ಬಲಂಗೀರ್: ಇದು ಬೇಲಿಯೇ ಎದ್ದು ಹೊಲ ಮೇಯ್ದ ಸ್ಟೋರಿ. ಇಲ್ಲೊಬ್ಬ ಪೊಲೀಸ್ ಅಧಿಕಾರಿ ಹೊಸ ವರ್ಷದ ಪ್ರಯುಕ್ತ ಪಾರ್ಟಿ ಮಾಡಲು 2 ಮೇಕೆ ಕದ್ದು ಭರ್ಜರಿ ಬಾಡೂಟ ಮಾಡಿ ತಿಂದು ತೇಗಿದ್ದಾರೆ.
ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆ ಎಎಸ್ಐ ಸುಮನ್ ಮಲ್ಲಿಕ್ ಮೇಕೆ ಕದ್ದ ಆರೋಪಿ.
ಹೊಸ ವರ್ಷಕ್ಕೂ ಮುನ್ನಾ ದಿನ ಗ್ರಾಮದಲ್ಲಿ 2 ಮೇಕೆಗಳು ಕಳವಾಗಿದ್ದವು. ಮೇಕೆಗಳನ್ನು ಹುಡುಕಿಕೊಂಡ ಹೊರಟ ಮಾಲೀಕನಿಗೆ ಎಎಸ್ಐ ಸುಮನ್ ಮಲ್ಲಿಕ್ ಬಳಿ ತನ್ನ ಮೇಕೆ ಇರುವುದು ಗೊತ್ತಾಗಿ, ವಾಪಸ್ ಕೊಡುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಎಎಸ್ಐ, ಕದ್ದ ಮೇಕೆಗಳನ್ನು ಕೊಂದು ನ್ಯೂ ಇಯರ್ ಪಾರ್ಟಿಗೆ ಬಾಡೂಟ ಮಾಡಿಸಿದ್ದಾರೆ.
ಮಾತಿಗೆ ಬಗ್ಗದ ಎಎಸ್ಐ ವಿರುದ್ಧ ಮೇಕೆ ಮಾಲೀಕ ಗುರು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಆಗ ಕೆಲ ಸಿಬ್ಬಂದಿ ಪೊಲೀಸ್ ವಾಹನದಲ್ಲಿ ಮೇಕೆ ಮಾಲೀಕನನ್ನು ಬೇರೆಡೆಗೆ ಕರೆದೊಯ್ದಿದ್ದು, ಕಂಗಾಲಾದ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದರು. ಮೇಕೆ ಮಾಲೀಕ ಗುರುನನ್ನು ಬಿಡುವಂತೆ ಹಾಗೂ 2 ಮೇಕೆಯ ಹಣ ಕೊಡುವಂತೆ ಆಗ್ರಹಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಎಸ್ಪಿ ನಿತಿನ್ ಕುಸಲ್ಕರ್, ಹೊಸ ವರ್ಷದ ದಿನವೇ ಎಎಸ್ಐ ಸುಮನ್ ಮಲ್ಲಿಕ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ತನ್ನ ಸಿಬ್ಬಂದಿ ಮೂಲಕ ಎಎಸ್ಐ ಅವರೇ ಮೇಕೆಗಳನ್ನು ಕಳವು ಮಾಡಿಸಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: