ನಮ್ಮ ಇಂದಿನ ಯುಗದ ಕನ್ನಡದ ಹೆಣ್ಣುಮಕ್ಕಳ ಸಾಧನೆಯ, ಧೈರ್ಯ, ಸಾಹಸಗಳ ವಿಷಯವನ್ನು ನೆನೆಯುವಾಗ ಆ ಪಟ್ಟಿಯಲ್ಲಿ ಜಯಮಾಲ ಅವರು ಕೂಡಾ ಸೇರ್ಪಡೆಯಾಗುತ್ತಾರೆ. ಫೆಬ್ರುವರಿ 28 ಅವರ ಹುಟ್ಟುಹಬ್ಬ.
ದಕ್ಷಿಣ ಕನ್ನಡದಿಂದ ಚಿತ್ರರಂಗಕ್ಕೆ ಆಗಮಿಸಿದ ಜಯಮಾಲ ಅವರು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರೊಡನೆ ಪ್ರಮುಖ ಚಿತ್ರಗಳಾದ ಪ್ರೇಮದ ಕಾಣಿಕೆ, ಗಿರಿಕನ್ಯೆ, ಶಂಕರ್ ಗುರು, ಬಡವರ ಬಂಧು, ದಾರಿ ತಪ್ಪಿದ ಮಗ, ಬಭ್ರುವಾಹನ ಮುಂತಾದವುಗಳಲ್ಲಿ ನಟಿಸಿ ಪ್ರಸಿದ್ಧರಾದರು. ನಂತರದಲ್ಲಿ ಅವರು ಅಂದಿನ ಕನ್ನಡದ ಎಲ್ಲ ಪ್ರತಿಷ್ಟಿತ ನಾಯಕನಟರೊಂದಿಗೆ ನಟಿಸಿದರು. ತಾವು ಪ್ರಖ್ಯಾತರಾಗಿದ್ದ ಅಂದಿನ ದಿನಗಳಲ್ಲಿ ಕೂಡಾ ಕೇವಲ ಗ್ಲಾಮರ್ ಪಾತ್ರಗಳಿಗೆ ನಿಲ್ಲದೆ ಪಿ.ಲಂಕೇಶ್, ಚಂದ್ರಶೇಖರ ಕಂಬಾರ ಮುಂತಾದ ಬುದ್ಧಿಜೀವಿಗಳ ಜತೆ ಹೊಸ ಅಲೆಯ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಷ್ಟೇ ಅಲ್ಲದೆ ತುಳು, ತೆಲುಗು, ಹಿಂದಿ ಚಿತ್ರಗಳಲ್ಲೂ ಅವರು ನಟಿಸಿದ್ದರು.
ಮುಂದೆ ಬದುಕಿನ ಕಾಲಚಕ್ರ ಗತಿಯಲ್ಲಿ ಹಲವು ರೀತಿಯ ತಿರುವುಗಳನ್ನು ಉಂಡ ಜಯಮಾಲ ಅವರು ನಿರ್ಮಾಪಕಿಯಾಗಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ‘ತಾಯಿ ಸಾಹೇಬ’ ಚಿತ್ರ ನಿರ್ಮಿಸಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು. ಅದೇ ಚಿತ್ರದ ಅವರ ಮನೋಜ್ಞ ಅಭಿನಯಕ್ಕಾಗಿ ಆಯ್ಕೆಸಮಿತಿ ಪ್ರಕಟಿಸಿದ ವಿಶೇಷ ಜ್ಯೂರಿ ಪುರಸ್ಕಾರವನ್ನು ಸಹಾ ಸ್ವೀಕರಿಸಿದರು. ಅವರ ನಿರ್ಮಾಣದ ‘ತುತ್ತೂರಿ’ ಮಕ್ಕಳ ಚಿತ್ರ ಸಹಾ ರಾಷ್ಟ್ರಪಶಸ್ತಿ ಪಡೆದದ್ದು ಜಯಮಾಲ ಅವರ ಅಭಿರುಚಿ ಮತ್ತು ವಿಶೇಷ ಪ್ರಯತ್ನಗಳಲ್ಲಿನ ಕುಶಲತೆಗೆ ಮೆರುಗು ತಂದಿದೆ. ಮುಂದೆ ಅವರು ಕಿರುತೆರೆಯಲ್ಲಿನ ಪ್ರಯತ್ನಗಳಲ್ಲೂ ತೊಡಗಿದ್ದರು.
ಅಧ್ಯಯನದಲ್ಲಿ ಕೂಡಾ ತಮ್ಮ ಆಸಕ್ತಿಗಳನ್ನು ಉಳಿಸಿಕೊಂಡಿರುವ ಜಯಮಾಲ ಅವರು, ‘ಕರ್ನಾಟಕದ ಗ್ರಾಮೀಣ ಮಹಿಳೆಯರ ಪುನಶ್ಚೇತ’ನ ಎಂಬ ವಿಷಯದ ಕುರಿತು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದ ಮೊದಲ ನಟಿ ಎಂಬ ಹಿರಿಮೆಗೂ ಪಾತ್ರರಾಗಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: