ಒಂದೆಡೆ ಹಿಂಸಾಚಾರಕ್ಕೆ ಅಂತ್ಯ ಹಾಡಲು ಇಸ್ರೇಲ್ ಸರ್ಕಾರ ಹಾಗೂ ಪ್ಯಾಲೆಸ್ತೀನ್ ನಡುವೆ ಶಾಂತಿಸಭೆ ನಡೆದರೆ ಮತ್ತೊಂದೆಡೆ ಪಶ್ಚಿಮ ದಂಡೆಯಲ್ಲಿ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮತ್ತೆ ಬುಗಿಲೆದ್ದಿದೆ. ಪಶ್ಚಿಮ ದಂಡೆಯ ಜೆರಿಕೊ ಪ್ರದೇಶದಲ್ಲಿ ಇಸ್ರೇಲಿ-ಅಮೆರಿಕನ್ ಪ್ರಜೆಯೊಬ್ಬನನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ.ಮೊನ್ನೆ ಒಂದೆಡೆ ಇಸ್ರೇಲಿ ಸರ್ಕಾರ ಹಾಗೂ ಪ್ಯಾಲೆಸ್ತೀನ್ ನಡುವೆ ಸಂಧಾನ ಸಭೆ ನಡೆದು, ಶಾಂತಿ ವಾತಾವರಣ ನಿರ್ಮಾಣ ಮಾಡುವ ಮಾತುಕತೆ ನಡೆದಿತ್ತು.. ಅಲ್ಲದೆ ಈ ಸಭೆಯಲ್ಲಿ ಅಮೆರಿಕಾ ಹಾಗೂ ಈಜಿಪ್ಟ್ನ ನಿಯೋಗ ಕೂಡ ಭಾಗಿಯಾಗಿತ್ತು. ಆದರೆ ಇದೇ ಸಮಯದಲ್ಲಿ ಇಬ್ಬರು ಇಸ್ರೇಲಿ ವಸಾಹತುಗಾರರನ್ನು ಪ್ಯಾಲೆಸ್ತೀನ್ ನಾಗರಿಕರು ಹತ್ಯೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲಿ ವಸಾಹತುಗಾರರು ಭಾನುವಾರ ರಾತ್ರಿ ಪಶ್ಚಿಮ ದಂಡೆಯ ಪ್ಯಾಲೇಸ್ಟಿನಿಯನ್ ಹಳ್ಳಿಗಳ ಮೇಲೆ ದಾಳಿ ಮಾಡಿ, ಸುಮಾರು ೧೨ ಕಾರ್ಗಳು ಮತ್ತು ಮನೆಗಳನ್ನು ಸುಟ್ಟುಹಾಕಿದ್ದರು. ಸದ್ಯ ಈ ಘಟನೆ ಬಳಿಕ ಇದೀಗ ಇಸ್ರೇಲಿ-ಅಮೆರಿಕನ್ ನಾಗರಿಕನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಪಶ್ಚಿಮ ದಂಡೆಯ ಜೆರಿಕೊ ಬಳಿ ಗುಂಡಿನ ದಾಳಿಗೆ ಒಳಗಾದ ಇಸ್ರೇಲಿ-ಅಮೆರಿಕನ್ ವ್ಯಕ್ತಿಯನ್ನು ಆರಂಭದಲ್ಲಿ ಅರೆವೈದ್ಯರು ಜೆರುಸಲೆಮ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಂತರ ಅಲ್ಲಿ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ನಿಧನಗೊಂಡ ಸುದ್ದಿಯನ್ನು ಘೋಷಿಸಲಾಯಿತು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ರಾಯಬಾರಿ ಟಾಮ್ ನಿದಾಸ್, ದುಃಖಕರ ಸಂಗತಿಯೆಂದರೆ ಇಂದು ರಾತ್ರಿ ವೆಸ್ಟ್ ಬ್ಯಾಂಕ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ಯುಎಸ್ ಪ್ರಜೆ ಸಾವನ್ನಪ್ಪಿದ್ದಾನೆ ಎಂದು ನಾನು ಖಚಿತಪಡಿಸುತ್ತಿದ್ದೇನೆ. ನಾನು ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಹತ್ಯೆಯ ಹೊಣೆಯನ್ನು ಪ್ಯಾಲೆಸ್ತೀನ್ನ ಯಾವುದೇ ಸಂಘಟನೆ ಈತನಕ ಹೊತ್ತುಕೊಂಡಿಲ್ಲ. ಆದರೆ ಗಾಜಾ ಪಟ್ಟಿಯಲ್ಲಿ ನಿಯಂತ್ರಣ ಹೊಂದಿರುವ ಹಮಾಸ್ ಗ್ರೂಪ್ನ ವಕ್ತಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಇಸ್ರೇಲಿ ದಾಳಿಗೆ ತಿರುಗೇಟು ಎಂಬಂತೆ ಸಾಮಾನ್ಯ ಪ್ರತಿಕ್ರಿಯೆಯಾಗಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಪರಿಸ್ಥಿತಿ ಮಾತ್ರ ಸದ್ಯ ಗಂಭೀರ ಸ್ಥಿತಿಯಲ್ಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada