ಜಿಲ್ಲಾ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈವರೆಗೆ ಸಾಲದ ಕಂತನ್ನೇ ಕಟ್ಟಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆ ಬೆಳಗಾವಿ ಜಿಲ್ಲೆಯಲ್ಲಿದೆ. ಈ ಸಕ್ಕರೆ ಕಾರ್ಖಾನೆಯ ಮಾಲೀಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ. ರಮೇಶ್ ಜಾರಕಿಹೊಳಿಯವರು ಕಳೆದ 2008ರಿಂದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕುಗಳಿಂದ ಒಟ್ಟು 610 ಕೋಟಿ ಸಾಲ ಪಡೆದಿದ್ದಾರೆ. 2016-17 ಸಾಲಿನವರೆಗೂ ಸಾಲದ ಕಂತನ್ನು ಕಟ್ಟಿಲ್ಲ. ಕಳೆದ 2017 ರಲ್ಲಿ ಕೇಂದ್ರ ಸರ್ಕಾರ ಸಹಕಾರಿ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲಗಳನ್ನು ಮನ್ನಾ ಮಾಡಲಾಗಿದೆ.ಇದೇ ವೇಳೆ ರಮೇಶ್ ಜಾರಕಿಹೊಳಿಯವರು ಪಡೆದಿದ್ದ ಸಾಲವೂ ಮನ್ನಾ ಮಾಡಲು ಯತ್ನಿಸಲಾಗಿದೆ. ಇದರಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪಾಲುದಾರರಾಗಿದ್ದಾರೆ. ಈ ಕುರಿತು ಕೇಂದ್ರ ಸಹಕಾರ ಸಚಿವರಾಗಿರುವ ಅಮಿತ್ ಶಾ ರವರು ಏಕೆ ಧ್ವನಿ ಎತ್ತುತ್ತಿಲ್ಲ.
ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇಡಿ ಮುಖಾಂತರ ಅವರ ಕಂಪನಿಯನ್ನು ಮುಟ್ಟುಗೋಲು ಹಾಕಿ ಕೊಳ್ಳಬೇಕು.ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದರು.
ಸಚಿವ ಅಶ್ವಥ್ ನಾರಾಯಣ್ ಬಳಿ ನಾಲ್ಕು ಖಾತೆಗಳಿವೆ. ಅವರು ಮೊದಲು ಹೇಗಿದ್ದರು, ಈಗ ಹೇಗಿದ್ದಾರೆ. ಬಿಡಿಎಯಲ್ಲಿ ಎಲ್ಲಾ ಕಾಮಗಾರಿಗಳ ಗುತ್ತಿಗೆ ಅವರ ತಮ್ಮ ಸತೀಶ್ ಗೆ ಹೋಗುತ್ತಿವೆ. ಅಶ್ವಥ್ ನಾರಾಯಣ್ ಅವರ ಇಲಾಖೆಯ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಅಸಿಸ್ಟೆಂಟ್ ಪ್ರೊಫೆಸರ್ ಸೌಮ್ಯ ಬಂಧನವಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿ ಮೂವರು ಪಿ ಎಸ್ ಐ ಗಳ ನೇಮಕಾತಿ ಸಂಬಂಧ ಸಚಿವ ಅಶ್ವಥ್ ನಾರಾಯಣ್ ಸಹೋದರ 80 ಲಕ್ಷ ರೂಪಾಯಿ ಡೀಲ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. 5 ಪಿಎಸ್ ಐ ಹುದ್ದೆಗಳು ಅಶ್ವಥ್ ನಾರಾಯಣ್ ರ ಸಹೋದರ ಸತೀಶ್ ಮೂಲಕ ಭರ್ತಿಯಾಗಿರುವ ಬಗ್ಗೆ ಮಾಹಿತಿಯಿದೆ ಎಂದು ಮಾಹಿತಿ ನೀಡಿದ್ದಾರೆ.
ಹಾಗೆಯೇ ಶಿಕ್ಷಕರ ನೇಮಕಾತಿಯಲ್ಲೂ ಸುಮಾರು 850 ಕೋಟಿ ಅವ್ಯವಹಾರ ನಡೆದಿದೆ. 6,000 ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಈ ಅವ್ಯವಹಾರ ನಡೆದಿದೆ. ನೀವು ತಪ್ಪೇ ಮಾಡದಿದ್ದರೇ ಪೊಲೀಸ್ ಅಧಿಕಾರಿಗಳಿಗೆ ಏಕೆ ಧಮ್ಕಿ ಹಾಕುತ್ತಿದ್ದೀರಾ? ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada