ಚೇತನಾಸ್ಥಾನ, ಚಿಂತನಾಕೇಂದ್ರ, ಶಬ್ದ-ಸ್ಪರ್ಶ-ರೂಪ-ರಸ-ಗಂಧದಂತಹ ಇಂದ್ರಿಯವಿಷಯಗಳ ಗ್ರಾಹಕ, ರಸವಹಸ್ರೋತಸ್ಸು, ಪ್ರಾಣವಹಸ್ರೋತಸ್ಸುಗಳ ಮೂಲ; ದಶಮಹಾಧಮನಿಗಳ ಆಶ್ರಯ; ಅಷ್ಟಬಿಂದುರೂಪದ ‘ಓಜಸ್ಸಿ’ನ ನೆಲೆ; ತ್ರಿಮರ್ಮಗಳಲ್ಲಿ ಒಂದು. ಕಟ್ಟಡವನ್ನು ಸ್ಥಿರವಾಗಿಡುವ ಕಂಬ-ಜಂತಿಗಳಂತೆ, ಚಕ್ರದ ನಾಭಿಯಂತೆ ಹೃದಯವೇ ‘ಷಡಂಗ’ಗಳನ್ನು ಜೋಡಿಸಿಡುವ-ಆಧರಿಸುವ ‘ಮರ್ಮ’.
ಆಹಾರ
ಘನ-ದ್ರವಾಹಾರ ಸಾರವೆಲ್ಲಾ ಹೃದಯದ ಮೂಲಕ ಇತರ ಸ್ರೋತಸ್ಸು-ಧಾತುಗಳ ಪುಷ್ಟಿಗಾಗಿ ಅಭಿವಹನಗೊಳ್ಳುತ್ತದೆ. ಆಹಾರಸೇವನೆಯ ಕಾಲ-ವಿಧಾನವನ್ನಾಧರಿಸಿ ಹೃದಯದ ಪೋಷಣೆಯಾಗುತ್ತದೆ.
ಹಸಿವೆ/ಬಾಯಾರಿಕೆಯಾದಾಗ ಏನನ್ನೂ ಸೇವಿಸದೆ ವ್ಯಾಯಾಮ, ಆಯಾಸವಾಗುವಷ್ಟು ಕೆಲಸಮಾಡುವುದು ಹೃದಯವನ್ನು ಶೋಷಿಸುತ್ತದೆ. ದೇಹಬಯಸಿದ್ದು ಆಹಾರವಾದ್ದರಿಂದ ಜೈವಿಕಕರೆಯನ್ನು ಗೌರವಿಸುವುದೇ ಆರೋಗ್ಯಕ್ಕೆ ರಹದಾರಿ.
ಹಸಿವೆ/ಬಾಯಾರಿಕೆಯಿರದಿದ್ದರೂ ದ್ರವ-ಘನಾಹಾರ ಸೇವಿಸುವುದು ಹೃದಯಮಿಡಿತವನ್ನು ಏರುಪೇರುಗೊಳಿಸುತ್ತದೆ. ಇದು ಕಫಜಹೃದ್ರೋಗಕ್ಕೆ ಕಾರಣ. ಪದೇಪದೇ ತಿಂದರೆ ಹೃದಯಗತಿ ಕೆಡುತ್ತದೆ. ನಿಗದಿತ ಎರಡು/ಮೂರು ಆಹಾರಕಾಲದಲ್ಲಿ ಮಾತ್ರ ಸೇವಿಸುವುದು ಕ್ಷೇಮ.
ಗಡಿಬಿಡಿಯಿಂದ ದ್ರವ-ಘನಾಹಾರದ ಪ್ರಮಾಣ ತಪ್ಪುತ್ತದೆ. ಇದು ಅವರೋಧಾತ್ಮಕ ಹೃದ್ರೋಗಕ್ಕೆ ಕಾರಣವಾಗಬಹುದು. ಸಾವಧಾನವಾಗಿ ಸಾವಕಾಶವಾಗಿ ಸೇವಿಸುವುದು ಹಿತಕರ.