ಧಾರವಾಡ: ತಮ್ಮನ್ನು ಮತ್ತೆ ಜಲಮಂಡಳಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇಂದು ಗುತ್ತಿಗೆ ಕಾರ್ಮಿಕನೊಬ್ಬ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾನೆ.
ಜಲಮಂಡಳಿ ಗುತ್ತಿಗೆ ನೌಕರ ಮಲ್ಲಿಕಾರ್ಜುನ ತಳವಾರ ಎಂಬಾತ ಏಕಾಏಕಿ ದಾರವಾಡದ ಜುಬಿಲಿ ಸರ್ಕಲ್ ಬಳಿಯಿರುವ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ತಮ್ಮ ಬಾಕಿ ವೇತನ, ಮರಳಿ ಕೆಲಸಕ್ಕೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಕಳೆದ ಹನ್ನೆರಡು ದಿನಗಳಿಂದ ಸುಮಾರು 358ಕ್ಕೂ ಅಧಿಕ ಗುತ್ತಿಗೆ ನೌಕರರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದ್ರೆ, ಪ್ರತಿಭಟನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಮಲ್ಲಿಕಾರ್ಜುನ ತಳವಾರ ಎಂಬಾತ ಮೊಬೈಲ್ ಟವರ್ ಏರಿ ಕೈಯಲ್ಲಿ ಕೆಲಸ ಕೊಡಿ ಇಲ್ಲವಾದರೆ ದಯಾಮರಣಕ್ಕೆ ಅವಕಾಶ ಕೊಡಿ ಎಂಬ ಬೋರ್ಡ್ ಹಿಡಿದು ಪ್ರತಿಭಟನೆ ನಡೆಸಿದರು. ಈ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮಲ್ಲಿಕಾರ್ಜುನ ಅವರನ್ನು ಮನವೊಲಿಸಿ ಕೆಳಗಿಳಿಸಲು ಯಶಸ್ವಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ತಳವಾರ,ನಮ್ಮ ಬಾಕಿ ವೇತನ ಬಿಡುಗಡೆ ಮಾಡಿ ಕೂಡಲೇ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇನ್ನೂ ಕಳೆದ ಹದಿನೈದು ದಿನಗಳ ಹಿಂದಷ್ಟೇ ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಕಳ್ಳನೊಬ್ಬ ಇದೇ ಮೊಬೈಲ್ ಟವರ್ ಏರಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada