ಚೀನಾ ಉತ್ಪನ್ನಗಳನ್ನು ಮುಕ್ತವಾಗಿ ಒಳಗೆ ಬಿಟ್ಟೆವು. ನಮ್ಮ ಉತ್ಪನ್ನಗಳಿಗೆ ಚೀನಾ ತಡೆಹಾಕಿತು. ಇದರಿಂದ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಅಂತರ ಹೆಚ್ಚಾಗಲು ಕಾರಣವಾಯಿತು ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಹೇಳಿದ್ದಾರೆ.ನವದೆಹಲಿ:ಮೂರು ವರ್ಷಗಳ ಹಿಂದೆ ಆರ್ಸಿಇಪಿ ಎಂಬ ಆರ್ಥಿಕ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತದ ನಿರ್ಧಾರವನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಸಮರ್ಥಿಸಿಕೊಂಡಿದ್ದಾರೆ. ಪಾರದರ್ಶಕವಲ್ಲದ ಆರ್ಥಿಕತೆ ಇರುವ ಮತ್ತು ಯಾವುದೇ ಕಾನೂನು, ಪ್ರಜಾಪ್ರಭುತ್ವ, ಮೇಲ್ಮನವಿಗೆ ನ್ಯಾಯ ವ್ಯವಸ್ಥೆ ಇಲ್ಲದ ದೇಶದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದರೆ ಆರ್ಸಿಇಪಿಯು ಭಾರತದ ತಯಾರಿಕಾ ಕ್ಷೇತ್ರದ ಪಾಲಿಗೆ ಮರಣಾಘಾತ ಆಗುತ್ತಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಗೋಯಲ್ ಅವರು ಚೀನಾ ಹೆಸರು ಎತ್ತದೇ ಪರೋಕ್ಷವಾಗಿ ಟೀಕಿಸಿದರು. ನಿನ್ನೆ ಪುಣೆಯಲ್ಲಿ ನಡೆದ ಏಷ್ಯಾ ಆರ್ಥಿಕ ಸಂವಾದ 2023 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಚೀನಾದ ಕಳಪೆ ಗುಣಮಟ್ಟದ ಸರಕುಗಳಿಂದ ಆದ ಅನ್ಯಾಯವನ್ನು ವಿವರಿಸಿದರು.“ಹಲವು ವರ್ಷಗಳ ಕಾಲ ಚೀನಾದಿಂದ ಸರಬರಾಜಾಗುತ್ತಿದ್ದ ಅಗ್ಗದ ಮತ್ತು ಕಳಪೆಗುಣಮಟ್ಟದ ಸರಕುಗಳಿಗೆ ಭಾರತೀಯರು ಒಗ್ಗಿಹೋಗುವಂತೆ ಮಾಡಲಾಗಿತ್ತು. ಇದರಿಂದ ಭಾರತದ ಹಿತಾಸಕ್ತಿಗೆ ಧಕ್ಕೆ ತಂದಿದ್ದೆವು. 15-16 ವರ್ಷಗಳ ಹಿಂದೆ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಅಂತರ ಬಿಲಿಯನ್ ಡಾಲರ್ಗೂ ಕಡಿಮೆ ಇತ್ತು. 2014ರಷ್ಟರಲ್ಲಿ ಇದು 48 ಬಿಲಿಯನ್ ಡಾಲರ್ಗೆ ಹೆಚ್ಚಾಯಿತು.“ಚೀನಾದಿಂದ ಉತ್ಪನ್ನಗಳು ಬರಲು ನಾವು ಬಿಟ್ಟೆವು. ಆದರೆ ನಮ್ಮ ಉತ್ಪನ್ನಗಳಿಗೆ ಚೀನಾ ಏನಾದರೊಂದು ಕಾರಣವೊಡ್ಡಿ ತಡೆಯೊಡ್ಡುತ್ತಿತ್ತು. ಆದ್ದರಿಂದ 2019 ನವೆಂಬರ್ 4ರಂದು ಪ್ರಧಾನಿ ನರೇಂದ್ರ ಮೋದಿ ಆರ್ಸಿಇಪಿಗೆ ಸೇರದಿರಲು ನಿರ್ಧರಿಸಿದಾಗ ನನಗೆ ಬಹಳ ಖುಷಿಯಾಯಿತು. ಭಾರತದ ಉದ್ಯಮ ಮತ್ತು ವ್ಯವಹಾರದ ಪ್ರತಿಯೊಂದು ವಿಭಾಗವೂ, ಹೈನೋದ್ಯಮದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಬ್ಬರ ರೈತನೂ ಈ ನಿರ್ಧಾರದಿಂದ ಸಂತುಷ್ಟಿಗೊಂಡಿದ್ದಾರೆ” ಎಂದು ಪಿಯೂಶ್ ಗೋಯಲ್ ಹೇಳಿದರು.ಇನ್ನು, ಆರ್ಸಿಇಪಿ ಹೊರತುಪಡಿಸಿ ಬೇರೆ ದೇಶಗಳ ಜೊತೆ ಭಾರತ ಮುಕ್ತ ವ್ಯಾಪಾರಒಪ್ಪಂದ ಮಾಡಿಕೊಳ್ಳುತ್ತಿರುವ ವಿಚಾರವನ್ನು ಸಚಿವರು ಈ ವೇಳೆ ಪ್ರಸ್ತಾಪಿಸಿದರು. ಭಾರತ ಮತ್ತು ಯುಎಇ ನಡುವೆ ಕೇವಲ 88 ದಿನಗಳಲ್ಲಿ ಒಪ್ಪಂದವಾಗಿದ್ದು, ಇದು ವಿಶ್ವ ಇತಿಹಾಸದಲ್ಲಿ ಅತಿ ವೇಗದ ಎಫ್ಟಿಎ ಎಂಬ ಸಂಗತಿಯನ್ನು ಅವರು ತಿಳಿಸಿದರು.“ನಾವು ಆಸ್ಟ್ರೇಲಿಯಾ ಜೊತೆಗೂ ಬಹಳ ವೇಗವಾಗಿ ಎಫ್ಟಿಎ ಪೂರ್ಣಗೊಳಿಸಿದ್ದೇವೆ. ಭಾರತದ ಜೊತೆ ಕೆಲಸ ಮಾಡಲು ಇಡೀ ವಿಶ್ವ ಆಸಕ್ತಿ ತೋರುತ್ತಿದೆ. ಇಸ್ರೇಲ್, ಕೆನಡಾ, ಐರೋಪ್ಯ ಒಕ್ಕೂಟ, ಬ್ರಿಟನ್, ಜಿಸಿಸಿಜೊತೆ ಮಾತುಕತೆಗಳು ನಡೆಯುತ್ತಿವೆ. ರಷ್ಯಾ ಮತ್ತದರ ಇಎಯು ಪಾಲುದಾರಿಕೆ ದೇಶಗಳು ಭಾರತದ ಜೊತೆ ವ್ಯಾಪಾರ ಒಪ್ಪಂದಕ್ಕೆ ಆಸಕ್ತಿ ತೋರಿವೆ” ಎಂದು ಪಿಯೂಶ್ ಗೋಯಲ್ ಹೇಳಿದರು.ಮುಂದಿನ ಐದು ವರ್ಷದಲ್ಲಿ ಭಾರತ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ”2047ರಷ್ಟರಲ್ಲಿ ಭಾರತದ ಆರ್ಥಿಕತೆ 35-40 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು. ಮುಂದಿನ 5 ವರ್ಷದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ. ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿರುವ ಭಾರತ ಮುಂದಿನ ಹಲವು ದಶಕಗಳ ಕಾಲ ಅದೇ ರೀತಿ ಸಾಗಲಿದೆ” ಎಂದೂ ಗೋಯಲ್ ಅಭಿಪ್ರಾಯಪಟ್ಟರು.“ಇವತ್ತು ಭಾರತ 21ನೇ ಶತಮಾನದ ದೇಶವಾಗಿ ಪರಿಗಣಿಸದೇ ಹೋದರೂ ದಶಕದ ದೇಶವಾಗಿ ಗುರುತಿಸಲ್ಪಟ್ಟಿದೆ. 10ನೇ ಅತಿದೊಡ್ಡ ಆರ್ಥಿಕತೆಯಿಂದ ಈಗ 5ನೇ ಸ್ಥಾನಕ್ಕೆ ಏರಿದ್ದೇವೆ. ನಮ್ಮಲ್ಲಿ ಯುವ ಸಮುದಾಯ ಹೆಚ್ಚಿದ್ದು, ಇದು ನಮ್ಮ ಅತಿದೊಡ್ಡ ಆಸ್ತಿ ಎನಿಸಿದೆ” ಎಂದು ಪೀಯುಶ್ ಗೋಯಲ್ ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada