ನಿರ್ದೇಶಕ ಶ್ರೀನಿ ನಿರ್ದೇಶಿಸಿ ನಟಿಸಿರುವ ಓಲ್ಡ್ ಮಾಂಕ್ ಸಿನಿಮಾ ರಾಜ್ಯದಾದ್ಯಂತ ಇಂದು ತೆರೆಕಂಡಿದೆ. ಈಗ ಬರುತ್ತಿರುವ ಸಾಕಷ್ಟು ಕಾಮಿಡಿ ಜಾನರ್ ಸಿನಿಮಾಗಳ ನಡುವಲ್ಲಿ ಓಲ್ಡ್ ಮಾಂಕ್ ಸಿನಿಮಾ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೇ ಓಲ್ಡ್ ಮಾಂಕ್ ಸಿನಿಮಾ ಪಕ್ಕಾ ಎಂಟರ್ಟೈನಿಂಗ್ ಮತ್ತು ಪೈಸಾ ವಸೂಲ್ ಚಿತ್ರವಾಗಿದೆ.
ವಿಭಿನ್ನ ರಿತೀಯಲ್ಲಿ ಕಥೆ ನಿರೂಪಣೆ ಜೊತೆಗೆ ಕಾಮಿಡಿ ಮತ್ತು ಪಂಚಿಂಗ್ ಡೈಲಾಗ್ ಮೂಲಕವೇ ಸಿನಿಮಾ ವೀಕ್ಷಕರನ್ನು ರಂಜಿಸಿದೆ. ಆರಂಭವಾದಾಗ ಪಿಕ್ ಅಪ್ ಆಗುವ ಕಥೆ ಕೊನೆಯ ವರೆಗೂ ಆ ತಾಜಾತನವನ್ನು ಕಾಯ್ದಿರಿಸಿಕೊಂಡು ಹೋಗುತ್ತೆ.
ಓಲ್ಡ್ ಮಾಂಕ್ ಕಥೆ ಆರಂಭವಾಗೋದೆ ದೇವ ಲೋಕದಲ್ಲಿ. ಅಲ್ಲಿ ಕೃಷ್ಣನ ಅವರಾತದಲ್ಲಿ ನಟ ಸುನಿಲ್ ರಾವ್, ರುಕ್ಮಿಣಿ ಪಾತ್ರದಲ್ಲಿ ಮೇಘಶ್ರೀ ಹಾಗೂ ನಾರದನಾಗಿ ಶ್ರೀನಿ ಪ್ರತ್ಯಕ್ಷವಾಗುತ್ತಾರೆ. ಅಂದು ರುಕ್ಮಿಣಿಯ ಹುಟ್ಟಿದ ದಿನ ಆದರೇ ಕೃಷ್ಣ ವಿಷ್ ಮಾಡಿರೋದಿಲ್ಲ. ಆದರೇ ನಾರದರು ಮಾತ್ರ ರುಕ್ಮಿಣಿಗೆ ಇಷ್ಟವಾಗುವ ಕೇಕ್ ತಂದು ವಿಷ್ ಮಾಡುತ್ತಾರೆ. ಇದು ಕೃಷ್ಣ ಮತ್ತು ರುಕ್ಮಿಣಿ ನಡುವಿನ ಸಂಬಂಧ ಹಾಳಾಗೋದಕ್ಕೆ ಕಾರಣವಾಗುತ್ತೆ.
ಇದೇ ಕಾರಣದಿಂದಾಗಿ ನಾರದನಿಗೆ ಇದರ ನೋವು ಎಷ್ಟಿರುತ್ತೆ ಎಂಬುದನ್ನು ಅರ್ಥ ಮಾಡಿಸಲು ಕೃಷ್ಣ ನಾರದನಿಗೆ ಒಂದು ಶಾಪ ನೀಡುತ್ತಾನೆ. ಅದುವೇ ಭೂ ಲೋಕಕ್ಕೆ ಹೋಗಿ ಒಂದು ಹುಡುಗಿಯನ್ನು ಲವ್ ಮಾಡಿ ಮದುವೆ ಆದರೆ ಮಾತ್ರ ನಿನಗೆ ದೇವಲೋಕ ಎಂಟ್ರಿ ಎಂದು. ಅಲ್ಲಿಂದ ಭೂಲೋಕಕ್ಕೆ ಎಂಟ್ರಿ ಕೊಡುವ ಶ್ರೀನಿ ಹೇಗೆಲ್ಲಾ ಲೈಫ್ ಆರಂಭಿಸುತ್ತಾನೆ, ಮಿಡಲ್ ಕ್ಲಾಸ್ನಲ್ಲಿ ಹುಟ್ಟುವ ಶ್ರೀನಿಗೆ ಎದುರಾಗೊ ಸವಾಲುಗಳೇನು, ಅದನ್ನು ಆತ ಹೇಗೆಲ್ಲಾ ನಿಭಾಯಿಸುತ್ತಾನೆ, ಅದಿತಿ ಪ್ರಭುದೇವ ಅವರನ್ನು ಪ್ರೀತಿಸುವ ಶ್ರೀನಿ ಮದುವೆ ಆಗುತ್ತಾನಾ, ಮದುವೆಗೆ ಎದುರಾಗೋ ಸವಾಲುಗಳು ಏನೇನು ಎಂಬೆಲ್ಲಾ ಅಂಶಗಳನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಿದೆ.
ಇಷ್ಟೆಲ್ಲಾ ಕಥೆಗಳ ನಡುವೆ ಹೊಟ್ಟೆ ಹುಣ್ಣಾಗುವಷ್ಟು ಕಾಮಿಡಿಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಪ್ರತೀ ಡೈಲಾಗ್ಗೂ ನಗು ಪಕ್ಕಾ ಅನ್ನುವಂತಿದೆ ಸಿನಿಮಾ. ಇನ್ನು ಕಾಮಿಡಿ ನಟ ಸುಜಯ್ ಶಾಸ್ತ್ರಿ ಈ ಚಿತ್ರದಲ್ಲಿ ಕಾಮಿಡಿ ಮಳೆ ಸುರಿಸುವ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದು, ಶ್ರೀನಿಯ ಸ್ನೇಹಿತನಾಗಿ ಯಾವತ್ತು ಅವನೊಂದಿಗೆ ಇದ್ದು, ತರ್ಲೆ ಮಾತುಗಳನ್ನಾಡುವ ಪಾತ್ರವೇ ಸುಜಯ್ ಶಾಸ್ತ್ರಿ ಅವರದ್ದು. ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿರುವ ಸುಜಯ್ ಶಾಸ್ತ್ರಿ ಅವರು ಈ ಸಿನಿಮಾದಲ್ಲಿ ವೀಕ್ಷಕರ ಗಮನ ಹೆಚ್ಚು ಸೆಳೆಯುತ್ತಾರೆ. ಒಟ್ಟಿನಲ್ಲಿ ಹೇಳಬೇಕು ಅಂದರೇ ಕಡಿಮೆ ಬಂಡವಾಳದಲ್ಲಿ ಡೈಲಾಗ್ ಅನ್ನೆ ಅಸ್ತ್ರವಾಗಿಸಿಕೊಂಡು ಸಿನಿಪ್ರೀಯರಿಗೆ ವೀಕೆಂಡ್ ಧಮಾಕ ಮಾಡಲು ಒಂದೊಳ್ಳೆ ಸಿನಿಮಾ ಈ ಓಲ್ಡ್ ಮಾಂಕ್.
ಈ ಸಿನಿಮಾದಲ್ಲಿ ಶ್ರೀನಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಪ್ರೀತಿ ಕೊಡುವ ಹುಡುಗಿ ಅದಿತಿ. ಅದಿತಿಯನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳಲು ಶ್ರೀನಿ ಪ್ರಯತ್ನ. ಈ ಒಂದಷ್ಟು ಪ್ರಯತ್ನಗಳು ಎಲ್ಲೂ ಜನರನ್ನು ಬೋರ್ ಆಗಿಸೋದಿಲ್ಲಾ. ಇನ್ನುಳಿದಂತೆ ಚಿತ್ರದಲ್ಲಿ ಎಸ್. ನಾರಾಯಣ್, ಹಿರಿಯ ನಟ ಕಲಾತಪಸ್ವಿ ರಾಜೇಶ್, ಸಿಹಿಕಹಿ ಚಂದ್ರು, ಸುಜಯ್ ಶಾಸ್ತ್ರಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದು, ‘ಬೀರ್ಬಲ್’ ಸಿನಿಮಾಗೆ ಸಂಗೀತ ನೀಡಿದ್ದ ಸೌರಭ್ ವೈಭವ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಶ್ರೀನಿಯವರೇ ಕಥೆ ಬರೆದು ಒಂದು ಅಚ್ಚು ಕಟ್ಟಾದ ಕಾಮಿಡಿ ಜಾನರ್ ಸಿನಿಮಾವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada