆಪಿ ಟ್ವೀಟ್
“ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್ಡಿಕೆ ಸರ್ಕಸ್ ಮಾಡುತ್ತಿದ್ದಾರೆ. ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರ ಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ”ಎಂದು ಸಿ.ಎಂ.ಇಬ್ರಾಹಿಂ ಹೆಸರನ್ನು ಉಲ್ಲೇಖಿಸದೇ ಬಿಜೆಪಿ ಟ್ವೀಟ್ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada